ಮಂಗಳೂರು: ಅಪಘಾತ ಪ್ರಕರಣದ ಕಾರು ಬಿಡುಗಡೆಗೊಳಿಸಲು ರೂ. 5000 ಲಂಚ ಪಡೆಯುತ್ತಿದ್ದ ವೇಳೆ ಕದ್ರಿ ಠಾಣೆಯ ಸಂಚಾರಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಾರು ಮಾಲೀಕರು ಮತ್ತು ಪೊಲೀಸ್ ನಡುವೆ ಹಲವು ದಿನಗಳ ಕಾಲ ನಡೆದ ಲಂಚದ ಚೌಕಾಸಿ ಇಂದು ಲೋಕಾಯುಕ್ತ ಹೆಣೆದ ಬಲೆಗೆ ಬೀಳುವುದರ ಮೂಲಕ ಅಂತ್ಯವಾಗಿದೆ. ಕಾರು ಮತ್ತು ಸ್ಕೂಟರ್ ಮದ್ಯೆ ನಂತೂರು ಸರ್ಕಲ್ನಲ್ಲಿ ಅಪಘಾತ ಆಗಿದ್ದು, ಈ ಕುರಿತು ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ತಸ್ಲಿಂ ಕಾರಿನ ದಾಖಲೆಗಳನ್ನು ಪೊಲೀಸ್ ಠಾಣೆಗೆ ತಂದು ಕೊಡುವಂತೆ ಕಾರು ಮಾಲೀಕರಿಗೆ ತಿಳಿಸಿದ್ದರು. ಅದರಂತೆ ಕಾರು ಮತ್ತು ಕಾರಿನ ದಾಖಲೆಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.
ಆದರೂ ಬಿಡುಗಡೆಗೊಳಿಸಲು ಹಿಂದೇಟು ಹಾಕಿದ್ದ ಹೆಡ್ ಕಾನ್ಸ್ಟೇಬಲ್ ಕಾರು ಮ್ತತು ವಶಪಡಿಸಿಕೊಂಡಿದ್ದ ಮೊಬೈಲ್ ವಾಪಾಸು ನೀಡಲು ತಸ್ಲಿಂ 50,000 ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ದೂರುದಾರರು ತನ್ನ ವಕೀಲರಲ್ಲಿ ವಿಷಯವನ್ನು ತಿಳಿಸಿದ್ದು,, ವಕೀಲರು ಖುದ್ದು ಠಾಣೆಗೆ ಭೇಟಿ ನೀಡಿ ಕಾರನ್ನು ಬಿಟ್ಟುಕೊಡುವಂತೆ ಕೇಳಿಕೊಂಡರೂ ಈ ಖತರ್ ನಾಕ್ ಪೊಲೀಸ್ ಬಿಟ್ಟುಕೊಡಲೇ ಇಲ್ಲ. ಬದಲಾಗಿ ಕಾರು ಬಿಟ್ಟುಕೊಡುತ್ತೇನೆ ಎಂದು ವಕೀಲರ ಮುಂದೆಯೇ ಕಾಗದ ಪತ್ರಗಳಿಗೆ ಸಹಿ ಹಾಕಿಸಿ ಕಾರನ್ನು ಪೊಲೀಸ್ ಠಾಣೆಯಿಂದ ಬಿಟ್ಟುಕೊಡಲೇ ಇಲ್ಲ. ಬಳಿಕ ಹಲವು ಬಾರಿ ಮನವಿಯ ಬಳಿಕ ಕಾರನ್ನು ಬಿಟ್ಟುಕೊಡಲು ಒಪ್ಪಿ ದರೂ ಕಾರು ಮಾಲೀಕರ ಮೊಬೈಲನ್ನು ಬಲವಂತದಿಂದ ಪಡೆದುಕೊಂಡ ತಸ್ಲೀಮ್ ತನ್ನ ಬಳಿ ಇಟ್ಟುಕೊಂಡಿದ್ದರು.
ಮೊಬೈಲ್ ಪೋನ್ ವಾಪಸ್ ಕೊಡಿ ಎಂದು ಪರಿಪರಿಯಾಗಿ ಕೇಳಿಕೊಂಡಾಗ 50,000 ಕೊಟ್ಟರೆ ಮಾತ್ರ ವಾಪಸ್ ಕೊಡುವುದಾಗಿ ಹೇಳಿದರು. ಇದಾದ ಬಳಿಕ ಹಣದ ಬೇಡಿಕೆ ಪ್ರಮಾಣವು ಚೌಕಾಸಿ ರೂಪದಲ್ಲಿ ಇಳಿಯುತ್ತಾ ಬಂದಿತ್ತು. ಈ ಮಧ್ಯೆ ಕಾರ್ ಮಾಲೀಕರು ಈ ಕುರಿತು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದರು. ಜುಲೈ 10 ರಂದು ಪೊಲೀಸ್ ತಸ್ಲೀಮ್ 5000 ರೂಪಾಯಿ ಲಂಚ ಸ್ಪೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಅಧೀಕ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಡಿ ವೈ ಎಸ್ ಪಿ. ಗಾನ ಪಿ ಕುಮಾರ್, ಸುರೇಶ್ ಕುಮಾರ್.ಪಿ, ಪೊಲೀಸ್ ಇನ್ಸ್ಪೆಕ್ಟರ್ ಭಾರತಿ ಜಿ, ಶ್ರೀ ಚಂದ್ರಶೇಖರ್ ಕೆ.ಎನ್. ಕಾರ್ಯಾಚರಣೆ ನಡೆಸಿದ್ದರು.