ಮಾ. 7ರಂದು 15ನೇ ವರ್ಷದ ‘ಬಂಟ್ವಾಳ ಕಂಬಳ’ಕ್ಕೆ ಸಿ.ಎಂ. ಸಿದ್ಧರಾಮಯ್ಯ
ಬಂಟ್ವಾಳ: ಇಲ್ಲಿನ ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ ಮಾ.7ರಂದು ನಡೆಯಲಿರುವ 15 ನೇ ವರ್ಷದ ಹೊನಲು ಬೆಳಕಿನ ‘ಮೂಡೂರು- ಪಡೂರು’ ಜೋಡುಕರೆ ಬಯಲು ಕಂಬಳಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹಿತ ಗೃಹ ಸಚಿವ ಡಾ.ಜಿ.ಪರಮೇಶ್ವರ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆಮಂತ್ರಣಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ‘ ಅಂದು ಬೆಳಿಗ್ಗೆ ಗಂಟೆ 8.45ಕ್ಕೆ ಸೋಲೂರು ಮಠದ ವಿಖ್ಯಾತಾನಂದ ಸ್ವಾಮೀಜಿ, ಬಾರ್ಕೂರು ಡಾ.ಸಂತೋಷ್ ಗುರೂಜಿ, ಅಲ್ಲಿಪಾದೆ ಚರ್ಚಿನ ಧರ್ಮಗುರು ರಾಬಟ್ ð ಡಿಸೋಜ, ಅಳದಂಗಡಿ ಅರಮನೆ ಡಾ.ಪದ್ಮಪ್ರಸಾದ್ ಅಜಿಲ ಮತ್ತಿತರರ ಉಪಸ್ಥಿತಿಯಲ್ಲಿ ಕಂಬಳಕ್ಕೆ ಚಾಲನೆ ನೀಡಲಾಗುವುದು’ ಎಂದರು.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕಾಸರಗೋಡು ಸಂಸದ ರಾಜ್ ಮೋಹನ್ ಉನ್ನಿತಾನ್, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಮುಖ್ಯ ಸಚೇತಕ ಸಲೀಮ್ ಅಹ್ಮದ್ ಮತ್ತಿತರ ಗಣ್ಯರು ಭಾಗವಹಿಸಲಿದ್ದು, ಈ ಬಾರಿ ವಾಹನ ದಟ್ಟಣೆ ಹಿನ್ನೆಲೆಯಲ್ಲಿ ಪ್ರತ್ಯೇಕ ರಸ್ತೆ ನಿರ್ಮಿಸಲಾಗಿದೆ. ಈಗಾಗಲೇ ಹಲವು ವಿಶೇಷತೆಗಳನ್ನು ಮೂಡಿಸಿರುವ ಮೂಡೂರು-ಪಡೂರು ಕಂಬಳದಲ್ಲಿ ಈ ವರ್ಷ ಆಹಾರ ಮೇಳ ಆಯೋಜಿಸಲಾಗುವುದು ಎಂದು ಅವರು ವಿವರಿಸಿದರು.
ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್ ಮಾತನಾಡಿ, ‘ ಕಳೆದ ಸಾಲಿನಲ್ಲಿ ಸರ್ಕಾರ ರೂ 5ಲಕ್ಷ ಅನುದಾನ ಒದಗಿಸಿದ್ದು, ಈ ಬಾರಿ ಮುಂಗಡವಾಗಿ ರೂ 2ಲಕ್ಷ ನೀಡಿದೆ. ಮಾತ್ರವಲ್ಲದೆ ಈ ಬಾರಿ ಕಂಬಳ ಸಮಿತಿ ಶಾಶ್ವತ ವೇದಿಕೆ ನಿರ್ಮಿಸಿದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಂಚಾಲಕ ಬಿ.ಪದ್ಮಶೇಖರ್ ಜೈನ್, ಪ್ರಮುಖರಾದ ಬೇಬಿಕುಂದರ್, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಸುದರ್ಶನ ಜೈನ್, ಅಬ್ಬಾಸ್ ಆಲಿ, ಸುದೀಪ್ ಕುಮಾರ್ ಶೆಟ್ಟಿ, ನವಾಜ್ ಬಡಕಬೈಲು, ಫಿಲಿಫ್ ಫ್ರಾಂಕ್, ರಾಜೇಶ್ ರಾಡ್ರಿಗಸ್, ಉಮೇಶ್ ಬೋಳಂತೂರು, ವಿಜಯ ಅಲ್ಲಿಪಾದೆ ಮತ್ತಿತರರು ಇದ್ದರು.

