ಮಡಿಕೇರಿ: ಕೊಡಗಿನ ಬಿ. ಶೆಟ್ಟಿಗೇರಿ ಬಳಿಯ ಕೊಂಗಣ ಗ್ರಾಮದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ನಾಪತ್ತೆಯಾಗಿದ್ದ 2 ವರ್ಷದ ಮಗುವನ್ನ ಶ್ವಾನವೇ ಹುಡುಕಿ ಕೊಟ್ಟಿದೆ. ಕಾಫಿ ಕೊಯ್ದು ಹಿನ್ನೆಲೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ ಕಾರ್ಮಿಕ ದಂಪತಿ ಸುನಿಲ್ ಮತ್ತು ನಾಗಿಣಿ ತಮ್ಮ ಇಬ್ಬರು ಮಕ್ಕಳನ್ನು ಜತೆಯಲ್ಲಿಯೇ ಕರೆದೊಯ್ದಿದ್ದರು. ಕಾಫಿ ತೋಟದಲ್ಲಿ ಕೆಲಸದಲ್ಲಿ ನಿರತರಾಗಿದ್ದ ಅವರು ಸಂಜೆ ವೇಳೆ ಗಮನಿಸಿದಾಗ ಇಬ್ಬರು ಮಕ್ಕಳ ಪೈಕಿ 2 ವರ್ಷದ ಮಗು ಸುಕನ್ಯಾ ನಾಪತ್ತೆಯಾಗಿರೋದು ಗೊತ್ತಾಗಿದೆ. ಮಗಳಿಗಾಗಿ ಒಂದಿಷ್ಟು ಹುಡುಕಾಡಿದ್ದಾರೆ. ಅದರೆ ಮಗು ಪತ್ತೆಯಾಗದ ಕಾರಣ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮುಟ್ಟಿಸಿದ್ದಾರೆ. ತಕ್ಷಣ ಅವರೂ ಕೂಡ ಸ್ಥಳಕ್ಕೆ ಬಂದಿದ್ದು, ಸುಕನ್ಯಾಗಾಗಿ ಕಾಫಿ ತೋಟದ ತುಂಬ ಜಾಲಾಡಿದ್ದಾರೆ. ಆದರೆ, ಮಧ್ಯರಾತ್ರಿವರೆಗೆ ಹುಡುಕಿದರೂ ಮಗು ಪತ್ತೆಯಾಗಿರಲಿಲ್ಲ. ಬಳಿಕ ಅನಿಲ್ ಎಂಬವರ ಶ್ವಾನಗಳನ್ನು ಮಗುವಿನ ಶೋಧ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗಿತ್ತು. ಈ ವೇಳೆ ಆ ನಾಯಿಗಳ ಪೈಕಿ ಓರಿಯೋ ಶ್ವಾನ ಸುಕನ್ಯಾಳನ್ನು ಪತ್ತೆ ಮಾಡಿದೆ. ಕಾಫಿ ತೋಟದ ಎತ್ತರದ ಪ್ರದೇಶದಲ್ಲಿ ಮಗುವನ್ನು ನೋಡಿ ಓರಿಯೋ ಶ್ವಾನ ಬೊಗಳಲು ಆರಂಭಿಸಿದೆ. ಹೀಗಾಗಿ ಆ ಭಾಗದಲ್ಲಿ ನೋಡಿದಾಗ ಸುಕನ್ಯಾ ಪತ್ತೆಯಾಗಿದ್ದಾಳೆ. ದಟ್ಟ ಕಾರ್ಗತ್ತಲಿನಲ್ಲೇ ಒಂದು ದಿನ ಕಳೆದಿದ್ದ ಮಗು ಸುರಕ್ಷಿತವಾಗಿ ಮನೆಗೆ ಮರಳಿದೆ. ಮಗಳ ನಾಪತ್ತೆಯಿಂದ ಕಂಗಾಲಾಗಿದ್ದ ಸುನಿಲ್ ಮತ್ತು ನಾಗಿಣಿ ದಂಪತಿ ನಿಟ್ಟುಸಿರು ಬಿಟ್ಟಿದ್ದಾರೆ. ಈ ಬಗ್ಗೆ ಪೋಷಕರು ಸಂತಸ ಹಂಚಿಕೊಂಡಿದ್ದಾರೆ.

