ಪೆರ್ಡೂರು ಕುಲಾಲ ಸಂಘ 18ನೇ ವಾರ್ಷಿಕ ಮಹಾಸಭೆ : ವಿದ್ಯಾ ಪ್ರೋತ್ಸಾಹಧನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಸಂಪನ್ನ

0
12

ಪೆರ್ಡೂರು : ಕುಲಾಲ ಸಂಘ (ರಿ.), ಪೆರ್ಡೂರು ಇದರ 18ನೇ ವಾರ್ಷಿಕ ಮಹಾಸಭೆ, ವಿದ್ಯಾ ಪ್ರೋತ್ಸಾಹಧನ ವಿತರಣೆ ಹಾಗೂ ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ಶ್ರೀ ಬಿ. ಕಾಳು ಕುಲಾಲ್, ಪೆರ್ಡೂರು ಅವರ ಅಧ್ಯಕ್ಷತೆಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹೆಬ್ರಿ ವಲಯ ಅರಣ್ಯ ಅಧಿಕಾರಿ ಸಿದ್ದೇಶ್ವರ ಕುಂಬಾರ ಹಾಗೂ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರೇಖಾ ಪ್ರಭಾಕರ್ ಅವರು ಆಗಮಿಸಿದ್ದರು. ಗಣ್ಯ ಅತಿಥಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂಘದ ಸಮಾಜಮುಖಿ ಕಾರ್ಯಗಳು, ಶಿಕ್ಷಣಕ್ಕೆ ನೀಡುತ್ತಿರುವ ಪ್ರೋತ್ಸಾಹ ಹಾಗೂ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ (ನಿ.), ಪೆರ್ಡೂರು ಇದರ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಕ್ಕಾಲ್, ರಾಮ ಕುಲಾಲ್ ಪಕ್ಕಾಲ್, ಗೌರವ ಅಧ್ಯಕ್ಷರಾದ ಐತು ಕುಲಾಲ್ ಕನ್ಯಾನ, ಗೌರವ ಸಲಹೆಗಾರರಾದ ಕೃಷ್ಣಪ್ಪ ಕುಲಾಲ್ ಹಿರಿಯಡ್ಕ, ಮಹಿಳಾ ಘಟಕದ ಅಧ್ಯಕ್ಷರಾದ ರತ್ನ ಕುಲಾಲ್ ಮೇನ್ ಬೈಲ (ಕುಕ್ಕೆಹಳ್ಳಿ) ಹಾಗೂ ಸೇವಾದಳ ಪ್ರಮುಖರಾದ ಕೃಷ್ಣ ಕುಲಾಲ್ ದಳಪತಿ ಉಪಸ್ಥಿತರಿದ್ದರು.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಪ್ರತಿಭಾವಂತರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕೊಸಪ್ಪ ಕುಲಾಲ್ (ನಿವೃತ್ತ ಅರಣ್ಯ ಅಧಿಕಾರಿ, ವಾಂಟ್ಯಾಳ), ಪಾಪಣ್ಣ ಐರೋಡಿ (ಅಪಘಾತ ರಹಿತ ಚಾಲನಾ ಸಾರಥಿ), ಭೋಜ ಕುಲಾಲ್ ಪಡಪಳ್ಳಿ (ಪ್ರಗತಿಪರ ಕೃಷಿಕ), ಶೇಖರ್ ಕುಲಾಲ್ (ಪ್ರಗತಿಪರ ಹಿರಿಯ ಕೃಷಿಕರು, ಎಳ್ಳಾರೆ), ರಮೇಶ್ ಕುಲಾಲ್ (ನಿವೃತ್ತ ಯೋಧರು, ಭಾರತೀಯ ಸೇನೆ, ದೂಪದಕಟ್ಟೆ), ಡಾ. ರಶ್ಮಿ ಅಮ್ಮೆಂಬಳ (ಪಿಎಚ್.ಡಿ. ಪದವೀಧರರು, ಸಮುದಾಯ ಬಾನುಲಿ), ಶ್ರೀನಿವಾಸ್ ಕುಲಾಲ್ (ಪ್ರಗತಿಪರ ಹೈನುಗಾರರು ಹಾಗೂ ಯುವ ಕೃಷಿಕರು, ಆಯರಬೆಟ್ಟು) ಹಾಗೂ ಸಿ.ಎ. ಸಚಿನ್ ಕುಲಾಲ್ (ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದವರು, ಗುಡ್ಡೆಅಂಗಡಿ) ಅವರನ್ನು ಗೌರವಿಸಲಾಯಿತು.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರ ಸಾಧನೆಗೆ ಗೌರವ ಸಲ್ಲಿಸುವುದರ ಜೊತೆಗೆ, ಯುವ ಪೀಳಿಗೆಗೆ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಪ್ರೇರಣೆ ನೀಡಲಾಯಿತು.

ಮಹಾಸಭೆಯ ಕಾರ್ಯಕ್ರಮಕ್ಕೆ ಸಂಘದ ಸಂಘಟನಾ ಕಾರ್ಯದರ್ಶಿ ಶ್ರೀ ಕೃಷ್ಣ ಕುಲಾಲ್ ಕುಂಟಲ್ ಕಟ್ಟೆ ಅವರು ಸ್ವಾಗತ ಕೋರಿದರು. ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಕುಲಾಲ್ ಅವರು ವಾರ್ಷಿಕ ವರದಿ ಮಂಡಿಸಿ ಸಂಘದ ವಿವಿಧ ಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಸಂಘದ ಕೋಶಾಧಿಕಾರಿ ಹರೀಶ್ ಕುಲಾಲ್ ಹಂದಿಬೆಟ್ಟು ಅವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಮಹಾಸಭೆಯ ವಂದನಾರ್ಪಣೆಯನ್ನು ಸಂಘಟನಾ ಕಾರ್ಯದರ್ಶಿ ಸಂತೋಷ್ ಕುಲಾಲ್ ಕುಕ್ಕೆಹಳ್ಳಿ ನೆರವೇರಿಸಿದರು.

ವಿದ್ಯಾ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮದಲ್ಲಿ ಮಧುರ ಮಂಜುನಾಥ್ ನಾಯಕ್ ಮತ್ತು ಡಾ. ಆನಂದ್ ಕುಲಾಲ್ ಅವರ ದತ್ತಿ ನಿಧಿಯಿಂದ ಅವರ ಉಪಸ್ಥಿತಿಯಲ್ಲಿ ವಿದ್ಯಾ ಪುರಸ್ಕಾರ ನೀಡಲಾಯಿತು.

ಸಂಘದ ಉಪಾಧ್ಯಕ್ಷರಾದ ಯೋಗೇಶ್ ಕುಲಾಲ್ ಬೋಳುಗುಡ್ಡೆ ಅವರು ಸ್ವಾಗತಿಸಿದರು. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಸಂಘದ ವತಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾ ಪ್ರೋತ್ಸಾಹಧನವನ್ನು ವಿತರಿಸಲಾಯಿತು.

ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಈ ಕಾರ್ಯವು ಸಂಘದ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಯಿತು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜದ ಆಸ್ತಿಯಾಗಬೇಕು ಎಂಬ ಆಶಯದೊಂದಿಗೆ ಈ ಪ್ರೋತ್ಸಾಹಧನ ವಿತರಿಸಲಾಯಿತು. ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀ ಅಶೋಕ್ ಕುಲಾಲ್ ಕಂಚಿಗುಂಡಿ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಜೊತೆ ಕಾರ್ಯದರ್ಶಿಗಳಾದ ಅಶೋಕ್ ಕುಲಾಲ್ ವಾಂಟ್ಯಾಳ, ದಿನೇಶ್ ಕುಲಾಲ್ ಪೊಲ್ಯದೊಟ್ಟು, ಶಂಕರ್ ಕುಲಾಲ್ ಪೆರಂಪಳ್ಳಿ, ಕ್ರೀಡಾ ಕಾರ್ಯದರ್ಶಿ ದಿನೇಶ್ ಪಟ್ಲ, ಮಾಧ್ಯಮ ಕಾರ್ಯದರ್ಶಿ ಮಂಜುನಾಥ್ ಕುಲಾಲ್ ಕುಬ್ರಿ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು, ಸೇವಾದಳ ಪ್ರಮುಖರು ಹಾಗೂ ಮಹಿಳಾ ಘಟಕದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಸುಧಾಕರ್ ಕುಲಾಲ್ ಪಟ್ಲ ಹಾಗೂ ರಾಜೇಶ್ ಕುಲಾಲ್ ಅಂಬಾಗಿಲು ಮತ್ತು ಸುಪ್ರಿಯಾ . ಪೂರ್ಣಿಮಾ ಅಚ್ಚುಕಟ್ಟಾಗಿ ನಿರೂಪಿಸಿದರು.
ಶಿಕ್ಷಣಕ್ಕೆ ಪ್ರೋತ್ಸಾಹ, ಸಾಧಕರಿಗೆ ಗೌರವ ಹಾಗೂ ಸಮಾಜದ ಸಂಘಟನೆಯನ್ನು ಬಲಪಡಿಸುವ ಸಂದೇಶದೊಂದಿಗೆ ನಡೆದ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.