ಉಡುಪಿ ಪುತ್ತೂರಿನ ಧಾನ್ಯಲಕ್ಷ್ಮೀ ರೈಸ್ ಮಿಲ್ನ ಆಡಳಿತ ಪಾಲುದಾರರಾಗಿದ್ದ ಮಧ್ವಮೂರ್ತಿ ಆಚಾರ್ಯ (62)ನಿನ್ನೆ (06.02.2026) ರಸ್ತೆ ಅವಘಡದಲ್ಲಿ ನಿಧನರಾದರು.
ಪ್ರತಿಭಾವಂತರಾಗಿದ್ದ ಇವರು ನಿಟ್ಟೂರು ಪ್ರೌಢಶಾಲೆಯ ಹಳೆವಿದ್ಯಾರ್ಥಿಯಾಗಿದ್ದರು. ಎಳವೆಯಲ್ಲೇ ಮರದಿಂದ ಬಿದ್ದು ಬೆನ್ನುಹುರಿಯ ವೈಕಲ್ಯದಿಂದ ನಡೆಯಲಾಗದಿದ್ದರೂ, ತಂದೆ ಪಿ.ಎಂ.ರಾಮಕೃಷ್ಣ ಆಚಾರ್ಯ ರು ಸ್ಥಾಪಿಸಿದ ಅಕ್ಕಿಗಿರಣಿಯನ್ನು ತಮ್ಮ ರಾಘವೇಂದ್ರ ಆಚಾರ್ಯ ರೊಂದಿಗೆ ಸೇರಿ ಮುನ್ನಡೆಸಿ ಪ್ರತಿಷ್ಠಿತ ಉದ್ಯಮಿಯಾಗಿ ಸಾಧನೆಗೈದಿದ್ದರು.
ಸಾಮಾಜಿಕವಾಗಿ ಅತ್ಯಂತ ಕಳಕಳಿಯನ್ನು ಹೊಂದಿದ್ದ ಇವರು ಭತ್ತದ ಕೃಷಿ ಮಾಡುವವರಿಗೆ ವಿಶೇಷ ಪ್ರೋತ್ಸಾಹ ಮತ್ತು ಸಹಕಾರ ನೀಡುತ್ತಾ ಬಂದಿದ್ದರು. ನಿಟ್ಟೂರು ಪ್ರೌಢಶಾಲೆ “ನಿಟ್ಟೂರು ಸ್ವರ್ಣ” ಅಭಿಯಾನ ಆರಂಭಿಸಿದಾಗ ಮತ್ತು ಅದರ ಪ್ರೇರಣೆಯಿಂದ ಮಾಜಿ ಶಾಸಕ ಕೆ. ರಘುಪತಿ ಭಟ್ ರು ಕೇದಾರೋತ್ಥಾನ ಟ್ರಸ್ಟ್ ಸ್ಥಾಪಿಸಿದ ಸಂದರ್ಭದಲ್ಲಿ ಹತ್ತಾರು ಟನ್ ಭತ್ತವನ್ನು ಅಕ್ಕಿ ಮಾಡಿ ಈ ಮಹಾಭಿಯಾನ ಯಶಸ್ವಿಯಾಗುವಲ್ಲಿ ದೊಡ್ಡ ಕೊಡುಗೆ ನೀಡಿದ್ದರು.ಕಲಾಪ್ರೇಮಿಯಾಗಿದ್ದ ಇವರು ಯಕ್ಷಗಾನ ಕಲಾರಂಗದ ಪೋಷಕ ಸದಸ್ಯರಾಗಿದ್ದರು.ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

