ಉಡುಪಿ: ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆಯಾದ ವಿದ್ಯಾಪೋಷಕ್ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗಾಗಿ ಐದು ದಿನಗಳ ‘ಜೀವನ ವಿದ್ಯಾ’ ಸನಿವಾಸ ಶಿಬಿರವನ್ನು ಸಂಸ್ಥೆಯ ಐವೈಸಿ ಸಭಾಂಗಣದಲ್ಲಿ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಿದರು. ಶಿಬಿರಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಭಗವದ್ಗೀತೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಶ್ರೇಷ್ಠ ಗ್ರಂಥ. ಲೌಕಿಕ ವಿದ್ಯೆಯೊಂದಿಗೆ ಮನಶ್ಶಾಂತಿ ಪಡೆಯಲು ಆಧ್ಯಾತ್ಮಿಕವಾಗಿ ಬೆಳೆಯುವದೂ ಅಷ್ಟೇ ಮುಖ್ಯ ಎಂದು ಹೇಳಿದರು.
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವತಿಯಿದ ವಿದ್ಯಾಪೋಷಕ್ ನ ೧೦೦೦ ವಿದ್ಯಾರ್ಥಿಗಳಿಗಾಗಿ ಕೊಡಮಾಡಿದ ಉಚಿತ ಆರೋಗ್ಯ ಕಾರ್ಡನ್ನು ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳರು ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ವಿತರಿಸಿ, ಶಿಕ್ಷಣ ಮತ್ತು ಆರೋಗ್ಯದ ಕುರಿತು ಕೆಲಸ ಮಾಡುವ ಮಾಹೆ ಯಕ್ಷಗಾನ ಕಲಾರಂಗದ ಕಾರ್ಯಕ್ರಮಗಳಿಗೆ ಸದಾ ಕೈ ಜೋಡಿಸುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣರು ವಹಿಸಿದ್ದರು. ಪರ್ಯಾಯ ಶ್ರೀ ಶೀರೂರು ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯರು ಶುಭಾಶಂಸನೆಗೈದರು. ಕಾರ್ಯಕ್ರಮದಲ್ಲಿ ಎಸ್. ವೆಂಕಟೇಶ್, ನಂದಾ ವೆಂಕಟೇಶ್, ಸಿ. ವಿ. ಸಂತೋಷ್, ಭಾಸ್ಕರ ಭಟ್, ಸಿ. ಎಸ್. ರಾವ್, ಪಿ. ಸತೀಶ ರಾವ್ ಶಿಬಿರದ ನಿರ್ದೇಶಕ ಗುರುದತ್ ಬಂಟ್ವಾಳಕರ್, ಸಹನಾ ಕಿಣಿ ಅಭ್ಯಾಗತರಾಗಿ ಭಾಗವಹಿಸಿದ್ದರು.
ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ವಿ. ಜಿ. ಶೆಟ್ಟಿ, ವಿದ್ಯಾ ಪ್ರಸಾದ್, ಯು.ಎಸ್. ರಾಜಗೋಪಾಲ ಆಚಾರ್ಯ, ಅನಂತರಾಜ ಉಪಾಧ್ಯ, ಅಶೋಕ ಎಂ., ಮಂಜುನಾಥ ಹೆಬ್ಬಾರ, ಅಜಿತ್ ಕುಮಾರ್, ಆನಂದ ಶೆಟ್ಟಿ, ಎನ್. ರಾಮ ಭಟ್, ಪ್ರಭಾಕರ ಬಂಡಿ ಉಪಸ್ಥಿತರಿದ್ದರು.
ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಮಂಗಳೂರಿನ ಪ್ರೊಟೊ ಅಪ್ ಸ್ಕಿಲ್ ಇದರ ನಿರ್ದೇಶನದಲ್ಲಿ ನಡೆಯುವ ಐದು ದಿನಗಳ ಸನಿವಾಸ ಶಿಬಿರದ ಪ್ರಯೋಜನವನ್ನು ಪ್ರಥಮ ಪಿಯು ಮುಗಿಸಿದ ವಿದ್ಯಾಪೋಷಕ್ನ ೨೫೦ ವಿದ್ಯಾರ್ಥಿಗಳು ಪಡೆಯಲಿದ್ದಾರೆ.

