ಲಿಂಕ್‌ ಕಳಿಸಿ ಬಿಜೂರು ಅರ್ಚಕರಿಂದ ರೂ. 6.16 ಲಕ್ಷ ಲಪಟಾಯಿಸಿದ ಆನ್‌ ಲೈನ್ ವಂಚಕರು!

0
273

ಉಪ್ಪುಂದ: ಹೊಟೇಲ್‌ಗೆ ರೇಟಿಂಗ್‌ ಕೊಟ್ಟು ಹಣ ಗಳಿಸಿ ಎಂಬ ಸಂದೇಶವನ್ನು ನಂಬಿ ಲಿಂಕ್‌ ತೆರೆದ ವ್ಯಕ್ತಿಯೊಬ್ಬರು 6.16 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ.
ಬೈಂದೂರು ತಾಲೂಕಿನ ಬಿಜೂರು ಕಿರಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಗುರುಮೂರ್ತಿ ಜಿ. ಹೆಗಡೆ ಅವರು ಆನ್‌ಲೈನ್‌ ವಂಚನೆಗೆ ಒಳಗಾದವರು. ಅವರ ಮೊಬೈಲ್‌ಗೆ ನ್ಯಾಶನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಎಂಬ ಲಿಂಕ್‌ ಬಂದಿದ್ದು , ಅದನ್ನು ತೆರೆದಾಗ ಅದರಲ್ಲಿ ಹೊಟೇಲ್‌ಗೆ ರೇಟಿಂಗ್‌ ಕೊಟ್ಟು ಹಣ ಗಳಿಸಬಹುದು ಎಂದು ತಿಳಿಸಿದರು. ಅದರಂತೆ ಅರ್ಚಕರು ಪತ್ನಿಯ ಬ್ಯಾಂಕ್‌ ಖಾತೆಯಿಂದ 1,44,000 ರೂ.ಗಳನ್ನು ಕಳಿಸಿದ್ದರು. ಟಾಸ್ಕ್ ಪಾಯಿಂಟ್‌ ಶೇ. 90ರಷ್ಟು ಆಗಿದ್ದು ಶೇ. 100ರಷ್ಟು ಪಾಯಿಂಟ್‌ ಮಾಡಿದರೆ ಮಾತ್ರ ಹಾಕಿದ ಹಣ ಮರುಪಾವತಿ ಆಗುತ್ತದೆ ಎಂದು ವಂಚಕರು ತಿಳಿಸಿದರು. ಅದರಂತೆ ಅರ್ಚಕರು ರಮೇಶ ಎಂಬವರ ಖಾತೆಯಿಂದ ಸೆ. 2ರಂದು 2,72,700 ರೂ. ಕಳುಹಿಸಿದರು. ಅನಂತರ ನಿಮ್ಮಅಕೌಂಟ್‌ ಫ್ರೀಜ್‌ ಆಗಿದ್ದು ಇನ್ನಷ್ಟು ಹಣ ಹಾಕಿದರೆ ಮಾತ್ರ ಅನ್‌ಫ್ರೀಜ್‌ ಆಗುತ್ತದೆ ಎಂದು ಹೆದರಿಸಿದರು. ಬಳಿಕ ಕ್ರಮವಾಗಿ 1,45,000 ರೂ. ಮತ್ತು 55,000 ರೂ. ಕಳುಹಿಸಿದರು. ಮತ್ತೆ ಮತ್ತೆ ಹಣ ಹಾಕುವಂತೆ ತಿಳಿಸಿದಾಗ ತಾನು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದ್ದು ಅಷ್ಟರಲ್ಲಿ ಒಟ್ಟು 6,16,700 ರೂ. ಕಳೆದುಕೊಂಡಿದ್ದರು. ಈ ಕುರಿತು ಬೈಂದೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here