ಮುಲ್ಕಿ: ಕಿನ್ನಿಗೋಳಿ-ಮುಲ್ಕಿ ರಾಜ್ಯ ಹೆದ್ದಾರಿಯ ಕೆರೆಕಾಡು ಜಂಕ್ಷನ್ ಬಳಿ ಕಾರುಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಮಗು ಸಹಿತ ಮೂವರಿಗೆ ಗಂಭೀರ ಗಾಯಗಳಾಗಿದ್ದು ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ
ಗಾಯಗೊಂಡವರನ್ನು ಕುಂದಾಪುರ ತೆಕ್ಕಟ್ಟೆ ನಿವಾಸಿಗಳಾದ ನಿತಿಲ್ (25), ಅವಿನಾಶ್ (23), ಮಗು ಮೃತ್ವಿನ್ (2) ಎಂದು ಗುರುತಿಸಲಾಗಿದ್ದು ಇನ್ನೊಂದು ಕಾರಿನಲ್ಲಿದ್ದ ಮುಲ್ಕಿ ಮೂಲದ ಮೂವರು ಯುವಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾಲಾಗಿದ್ದಾರೆ.
ಕಟೀಲು ಕಡೆಯಿಂದ ದೇವರ ದರ್ಶನ ಮುಗಿಸಿಕೊಂಡು ಕುಂದಾಪುರದ ಕಡೆಗೆ ಹೊರಟಿದ್ದ ಕಾರು ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆರೆಕಾಡು ತಲುಪುತ್ತಿದ್ದಂತೆ ಮುಲ್ಕಿ ಕಡೆಯಿಂದ ಅತಿ ವೇಗದಿಂದ ಬಂದ ಕಾರು ಹೆದ್ದಾರಿಯ ಹೊಂಡ ತಪ್ಪಿಸುವ ಬರದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ಎರಡು ಕಾರುಗಳು ಪಲ್ಟಿಯಾಗಿದ್ದು, ಕಾರಿನಲ್ಲಿ ಸಿಲುಕಿಕೊಂಡವರನ್ನು ತೆಗೆಯಲು ಸ್ಥಳೀಯರು ಪ್ರಯಾಸ ಪಟ್ಟು ಕಿನ್ನಿಗೋಳಿ ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದಿಂದ ಎರಡು ಕಾರುಗಳು ಜಖಂಗೊಂಡಿದ್ದು ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ವ್ಯತ್ಯಯ ಉಂಟಾಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಭೇಟಿ ನೀಡಿ ಪರಿಶೀಲಿಸಿ ಎರಡು ವಾಹನಗಳನ್ನು ಸ್ಥಳದಿಂದ ಕ್ರೇನ್ ಮೂಲಕ ತೆರವುಗೊಳಿಸಲಾಗಿದೆ. ಅಪಘಾತದ ಭೀಕರ ದೃಶ್ಯ ಸ್ಥಳೀಯ ಹಾರ್ಡ್ವೇರ್ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ
ಈ ಭಾಗದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕಳೆದ ಹಲವಾರು ವರ್ಷಗಳಿಂದ ಮಳೆಗಾಲದಲ್ಲಿ ಭಾರಿ ಗಾತ್ರದ ಹೊಂಡಗಳು ಉಂಟಾಗಿದ್ದು ಕೇವಲ ತೇಪೆ ಕಾಮಗಾರಿ ನಡೆಸಿದ್ದು ಮಳೆಗೆ ಡಾಮರೀಕರಣ ಕಾಮಗಾರಿ ನೀರುಪಾಲಾಗಿದೆ, ಲೋಕೋಪಯೋಗಿ ಇಲಾಖೆ ನಿರ್ಲಕ್ಷದಿಂದ ಅನೇಕ ಅಪಘಾತಗಳು ನಡೆದಿದ್ದರೂ ಇಲಾಖೆ ನಿದ್ರಾವಸ್ಥೆಯಲ್ಲಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.