ಉಡುಪಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಸಡಗರ

0
4


ಉಡುಪಿ: ಶ್ರೀಕೃಷ್ಣ ಜಯಂತಿ ಪ್ರಯುಕ್ತ ಕೃಷ್ಣ ಮಠಕ್ಕೆ ಶುಕ್ರವಾರ ಬೆಳಗ್ಗಿನಿಂದಲೇ ರಾಜ್ಯ, ಹೊರರಾಜ್ಯಗಳಿಂದ ಭಕ್ತ ಜನಸಾಗರ ಹರಿದುಬಂದಿದ್ದು, ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಪರ್ಯಾಯ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಕೃಷ್ಣದೇವರಿಗೆ ಯಶೋದೆಕೃಷ್ಣನ ವಿಶೇಷ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಿದರು.
ಹೂವಿನ ಅಲಂಕಾರ
ಕೃಷ್ಣ ಮಠದ ಸುತ್ತಮುತ್ತ ವಿಶೇಷ ಹೂವಿನ ಅಲಂಕಾರ ನೆರವೇರಿಸಲಾಗಿದೆ. ಗರ್ಭಗುಡಿ, ಮಠದ ಸುತ್ತುಪೌಳಿ, ಚಂದ್ರಶಾಲೆ, ತೀರ್ಥ ಮಂಟಪ, ಮಧ್ವಮಂಟಪ, ಸುಬ್ರಹ್ಮಣ್ಯ ಗುಡಿ, ನವಗ್ರಹಗುಡಿ ಮೊದಲಾದೆಡೆ ಸೇವಂತಿಗೆ, ಚೆಂಡು ಹೂ, ಕನಕಾಂಬರ, ತುಳಸಿ, ಅಬ್ಬಲ್ಲಿಗೆ ಹೂವಿನ ಅಲಂಕಾರ ನೋಡುಗರ ಕಣ್ಮನ ಸೆಳೆಯುತ್ತಿದೆ.

ಮುದ್ದುಕೃಷ್ಣರ ಕಲರವ
ಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ ಕೃಷ್ಣವೇಷ ಸ್ಪರ್ಧೆ. ಬೆಳಗ್ಗೆಯಿಂದ ಮಠದ ಪರಿಸರದಲ್ಲಿ ಕೃಷ್ಣ ವೇಷಧಾರಿ ಪುಟಾಣಿಗಳ ಕಲರವ ಮನಸೂರೆಗೊಳ್ಳುತ್ತಿತ್ತು. ಮಧ್ವಮಂಟಪದಲ್ಲಿ 1 ವರ್ಷದೊಳಗಿನ ಮಕ್ಕಳಿಗೆ ಬೆಣ್ಣೆಕೃಷ್ಣ ಸ್ಪರ್ಧೆ, ರಾಜಾಂಗಣದಲ್ಲಿ 1 ರಿಂದ 3 ವರ್ಷ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ, 3 ರಿಂದ 5 ವರ್ಷ ಮಕ್ಕಳಿಗೆ ಅನ್ನಬ್ರಹ್ಮದಲ್ಲಿ ಬಾಲಕೃಷ್ಣ ಸ್ಪರ್ಧೆ, 5 ರಿಂದ 8 ವರ್ಷ ಮಕ್ಕಳಿಗೆ ಅನ್ನಧರ್ಮದಲ್ಲಿ ಕಿಶೋರಕೃಷ್ಣ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಕೃಷ್ಣ ಪ್ರಸಾದ ವಿತರಿಸಲಾಯಿತು.

ವೇಷಗಳ ಮೆರುಗು
ಶ್ರೀಕೃಷ್ಣಮಠ ರಥಬೀದಿ ಸೇರಿದಂತೆ ನಗರದಲ್ಲೆಡೆ ಹುಲಿವೇಷ, ಬಾಲಕೃಷ್ಣ, ರಕ್ಕಸ ಸೇರಿದಂತೆ ನಾನಾಬಗೆಯ ವೇಷಧಾರಿಗಳು ತಿರುಗಾಟ ನಡೆಸುತ್ತಿದ್ದು, ನಗರದ ಬೀದಿಗಳಲ್ಲಿ ಪ್ರಮುಖ ಹುಲಿವೇಷ ತಂಡಗಳು, ಯಗಾನದ ವಿವಿಧ ವೇಷಗಳು, ರಕ್ಕಸ ವೇಷಗಳು, ಟ್ಯಾಬ್ಲೋ ತಂಡಗಳು ಎಲ್ಲೆಡೆ ಕಾಣಸಿಗುತ್ತಿವೆ. ಅಂಗಡಿ, ಮುಂಗಟ್ಟು, ಹೊಟೆಲ್​ಗಳಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದಾರೆ. ಯುವಕ-ಯುವತಿಯರು ತಾಸೆ ಸದ್ದಿಗೆ ಕುಣಿದು ಸಂಭ್ರಮಿಸಿದರು.

ಪೊಲೀಸ್​ ಬಿಗಿಭದ್ರತೆ
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿಯ ರಥಬೀದಿ, ಕೃಷ್ಣ ಮಠ ಪರಿಸರ ಮತ್ತು ನಗರದಲ್ಲಿ ಹೆಚ್ಚುವರಿ ಪೊಲೀಸ್​ ಭದ್ರತೆಯನ್ನು ಒದಗಿಸಲಾಗಿದೆ. ರಥಬೀದಿಯಲ್ಲಿ ಜನಜಂಗುಳಿ ನಿಯಂತ್ರಣಕ್ಕಾಗಿ ಬೀದಿವ್ಯಾಪಾರಿಗಳನ್ನು ತೆರವು ಮಾಡಲಾಗಿತ್ತು. ಹೊರಠಾಣೆಯಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದ್ದು, ಸಿಸಿಟಿವಿ ಕಣ್ಗಾವಲಿರಿಸಲಾಗಿದೆ. ರಥಬೀದಿಯನ್ನು ಸಂಪರ್ಕಿಸುವ 8 ಗೇಟುಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರ ಮೇಲೆ ನಿಗಾ ಇಡಲಾಗಿದೆ.