ರಂಗಭೂಮಿ ಉಡುಪಿ ಆಶ್ರಯದಲ್ಲಿ ಮರವೇ ಮರ‍್ಮರವೇ ಬೀದಿ ನಾಟಕ ಪ್ರದರ್ಶನ

0
76

ಬೀದಿ ನಾಟಕಗಳಿಂದ ಸಾಮಾಜಿಕ ಅರಿವು : ಡಾ.ತಲ್ಲೂರು

ಉಡುಪಿ : ನಮ್ಮ ಸಮಾಜ, ಜನ ಸಾಮಾನ್ಯರು ಬದುಕಿನಲ್ಲಿ ಎದುರಿಸುತ್ತಿರುವ ಬವಣೆಗಳು, ಸಾಮಾಜಿಕ ಸಂಘರ್ಷಗಳ ಬಗ್ಗೆ ಬೀದಿ ನಾಟಕಗಳು ಬೆಳಕು ಚೆಲ್ಲಿ ಜಾಗೃತಿಯನ್ನುಂಟು ಮಾಡುವ ಕಾರ್ಯ ಮಾಡುತ್ತಿವೆ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಭಾನುವಾರ ರಂಗಭೂಮಿ ಉಡುಪಿ ಆಶ್ರಯದಲ್ಲಿ ಕಿನ್ನರ ಮೇಳ ತುಮರಿ ಪ್ರಸ್ತುತಿಯಲ್ಲಿ ರಥಬೀದಿಯ ಪೇಜಾವರ ಮಠದ ಮುಂಭಾಗದಲ್ಲಿ ನಡೆದ ಡಾ.ಚಂದ್ರಶೇಖರ ಕಂಬಾರರು ರಚಿಸಿದ ಮೂರು ಕಥೆಗಳನ್ನು ಆಧಾರಿಸಿದ ‘ಮರವೇ ಮರ‍್ಮರವೇ..! ‘ ಬೀದಿ ನಾಟಕದ ಪ್ರಥಮ ಪ್ರದರ್ಶನ ಹಾಗೂ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

60 ಸಂವತ್ಸರಗಳನ್ನು ಕಂಡಿರುವ ರಂಗಭೂಮಿ ಉಡುಪಿ ವತಿಯಿಂದ ಸಾಮಾಜಿಕ ಜಾಗೃತಿ, ಸಂದೇಶವನ್ನು ಸಾರುವ ಬೀದಿ ನಾಟಕಗಳನ್ನು ಮಾಡಿಸಿಕೊಂಡು ಬರುತ್ತಿದ್ದು, ಇತ್ತೀಚಿಗೆ ಕೋವಿಡ್ ಕಾಲದಲ್ಲಿ ನಡೆದಿರಲಿಲ್ಲ. ಇದೀಗ ಮತ್ತೆ ಈ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು, ಇದರಲ್ಲಿ ಡಾ.ಚಂದ್ರಶೇಖರ ಕಂಬಾರರು ರಚಿಸಿದ ಮೂರು ಕಥೆಗಳನ್ನು ಆಧಾರಿಸಿದ ‘ಮರವೇ ಮರ‍್ಮರವೇ…!’ ನಾಟಕವನ್ನು ತುಮರಿಯ ಕಿನ್ನರ ಮೇಳ ಸಂಸ್ಥೆಯ ಕಲಾವಿದರಿಂದ ಪ್ರದರ್ಶನ ಮಾಡಲಾಗುತ್ತಿದೆ. ನಾಡು ಬೆಳೆದಂತೆ ಕಾಡು ಕಣ್ಮರೆಯಾಗುತ್ತಿರುವ ಈ ಆಧುನಿಕ ಕಾಲದಲ್ಲಿ ನಮ್ಮ ನಮ್ಮ ಮನೆ ಪರಿಸರದಲ್ಲಿ ಗಿಡಮರಗಳನ್ನು ಬೆಳೆಸುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಳ್ಳಬೇಕು. ಮನೆಮುಂದಿನ ತುಳಸಿ ಗಿಡದಿಂದ ಹಿಡಿದು ನಿತ್ಯೋಪಯೋಗಿ ಗಿಡಗಳನ್ನು ಬೆಳೆಸಿ ಅವುಗಳನ್ನು ನಮ್ಮ ಜೀವನದ ಅಂಗವಾಗಿ ಮಾಡಿಕೊಂಡರೆ ನಮ್ಮ ಮನಸ್ಸಿಗೂ ನೆಮ್ಮದಿ ದೊರೆಯುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಯಮಿ ರಂಜನ್ ಕಲ್ಕೂರ ಅವರು ತಮ್ಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು.

ರಂಗಭೂಮಿ ಉಡುಪಿ ಇದರ ಉಪಾಧ್ಯಕ್ಷರುಗಳಾದ ರಾಜಗೋಪಾಲ ಬಲ್ಲಾಳ್ ಮತ್ತು ಬಾಸ್ಕರ ರಾವ್ ಕಿದಿಯೂರು, ಗಿರಿಜಾ ಸರ್ಜಿಕಲ್ ನ ಮಾಲೀಕ ರವೀಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ರಂಗಭೂಮಿಯ ಪದಾಧಿಕಾರಿಗಳಾದ ಜಿ. ಪಿ. ಪ್ರಭಾಕರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ವಿವೇಕಾನಂದ ಎನ್, ಕಾರ್ಯಕ್ರಮ ನಿರೂಪಿಸಿದರು. ನಾಟಕಕ್ಕೆ ಕೆ.ಜಿ.ಕೃಷ್ಣಮೂರ್ತಿ, ಸಜಿ ಆರ್.ತುಮರಿ ಹಾಗೂ ಅರುಣ ಎನ್. ಅವರ ನಿರ್ದೇಶನವಿದೆ. ಸಂಗೀತ ದಿಗ್ವಿಜಯ ಹೆಗ್ಗೋಡು ಹಾಗೂ ಪರಿಕಲ್ಪನೆ ಮತ್ತು ವಿನ್ಯಾಸವನ್ನು ಕೆ.ಜಿ.ಕೃಷ್ಣಮೂರ್ತಿ ಅವರೇ ನೀಡಿದ್ದಾರೆ.

LEAVE A REPLY

Please enter your comment!
Please enter your name here