ಮೂಡುಬಿದಿರೆ: ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಸುಮಾರು ಮೂರು ಕೋಟಿ ವೆಚ್ಚದಲ್ಲಿ ಅನುಷ್ಠಾನಕ್ಕೆ ತಂದಿರುವ ವಿವಿಧ ಕಾಮಗಾರಿಗಳಿಗೆ, ಪುರಸಭಾ ಕಟ್ಟಡದ ಲಿಫ್ಟ್ ಇತ್ಯಾದಿಗಳ ಉದ್ಘಾಟನೆ ದೀಪ ಬೆಳಗಿ ಶಾಸಕ ಉಮಾನಾಥ ಕೋಟ್ಯಾನ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಶಾಸಕರು, ಹಿರಿಯರು, ಅಂಗವಿಕಲರ ಸಹಾಯಕ್ಕಾಗಿ ಉತ್ತಮ ಕಂಪೆನಿಯ ಲಿಫ್ಟ್ ಅಳವಡಿಸಿದೆ. ಸರಕಾರದ 10 ಕೋಟಿ ಅನುದಾನಕ್ಕೆ ಕಾಯಲಾಗುತ್ತಿದೆ ಎಂದರು. ಉಪಾಧ್ಯಕ್ಷ ನಾಗರಾಜ ಪೂಜಾರಿ ಮಾತನಾಡಿ ಪುರಸಭೆಗೆ ಶಾಶ್ವತ ಇಂಜಿನಿಯರ್ ಸಿಗುವಂತಾಗಬೇಕು ಅದರಿಂದ ಇನ್ನೂ ಶೀಘ್ರ ಕೆಲಸ ಕಾರ್ಯ ಸಾದ್ಯ ಎಂದು ಶಾಸಕ ರಲ್ಲಿ ಬೇಡಿಕೆ ಇಟ್ಟರು. ಅಧ್ಯಕ್ಷತೆ ವಹಿಸಿದ್ದ ಜಯಶ್ರೀ ಎಲ್ಲರ ಸಹಕಾರ ಅಭಿನಂದನೀಯ ಎಂದರು.
ಸ್ವಚ್ಛ ಭಾರತ್ ಅಭಿಯಾನ ಯೋಜನೆಯಡಿಯ ಸ್ಪರ್ಧೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಥಮ ಸ್ಥಾನವನ್ನು, ಕೋರ್ಟ್ ದ್ವಿತೀಯ ಸ್ಥಾನ ಪಡೆದು ಶಾಸಕರಿಂದ ಪ್ರಶಸ್ತಿ ಪತ್ರವನ್ನು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಪುರಸಭಾ ಪ್ರದೇಶದಲ್ಲಿ ಅಳವಡಿಸಿದ ಸಿ.ಸಿ.ಟಿವಿ ಸಂಪರ್ಕದ ವೀಕ್ಷಣೆಯ ಉದ್ಘಾಟನೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ನೆರವೇರಿಸಿ ಇನ್ನು ಮುಂದೆ ಪರಿಸರ ದೂಷಕರನ್ನು ಶಿಕ್ಷಿಸಿ ನಗರದ ಸೌಂದರ್ಯವನ್ನು ರಕ್ಷಿಸಲು ಇದರಿಂದ ಸಾಧ್ಯವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಾಧಿಕಾರಿ ಇಂದು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ವರದಿ: ರಾಯಿ ರಾಜಕುಮಾರ ಮೂಡುಬಿದಿರೆ