ಕೋಟತಟ್ಟು ಗ್ರಾ.ಪಂ. ಹಾಗೂ ದಾನಿಗಳಿಂದ ಕೊರಗ ಕುಟುಂಬಗಳಿಗೆ ಕೋಟತಟ್ಟು ಚಿಟ್ಟಿಬೆಟ್ಟಿನ ನಿರ್ಮಿಸಲಾದ ಎಂಟು ಗೃಹಗಳ ಲೋಕಾರ್ಪಣಾ ಸಮಾರಂಭ ‘ಆಸರೆ’ ಕಾರ್ಯಕ್ರಮ ಶನಿವಾರ ನಡೆಯಿತು.
ಉಡುಪಿ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ದುರ್ಬಲ ಸಮಾಜದ ಏಳಿಗೆಗಾಗಿ ಶ್ರಮಿಸುವ ಕಾರ್ಯ ಭಗವಂತನಿಗೆ ಸಲ್ಲಿಸುವ ಭಕ್ತಿಯಷ್ಟೆ ಶ್ರೇಷ್ಠವಾದದ್ದು.
ಕುಲ ಕಸುಬು ಮಾಡಿ ಜೀವನ ಸಾಗಿಸುವ ಪರಂಪರೆಯ ಮುಗ್ಧ ಜೀವಗಳಿಗೆ ಆಸರೆ ನೀಡಿರುವುದು ಕೋಟತಟ್ಟು ಪಂಚಾಯತ್ ಅತೀ ಶ್ರೇಷ್ಠವಾದ ಕಾಯಕ ಮಾಡಿದೆ ಎಂದರು.
ಮಠದ ವತಿಯಿಂದ ಐದು ಲಕ್ಷ ರೂಗಳ ದೇಣಿಗೆಯನ್ನು ಸ್ವಾಮೀಜಿ ಘೋಷಿಸಿದರು. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ನಟ, ನಿರ್ದೇಶಕ ರಿಷಬ್ ಶೆಟ್ಟಿ ಮನೆಯನ್ನು ವಿಕ್ಷೀಸಿ ಕೋಟತಟ್ಟು ಗ್ರಾಪಂ ಕಾರ್ಯವನ್ನು ಶ್ಲಾಘಿಸಿದರು. ದಾನಿಗಳನ್ನು ಸಭೆಯಲ್ಲಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಕುಂದಾಪುರ ಶಾಸಕ ಎ.ಕಿರಣ್ ಕುರ್ಮಾ ಕೊಡ್ಗಿ ವಹಿಸಿದ್ದರು.
ಸಮಾಜಸೇವಕ ಎಚ್.ಎಸ್.ಶೆಟ್ಟಿ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ ಶಂಕರ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಉದ್ಯಮಿಗಳಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು, ಸಂಪತ್ ಕುಮಾರ್ ಶೆಟ್ಟಿ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್, ಮನೋವೈದ್ಯ ಡಾ.ಪ್ರಕಾಶ್ ತೋಳಾರ್, ಐಟಿಡಿಪಿ ಇಲಾಖೆಯ ಮ್ಯಾನೇಜರ್ ವಿಶ್ವನಾಥ್ ಶೆಟ್ಟಿ, ಕೋಟತಟ್ಟು ಗ್ರಾಪಂ ಉಪಾಧ್ಯಕ್ಷೆ ಸರಸ್ವತಿ ಪೂಜಾರಿ, ಕೊರಗ ಸಮುದಾಯದ ಮುಖಂಡ ಗಣೇಶ್ ಕುಂಭಾಶಿ, ಕೋಟತಟ್ಟು ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.
ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಸ್ವಾಗತಿಸಿದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

