ಕಾರ್ಕಳ ಹೆಬ್ರಿ ವಲಯದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಪದಗ್ರಹಣ ಸಮಾರಂಭ

0
9

ಕಾರ್ಕಳ : ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ (ರಿ.) ಬೆಂಗಳೂರು ಇದರ ಕಾರ್ಕಳ ಹಾಗೂ ಹೆಬ್ರಿ, ತಾಲೂಕು ಶಾಖೆಗಳ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಬುಧವಾರ ಕಾರ್ಕಳದ ಹೋಟಲ್ ಪ್ರಕಾಶ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಜೆ.ಎಂ. ರಾಜಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಜಿ.ಎಂ. ರಾಜಶೇಖರ್, “ಪತ್ರಕರ್ತನ ಪಟ್ಟದಲ್ಲಿ ಕುಳಿತರೆ ಸಾಲದು, ಪತ್ರಕರ್ತನಿಗೆ ಸಾಮಾಜಿಕ ತುಡಿತ ಬಹಳ ಅಗತ್ಯ. ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸಲು ಅವಕಾಶವಿರುವಾಗ, ಸಮಾಜದ ಒತ್ತಡದ ನಡುವೆ ಬದುಕುವ ಗ್ರಾಮೀಣ ಪತ್ರಕರ್ತರಿಗೆ ಇಂತಹ ಸೌಲಭ್ಯಗಳನ್ನು ಸರ್ಕಾರ ಏಕೆ ನೀಡುತ್ತಿಲ್ಲ?” ಎಂದು ಪ್ರಶ್ನಿಸಿದರು.

ಪತ್ರಕರ್ತರ ಆರೋಗ್ಯದ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು ಎಂದ ಅವರು, ಸಂಘದ ವತಿಯಿಂದ ಆರೋಗ್ಯಕ್ಕಾಗಿ ಸಸಿ ನೆಡುವ ಹಾಗೂ ಕಣ್ಣುದಾನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು, ಪತ್ರಕರ್ತರ ಬದುಕು ನಿಮ್ಮರವಾದುದು, ಅವರ ಸಮಸ್ಯೆಗಳನ್ನು ಸರ್ಕಾರ ಅರಿಯಬೇಕು. ಜಾಹೀರಾತು ನೀಡಿ ಪತ್ರಿಕೆ ಬೆಳೆಸುವ ಕರಾವಳಿಯ ಜನರೇ ಇಲ್ಲಿನ ಮಾಧ್ಯಮಗಳ ಅನ್ನದಾತರು, ಅವರ ನಂಬಿಕೆ ಉಳಿಸುವ ಕೆಲಸ ಪತ್ರಕರ್ತರಿಂದ ಆಗಬೇಕು ಮತ್ತು ಮಹಿಳಾ ಪತ್ರಕರ್ತೆಯರ ಮತ್ತು ಪತ್ರಕರ್ತರ ಮೇಲಿನ ದಬ್ಬಾಳಿಕೆ ತಡೆಯಲು ಕಾನೂನು ಭದ್ರತೆ ಅಗತ್ಯ ಎಂದು ಅವರು ತಿಳಿಸಿದರು.

ಶಾಸಕ ವಿ. ಸುನಿಲ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ‘ಪತ್ರಿಕೋದ್ಯಮವು ತನಗೆ ಅನೇಕ ಜೀವನ ಪಾಠಗಳನ್ನು ಕಲಿಸಿದೆ. ಕಾರ್ಕಳದ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ. ಇಲ್ಲಿನ ಪತ್ರಕರ್ತರ ನಡುವೆ ಇರುವ ಸಣ್ಣಪುಟ್ಟ ಗೊಂದಲಗಳನ್ನು ನಿವಾರಿಸಿ ಎಲ್ಲರೂ ಒಗ್ಗಟ್ಟಾಗಿ ಸಾಗಬೇಕು” ಎಂದು ಕಿವಿಮಾತು ಹೇಳಿದರು.

1975ರ ತುರ್ತು ಪರಿಸ್ಥಿತಿಯಲ್ಲಿ ಪತ್ರಿಕಾ ಧರ್ಮವನ್ನು ಹತ್ತಿಕ್ಕುವ ಪ್ರಯತ್ನ ನಡೆದಿತ್ತು, ಇಂದು ಮುದ್ರಣ ಮಾಧ್ಯಮ ಕ್ಷೀಣಿಸುತ್ತಿರುವುದು ದುರ್ದೈವ. ಪತ್ರಿಕೆ ಅಥವಾ ವೆಬ್ ಚಾನೆಲ್‌ಗಳು ಯಾರದ್ರೂ ಮುಖವಾಣಿಯಾಗದೆ, ಸುದ್ದಿಯಲ್ಲಿ ತಾರತಮ್ಯ ಮಾಡದೆ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ಮುಂಬರುವ ಬಾಹುಬಲಿ ಮಸ್ತಕಾಭಿಷೇಕದಂತಹ ಪವಿತ ಕಾರ್ಯಕ್ರಮಗಳನ್ನು ಜಗತ್ತಿಗೆ ಪರಿಚಯಿಸುವ ಕೆಲಸ ನಿಮ್ಮಿಂದಾಗಲಿ ಎಂದರು.

ಉದಯ ಶೆಟ್ಟಿ ಮುನಿಯಾಲು ಉದಯ ಕೃಷ್ಣ ಚಾರಿಟೇಬಲ್ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಸಮಾಜದ ಅಂಕುಡೊಂಕು ತಿದ್ದುವ ಶಕ್ತಿ ಪತ್ರಕರ್ತರಿಗಿದೆ. ಕಾರ್ಕಳದ ಹತ್ತಾರು ಅಭಿವೃದ್ಧಿ ಬೇಡಿಕೆಗಳನ್ನು ಸವಿವರವಾಗಿ ಸರ್ಕಾರದ ಮುಂದೆ ಪ್ರಸ್ತುತಪಡಿಸುವ ಕೆಲಸವಾಗಲಿ. ಪತ್ರಕರ್ತರ ಉಚಿತ ಬಸ್ ಪಾಸ್ ಬೇಡಿಕೆಯ ಬಗ್ಗೆ ನಾನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.

ಅಖಿಲ ಭಾರತೀಯ ಸಾಹಿತ್ಯ ವರಿಷದ್ ಅಧ್ಯಕ್ಷೆ ಮಿತ್ರ ಪ್ರಭಾ ಹೆಗ್ಡೆ ಮಾತನಾಡಿ, “ಡಿಜಿಟಲ್ ಯುಗದಲ್ಲಿ ಎಲ್ಲವೂ ಬೆರಳ ತುದಿಯಲ್ಲಿ ಸಿಗುತ್ತಿದೆ. ಗೂಗಲ್ ಎಲ್ಲವನ್ನೂ ನೀಡುತ್ತದೆಯಾದರೂ ಸತ್ಯಾಸತ್ಯತೆ ಬಗ್ಗೆ ಗೊಂದಲಗಳು ಸೃಷ್ಟಿಯಾಗುತ್ತಿವೆ. ಪತ್ರಿಕೋದ್ಯಮದ ಮೌಲ್ಯಗಳನ್ನು ಕಾಪಾಡುವುದು ಪತ್ರಕರ್ತರ ಜವಾಬ್ದಾರಿ” ಎಂದರು. ಫೆಡರೇಷನ್ ಆಫ್ ಕ್ಯಾರಿ ಮತ್ತು ಸ್ಟೋನ್ ಕ್ರಷರ್ ಓನರ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಮಾತನಾಡಿ, ಪತ್ರಕರ್ತರ ಒಗ್ಗಟ್ಟಿನಿಂದ ಮಾತ್ರ ಅವರ ಹಿತಾಶಕ್ತಿ ಕಾಪಾಡಲು ಸಾಧ್ಯ ಎಂದರು. ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಹಾಗೂ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷೆ ನಳಿನಿ ಎಸ್. ಸುವರ್ಣ ಅವರು ಸಂಘಟನೆಯನ್ನು ಮುನ್ನಡೆಸಲು ಎಲ್ಲರ ಸಹಕಾರ ಕೋರಿದರು. ಸಂಘದ ರಾಜ್ಯ ಕಾರ್ಯದರ್ಶಿ ವಸಂತ್ ಕುಮಾರ್ ಪ್ರಸ್ತಾವನೆಯೊಂದಿಗೆ ಸಂಘದ ಹಿಂದಿನ ಅನುಭವಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಅಧಿಕೃತ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಸಂಘದ ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಕಾರ್ಯದರ್ಶಿ ಹಾಗೂ ಎನ್.ಪಿ. ಗ್ರೂಪ್ ಮಾಲಕ ವಾಸುದೇವ ಭಟ್ ನೆಕ್ಕರೆಪಲೆ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಕೃಷ್ಣಪ್ಪ, ಉಡುಪಿ ಜಿಲ್ಲಾಧ್ಯಕ್ಷ ಎಂ.ಎನ್. ಕೊಟ್ಟಾರಿ ಉಪಸ್ಥಿತರಿದ್ದರು. ಅಬೂಬುಕರ್ ಸ್ವಾಗತಿಸಿ, ಸೌಮ್ಯ ನಿರೂಪಿಸಿದರು. ವೇದಿಕೆಯಲ್ಲಿದ್ದ ಗೌರವಾಧ್ಯಕ್ಷ ಬಾಲಕೃಷ್ಣ ಭೀಮಗುಳಿ ವಂದಿಸಿದರು. ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here