ವೃತ್ತಿ ನಿರ್ಮಾಣಕ್ಕೆ ಎಐ ಪಠ್ಯಕ್ರಮ ಶಕ್ತಿಶಾಲಿ ಮಾಧ್ಯಮ: ಗಿರೀಶ್ ಕೆ.ಎಚ್.
ಮೂಡುಬಿದಿರೆ: ವಜ್ರ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿರುವ ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ಮಣಿಪಾಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪ್ರೌಢಶಾಲೆ ಮತ್ತು ಪ.ಪೂ. ಅಧ್ಯಾಪಕರಿಗೆ ಎಐ ಕಾರ್ಯಾಗಾರ ನಡೆಯಿತು.
ವೇಣೂರು ನಿಟ್ಟಡೆ ಕುಂಭಶ್ರೀ ವಿದ್ಯಾಸಂಸ್ಥೆಯ ಸಂಚಾಲಕ ಗಿರೀಶ್ ಕೆ.ಎಚ್. ಅವರು ಕಾರ್ಯಕ್ರಮ ಉದ್ಘಾಟಿಸಿ, ಇಂದಿನ ದಿನಗಳಲ್ಲಿ ವೃತ್ತಿ ನಿರ್ಮಾಣಕ್ಕೆ ಎಐ ಪಠ್ಯಕ್ರಮವು ಶಕ್ತಿಶಾಲಿಯಾಗಿದೆ. ಇದು ಜ್ಞಾನ ಮತ್ತು ಅನುಭವ ಎರಡನ್ನೂ ಪಡೆಯಲು ಸಹಾಯ ಮಾಡುತ್ತದೆ. ಎಲ್ಲಾ ಅಧ್ಯಾಪಕರು ಆಧುನಿಕ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡು ನಿಮ್ಮ ವಿದ್ಯಾರ್ಥಿಗಳಿಗೆ ಎಐ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಮಹಾವೀರ ಕಾಲೇಜು ಆಯೋಜಿಸಿರುವ ಈ ಅಭೂತಪೂರ್ವ ಕಾರ್ಯಾಗಾರ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

ಈ ಕಾರ್ಯಕ್ರಮಕ್ಕೆ ಶಶಿಧರ, ಉಪ ನಿರ್ದೇಶಕರು, ಶಾಲಾ ಶಿಕ್ಷಣ (DDPI), ದಕ್ಷಿಣ ಕನ್ನಡ, ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ “ಗ್ರಾಮೀಣ ಮಕ್ಕಳಿಗೆ ವಿಐ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಬೇಕು, ಜಗತ್ತು ಬದಲಾಗುತ್ತಿದೆ ಸರಳವಾಗಿ ತಾಂತ್ರಿಕವಾಗಿ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ನವೀಕರಣಗೊಳ್ಳಬೇಕು ಆದ್ದರಿಂದ ನಾವು ಮಹಾವೀರ ಕಾಲೇಜಿನ ಜೊತೆಗೂಡಿ ಕಾರ್ಯನಿರ್ವಹಿಸಿದ್ದೇವೆ’ ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾದ ಪ್ರೊ. ಚಂದ್ರು ಎಂ. ಎನ್, ಪ್ರಾಂಶುಪಾಲರು, ಜಿ.ಪಿ.ಯು.ಸಿ, ತೆಂಕಮಿಜಾರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ “ಎಲ್ಲಾ ಅಧ್ಯಾಪಕರು, ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನಗಳಿಗೆ ಹೊಂದಿಕೊಳ್ಳಬೇಕು, ಶಿಕ್ಷಕರು ನವೀಕರಣಗೊಂಡಾಗ ಮಾತ್ರ ವಿದ್ಯಾರ್ಥಿಗಳನ್ನು ಒಳ್ಳೆಯ ಸಂಪನ್ಮೂಲ ವ್ಯಕ್ತಿಗಳನ್ನಾಗಿ ರೂಪಿಸಬಹುದು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮೋಹನದಾಸ್ ಶೆಣೈ, ಮಣಿಪಾಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಲಜಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷ್ಮಿ, ಕಾರ್ಯಕ್ರಮ ಸಂಯೋಜಕಿ ಗಣಕ ಶಾಸ್ತ್ರ ಉಪನ್ಯಾಸಕಿ ಕೀರ್ತಲಾ, ವಿಭಾಗ ಮುಖ್ಯಸ್ಥ ಸಂದೀಪ್, ಕೋಡಿಂಗ್ ಕ್ಲಬ್ ವಿದ್ಯಾರ್ಥಿ ಪ್ರತಿನಿಧಿ ಕುಶಾಗ್ರ, ಹಾಗೂ ವಿವಿಧ ಪ್ರೌಢಶಾಲೆಯ ಅಧ್ಯಾಪಕರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಸ್ವಾಗತಿಸಿ, ಗಣಕ ಶಾಸ್ತ್ರ ಉಪನ್ಯಾಸಕಿ ಕೀರ್ತಲಾ ವಂದಿಸಿದರು. ಕಾರ್ಯಕ್ರಮವನ್ನು ಪ್ರತಿಷ್ಠ ತೃತೀಯ ಬಿ.ಸಿ.ಎ ನಿರೂಪಿಸಿದರು.

