‘ವಂದೇ ಮಾತರಂ’ಗೆ ಅಪಮಾನ – ವಾಲ್ಮೀಕಿ ನಿಗಮ ಹಗರಣದ ಆರೋಪಿಗೆ ಮತ್ತೆ ಮಂತ್ರಿಗಿರಿ ಲಜ್ಜೆಗೇಡಿತನ : ಪ್ರೊ. ಎಂ. ನಾಗರಾಜ್

0
8

​ಉಡುಪಿ: ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ ಅಧಿವೇಶನದಲ್ಲಿ ಕಲಾಪಗಳು ಸುಗಮವಾಗಿ ನಡೆಯದಂತೆ ಅಡ್ಡಿಪಡಿಸುವುದೇ ಕಾಂಗ್ರೆಸ್‌ನ ಮುಖ್ಯ ಅಜೆಂಡಾವಾಗಿತ್ತು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಪ್ರೊ. ಎಂ. ನಾಗರಾಜ್ ತೀವ್ರವಾಗಿ ವಾಗ್ದಾಳಿ ನಡೆಸಿದರು.

​ಉಡುಪಿಯ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

​ಕಲಾಪ ಹಳ್ಳಹಿಡಿಸಿದ ವಿಪಕ್ಷ:

ಜುಲೈ 20ರಿಂದ ಆಗಸ್ಟ್ 18ರ ವರೆಗೆ ನಡೆದ ಸಂಸತ್ ಅಧಿವೇಶನದ ಕಾರ್ಯವೈಖರಿ ಅತ್ಯಂತ ಶೋಚನೀಯವಾಗಿತ್ತು. ವಿರೋಧ ಪಕ್ಷಗಳ ಅನಗತ್ಯ ಗದ್ದಲ ಮತ್ತು ಅಸಹಕಾರದಿಂದಾಗಿ ರಾಜ್ಯಸಭೆಯಲ್ಲಿ ಕೇವಲ ಶೇ.39 ಹಾಗೂ ಲೋಕಸಭೆಯಲ್ಲಿ ಕೇವಲ ಶೇ.19ರಷ್ಟು ಮಾತ್ರ ಕಲಾಪ ನಡೆದಿದೆ. ಸದನದಲ್ಲಿ ಜನಪರ ಚರ್ಚೆಗಳು ನಡೆಯಬಾರದು ಎಂಬುದು ಕಾಂಗ್ರೆಸ್‌ನ ವಿಕೃತ ಮನಸ್ಥಿತಿಯನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ ಎಂದು ಅವರು ದೂರಿದರು.

​‘ವಂದೇ ಮಾತರಂ’ಗೆ ಕಾಂಗ್ರೆಸ್ ಅಪಮಾನ:

ಕಾಂಗ್ರೆಸ್ ಪಕ್ಷವು ರಾಷ್ಟ್ರಗೀತೆ ‘ವಂದೇ ಮಾತರಂ’ಗೂ ಸೂಕ್ತ ಗೌರವ ನೀಡುತ್ತಿಲ್ಲ. ಕೇವಲ ಎರಡು ಸಾಲುಗಳನ್ನು ಮಾತ್ರ ಹಾಡಬೇಕೆಂದು ನಿರ್ಣಯ ಕೈಗೊಳ್ಳುವ ಮೂಲಕ ದೇಶಭಕ್ತರ ತ್ಯಾಗ-ಬಲಿದಾನದ ಪ್ರತೀಕವಾದ ಗೀತೆಗೆ ಅಪಮಾನವೆಸಗಿದೆ. ದೇಶದ ಗೌರವಕ್ಕೆ ಧಕ್ಕೆ ತರುವ ಕಾಂಗ್ರೆಸ್‌ನ ಈ ನೀತಿಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.

​ವಾಲ್ಮೀಕಿ ನಿಗಮ ಲೂಟಿಕೋರನಿಗೆ ಮಂತ್ರಿಗಿರಿ:

ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಬಿ.ನಾಗೇಂದ್ರ ಅವರು ನೇರವಾಗಿ ಲೂಟಿ ಮಾಡಿರುವ ಆರೋಪವಿದ್ದರೂ, ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು ಕಾಂಗ್ರೆಸ್ ಸರ್ಕಾರದ ಲಜ್ಜೆಗೇಡಿತನಕ್ಕೆ ಸಾಕ್ಷಿ. ಭ್ರಷ್ಟರಿಗೆ ಮಣೆ ಹಾಕುತ್ತಿರುವ ಸರ್ಕಾರದ ಈ ನಿಲುವಿನ ವಿರುದ್ಧ ಬಿಜೆಪಿ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

​ದೇಶಾದ್ಯಂತ ‘ಸೇವಾ ಸಂಕಲ್ಪ ಅಭಿಯಾನ’:

ಪ್ರಧಾನಿ ನರೇಂದ್ರ ಮೋದಿ ಅವರ ಯಾವುದೇ ಕಪ್ಪುಚುಕ್ಕೆ ಇಲ್ಲದ ನಿರಂತರ 25 ವರ್ಷಗಳ ನಿಸ್ವಾರ್ಥ ಆಡಳಿತ ಹಾಗೂ ಜನಸೇವೆಯ ಸಾಧನೆಯನ್ನು ದೇಶದ ಯುವ ಸಮೂಹಕ್ಕೆ ತಲುಪಿಸುವ ಉದ್ದೇಶದಿಂದ ದೇಶಾದ್ಯಂತ ‘ಸೇವಾ ಸಂಕಲ್ಪ ಅಭಿಯಾನ’ವನ್ನು ಆಚರಿಸಲಾಗುವುದು ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷರುಗಳಾದ ಕೆ.ಉದಯ ಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ಶ್ರೀಕಾಂತ್ ನಾಯಕ್, ಜಿಲ್ಲಾ ವಕ್ತಾರರಾದ ದಿವಾಕರ ಶೆಟ್ಟಿ ಕಲ್ಯಾ, ಮಧುಕರ ಮುದ್ರಾಡಿ, ಮಾಧ್ಯಮ ಸಂಚಾಲಕ ಶಶಾಂಕ್ ಶಿವತ್ತಾಯ, ಪ್ರಮುಖರಾದ ರಾಜೇಶ್ ಕಾವೇರಿ, ಜಿಲ್ಲಾ ಕಾರ್ಯದರ್ಶಿಗಳಾದ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್ ಉಪಸ್ಥಿತರಿದ್ದರು.