ಉಡುಪಿಯ ವಡಭಾಂಡೇಶ್ವರ ಶ್ರೀ ಬಲರಾಮ ದೇವಸ್ಥಾನದಲ್ಲಿ ವಾರ್ಷಿಕ ಲಕ್ಷ ದೀಪೋತ್ಸವವು ಅತ್ಯಂತ ವೈಭವದಿಂದ ನಡೆಯಿತು. ಈ ಸಂಬಂಧ ದೇವಾಲಯವನ್ನು ಹಾಗೂ ದೇವರನ್ನು ವಿಶೇಷವಾಗಿ ಹೂವಿನಿಂದ ಅಲಂಕಾರವನ್ನು ಮಾಡಲಾಗಿತ್ತು. ತೀರ್ಥ ಮಂಟಪದಲ್ಲಿ ದೇವರಿಗೆ ಆರತಿಯನ್ನು ಬೆಳಗುವುದರ ಮೂಲಕ ದೀಪೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು. ನಂತರ ದೇವಾಲಯದ ಸುತ್ತಲೂ ದೀಪಗಳನ್ನು ಬೆಳಗಿ, ವಾದ್ಯ ಸೇವೆಯೊಂದಿಗೆ ನರ್ತನ ಬಲಿ ಹಾಗೂ ದೇವಾಲಯದ ಪುಷ್ಕರಣಿಯಲ್ಲಿ ವೈಭವದ ತೆಪ್ಪೋತ್ಸವವು ನಡೆಯಿತು. ನಂತರ ಆಕರ್ಷಕ ಸುಡುಮದ್ದು ಪ್ರದರ್ಶನ ಹಾಗೂ ಓಲಗ ಮಂಟಪ ಪೂಜೆಯು ನಡೆಯಿತು. ದೇವಾಲಯದ ಆಡಳಿತ ಮುಖ್ಯಸ್ಥರಾದ ಶ್ರೀನಿವಾಸ ಭಟ್, ಶ್ರೀಶಾಚಾರ್ಯ ಕಡೆಕಾರ್, ಶ್ರೀವರ ಕಡೆಕಾರ್, ಶಶಿಧರ್ ಅಮೀನ್ ಹಾಗೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

