70 ನೇ ಕನ್ನಡ ರಾಜ್ಯೋತ್ಸವ ಆಚರಣೆಯ ಸಮಾರಂಭದ ಪ್ರಯುಕ್ತ ಹೆಬ್ರಿಯ ಹಿರಿಯ ನಾಗರೀಕರಾದ ಶ್ರೀ ಕೆ ಗಂಗಾಧರ ರಾವ್ ಇವರ ಪ್ರಾಯೋಜಕತ್ವದಲ್ಲಿ ತನ್ನ ಗೆಳೆಯರೊಂದಿಗೆ ನಿವೃತ್ತ ಸರ್ಕಾರಿ ನೌಕರರಾದ ಶ್ರೀಮತಿ ರಾಧಾ (ವಸತಿ ನಿಲಯದ ಅಡುಗೆಯವರು), ಶ್ರೀಮತಿ ನಂದಿನಿ (ಡಿ ದರ್ಜೆ ನೌಕರರು), ಶ್ರೀ ಓಬಯ್ಯ (ಪರಿಚಾರಕರು) ಮತ್ತು ಶ್ರೀ ಪ್ರಸಾದ್ ಕೆ (ದ್ವಿತೀಯ ದರ್ಜೆ ಸಹಾಯಕರು) ಇವರ ಪ್ರಾಮಾಣಿಕ ಸೇವೆ, ಸಮಯ ಪರಿಪಾಲನೆ ಮತ್ತು ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನು ಶ್ರೀಮತಿ ರಾಧಾ ಇವರು ವಾಸವಾಗಿರುವ ಮಿಯ್ಯಾರು ಗ್ರಾಮದ ನಿಸರ್ಗ ಎಂಬಲ್ಲಿ ಹಮ್ಮಿಕೊಳ್ಳಲಾಗಿತ್ತು. ಶ್ರೀ ಕೆ ಗಂಗಾಧರ ರಾವ್ ಇವರ ಧ್ವನಿಯಲ್ಲಿ ಕನ್ನಡದ ಕುಲದೇವಿ ಕಾಪಾಡು ಬಾ ತಾಯೇ ಎಂಬ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭಿಸಿ ಸನ್ಮಾನಿತರ ಕಿರುಪರಿಚಯವನ್ನು ಮಾಡಿಕೊಟ್ಟರು. ಬಳಿಕ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀಮತಿ ಮನಿಷಾ ಕಾಮತ್ (ಯೋಗ ತರಬೇತುದಾರರು), ಕು. ಪ್ರೇರಣಾ, ಶ್ರೀ ಕೆ ಭಾಸ್ಕರ ರಾವ್, ಶ್ರೀ ಗಣಪತಿ ಕಿಣಿ, ಶ್ರೀ ಜಯರಾಮ ಶೆಟ್ಟಿ ಮತ್ತು ಶ್ರೀ ಕೆ ಗಂಗಾಧರ ರಾವ್ ಇವರು ಪಾಲ್ಗೊಂಡಿದ್ದರು. ಸನ್ಮಾನಿತರ ಕುಟುಂಬ ಸದಸ್ಯರು ಭಾಗವಹಿಸಿದ್ದರು. ಶ್ರೀ ಲಕ್ಷ್ಮಣ ಬಿ ಇವರು ಹಾಡಿದ ಭಾವಗೀತೆಯು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗನ್ನು ತಂದುಕೊಟ್ಟಿತ್ತು. ಅಚ್ಚುಕಟ್ಟಾದ ಅರ್ಥಪೂರ್ಣವಾದ ಸರಳ ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಸಂಪನ್ನಗೊಂಡಿತು.

