ಅಭಿವೃದ್ಧಿಯ ರೋಗಕ್ಕೆ ಸಿಲುಕಿ ನಲುಗಿದ ಮಂದಾರ

0
122

‘ಯೋಜನೆ’ ಎಂಬ ಕಾಯಿಲೆಯಿಂದ ಕವಲೊಡೆದ ದುರಂತ: ದೈವಗಳ ನೆಲದಲ್ಲಿ ಇಂದಿಗೂ ಮೌನ ಮತ್ತು ತ್ಯಾಜ್ಯದ ನೆರಳು

ವರದಿ ಮಂದಾರ ರಾಜೇಶ್ ಭಟ್, ತುಳುನಾಡು ವಾರ್ತೆ

ತುಳುನಾಡು ​: ಅಭಿವೃದ್ಧಿ ಎಂದರೆ ಪ್ರಗತಿ, ಬೆಳಕು, ಸುಧಾರಣೆ. ಆದರೆ, ಮಂಗಳೂರಿನ ಮಂದಾರಕ್ಕೆ ‘ಅಭಿವೃದ್ಧಿ’ ಎಂದರೆ 2019ರ ಆಗಸ್ಟ್ 6ರಂದು ಸುಮಾರು 10 ಲಕ್ಷ ಟನ್ ವಿಷವಾಗಿ ಸುರಿದುಬಂದ ತ್ಯಾಜ್ಯದ ಮಳೆ!
ಈ ನೆಲವು ಇಂದು “ಅಭಿವೃದ್ಧಿಯ ರೋಗಕ್ಕೆ ಸಿಲುಕಿ” ನಡುಗುತ್ತಿದೆ. 6 ವರ್ಷಗಳ ನಂತರವೂ, ಮಂದಾರ ತನ್ನ ಪರಂಪರೆಯ ಆಸ್ತಿಯೊಂದಿಗೆ, ಮಣ್ಣಿನ ಗಾಯವನ್ನು ಹೊತ್ತು ನಿಂತಿದೆ.

ಒಂದು ವಿಪರ್ಯಾಸದ ರೋಗಲಕ್ಷಣ
​ಮಂದಾರ, ತುಳುನಾಡಿನ ಪವಿತ್ರ ಪರಂಪರೆಯ ಚೈತನ್ಯ. ಇದು ದೈವಗಳ ನಂಬಿಕೆ, ನಾಗಬನದ ಪಾವಿತ್ರ್ಯ ಮತ್ತು ಕವಿ ಮಂದಾರ ಕೇಶವ ಭಟ್ಟರ ವಾಕ್ಯಗಳು ಸಮ್ಮಿಲನಗೊಂಡಿದ್ದ ಪಾವನ ನೆಲ. ಆದರೆ, “ಯಾವುದೇ ಬೆಲೆ ತೆತ್ತಾದರೂ ನಗರವನ್ನು ಸ್ವಚ್ಛವಾಗಿಡಬೇಕು” ಎಂಬ ಅಭಿವೃದ್ಧಿಯ ಮಹತ್ವಾಕಾಂಕ್ಷೆ ಇಲ್ಲಿ ಮೃತ್ಯು ಶಾಸನವಾಯಿತು.

​ಬಹುಕಾಲದ ನಿರ್ಲಕ್ಷ್ಯ, ನಿರ್ವಹಣೆಯ ಕೊರತೆ, ಮತ್ತು ದುರಾಸೆಯ ‘ಯೋಜನೆ’ಗಳು ಸೇರಿ ಈ ರೋಗವನ್ನು ಹುಟ್ಟಿಸಿದವು. ಇದರ ತೀವ್ರ ಲಕ್ಷಣ 2019ರ ಆಗಸ್ಟ್‌ನಲ್ಲಿ ಸ್ಪೋಟಗೊಂಡಿತು – ತ್ಯಾಜ್ಯದ ಅಲೆಗಳು ಪ್ರವಾಹದಂತೆ ಬಂದಾಗ, ದೈವಸ್ಥಾನ, ನಾಗಬನ, ಧರ್ಮಚಾವಡಿ ಮತ್ತು ಪಾರಂಪರಿಕ ಮನೆಗಳು ಅಭಿವೃದ್ಧಿಯ ರೋಗಕ್ಕೆ ಸಿಲುಕಿ ಮೌನದ ಕಿರುಚಾಟ ಮಾಡಿದವು. ಆದರೆ ಯಾರಿಗೆ ಕೇಳಬೇಕು? ಅಭಿವೃದ್ಧಿಯ ಭರಾಟೆಯಲ್ಲಿ ಕಿವಿಗಳು ಅಡ್ರಸ್ ಕಳೆದುಕೊಂಡಿದ್ದವು.

​ಪಾರಂಪರಿಕ ಮನೆ – ಕಾವ್ಯದ ಗರ್ಭಗುಡಿ, ಇಂದು ಕುಸಿಯುವ ಮುನ್ನ “ನನ್ನನ್ನು ಉಳಿಸಿ” ಎಂದು ಕೈಚಾಚಿದೆ.

​ಧರ್ಮಚಾವಡಿ – ಸಮುದಾಯದ ನ್ಯಾಯದ ಕೇಂದ್ರ, ಇಂದು ಮೌನದ ಗಾಳಿಗೆ ಒರಗುವ ಪ್ರಾಚೀನ ಸಿರಿ.

​ನಾಗಬನ – ಪವಿತ್ರ ಅಂಗಳ, ಇನ್ನೂ ಮಣ್ಣು ಶುದ್ಧಿಯಾಗಲು ಗೌರವಕ್ಕಾಗಿ ಕಾಯುತ್ತಿದೆ.

​ 6 ವರ್ಷಗಳ ಚಿಕಿತ್ಸೆ:

ಕೇವಲ ಭರವಸೆಗಳ ಡೋಸ್
ದುರಂತ ಸಂಭವಿಸಿದ ಕೂಡಲೇ, ಅಧಿಕಾರಿಗಳು ಮತ್ತು ರಾಜಕಾರಣಿಗಳು ‘ಚಿಕಿತ್ಸೆ’ಯ ಭರವಸೆಗಳನ್ನು ನೀಡಿದರು. ‘ರೋಗ ಗುಣಪಡಿಸಲಾಗುವುದು’ ಎಂದು ಹೇಳಿ, ಭರವಸೆಗಳ ಡೋಸ್‌ಗಳನ್ನು ಒಂದರ ಮೇಲೊಂದರಂತೆ ನೀಡಿದರು.

​ದೈವಸ್ಥಾನ ಪುನಃಸ್ಥಾಪನೆ –

ಭರವಸೆಯ ಡೋಸ್ 1
​ನಾಗಬನ ಶುದ್ಧೀಕರಣ, ಮರು ಸ್ಥಾಪನೆ – ಭರವಸೆಯ ಡೋಸ್ 2
​ ಪಾರಂಪರಿಕ ಮನೆ ರಕ್ಷಣೆ – ಭರವಸೆಯ ಡೋಸ್ 3
ಧರ್ಮ ಚಾವಡಿ ಪುನರ್ ನಿರ್ಮಾಣ – ಭರವಸೆಯ ಡೋಸ್ 4
​ಆದರೆ, ಈ ಭರವಸೆಗಳೆಲ್ಲವೂ ನೀರಿನ ಮೇಲಿನ ಬರಹದಂತೆ ಮಾಯವಾದವು. 6 ವರ್ಷಗಳ ನಂತರ, ಮಂದಾರ ಇನ್ನೂ ಗುಣಮುಖವಾಗಿಲ್ಲ. ಚಿಕಿತ್ಸೆಯ ರೂಪದಲ್ಲಿ ಸಿಕ್ಕಿದ್ದು ಕೇವಲ ನನಸಾಗದ ಆಶ್ವಾಸನೆಗಳು ಮಾತ್ರ.

​ಇಂದು ಮಂದಾರವು ತುಳುನಾಡಿನ ಮನಸ್ಸಿಗೆ ಕೇಳುತ್ತಿರುವ ಪ್ರಶ್ನೆ ಇದು: ​”ಯೋಜನೆಗಳು ಕೇವಲ ಆಶ್ವಾಸನೆಗಷ್ಟೇ ಸೀಮಿತವಾದಾಗ, ಇಚ್ಛಾಶಕ್ತಿಯ ಕೊರತೆ ಇದ್ದಾಗ, ಸಂಸ್ಕೃತಿ, ದೈವ ಮತ್ತು ನೆಲ ಉಳಿಯಲು ಸಾಧ್ಯವೇ?”

ಮಂದಾರದ ಕೂಗು: ತುಳುನಾಡೇ, ಪ್ರತಿಕ್ರಿಯಿಸು! ​ಮಂದಾರದಲ್ಲಿನ ಮೌನ, ಕೇವಲ ಬಲಿಯಾದ ನೆಲದ ಮೌನವಲ್ಲ. ಇದು ತುಳುನಾಡಿನ ಪರಂಪರೆ ಮತ್ತು ನಂಬಿಕೆಗಳ ಮೇಲಿನ ನಗಣ್ಯ ಭಾವದ ವಿರುದ್ಧದ ಕೂಗು.

​ಮಣ್ಣಿಗೆ ಮರುಸ್ಪರ್ಶ ಸಿಗಬೇಕು. ಪರಂಪರೆಯನ್ನು ಉಳಿಸುವ ದೃಢವಾದ ಪ್ರತಿಜ್ಞೆ ಬೇಕು. ದೈವ, ನಾಗ, ಮನೆ, ಮಣ್ಣು – ಈ ನಂಟನ್ನು ಪುನಃ ಕಟ್ಟಬೇಕು

ತುಳುನಾಡೇ, ನೀನು ಪ್ರತಿಕ್ರಿಯಿಸೋ ಸಮಯ ಬಂದಿದೆ. ಭರವಸೆ ಮರೆತವರು ಜಾಗೃತರಾಗಬೇಕು. ಅಭಿವೃದ್ಧಿಯ ‘ರೋಗ’ದಿಂದ ನಡುಗಿದ ಮಂದಾರವನ್ನು ಗುಣಮುಖ ಮಾಡುವ ಪ್ರತಿಜ್ಞೆಯನ್ನು ನಿನ್ನ ಮಕ್ಕಳು ತೆಗೆದುಕೊಳ್ಳುವರೆ?

LEAVE A REPLY

Please enter your comment!
Please enter your name here