ಯಕ್ಷಗಾನ ಕಲಾರಂಗದ 91ನೆಯ ಮನೆ ಹಸ್ತಾಂತರ.

0
6

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿಯ ವಿದ್ಯಾರ್ಥಿ ನಿಖಿಲ್ ಎಸ್. (ಶ್ರೀಮತಿ ಕುಸುಮಾ ಮತ್ತು ದಿ. ಶಿವರಾಮ ಇವರ ಪುತ್ರ ಎಸ್.ಎಸ್.ಎಲ್.ಸಿ. ಯಲ್ಲಿ 97.6% ಅಂಕ) ಇವನಿಗೆ ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ಪಾಂಡೇಶ್ವರ ಮಂಜುನಾಥ ಹೊಳ್ಳ ಅವರ ಸ್ಮರಣಾರ್ಥ ಹಾಗೂ ಸರಸ್ವತಿ ಹೊಳ್ಳರ ಗೌರವಾರ್ಥ, ಅವರ ಪುತ್ರಿಯರ ಪ್ರಾಯೋಜಕತ್ವದಲ್ಲಿ,7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಮಂಜುನಾಥ ನಿಲಯ’ ವನ್ನು ಸರಸ್ವತಿ ಹೊಳ್ಳರು ಇಂದು (21.3.2026) ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ ಫಲಾನುಭವಿ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಯಾರ ಮುಲಾಜಿಗು ಒಳಗಾಗದೆ ಸ್ವತಃ ಮನೆ ಭೇಟಿ ಮಾಡಿ ನಿರ್ಣಯಿಸುತ್ತದೆ. ವಿದ್ಯಾರ್ಥಿಗಳ ಅಗತ್ಯಕ್ಕೆ ಕೂಡಲೇ ಸ್ಪಂದಿಸುವ ಇನ್ನೊಂದು ಸಂಸ್ಥೆಯನ್ನು ನಾನು ಕಂಡಿಲ್ಲ ಎಂದು ಹೇಳಿದರು. ಶಿವಮೊಗ್ಗದ ಮಾಜಿ ರೋಟರಿ ಗವರ್ನರ್ ಡಾ.ಪಿ.ನಾರಾಯಣ ಮಾತನಾಡಿ, ಕಲಾರಂಗದ ನಾಲ್ಕು ಮುಖಗಳ ಸಾಧನೆಗೆ ಬೆರಗಾಗಿದ್ದೇನೆ. ಕಲಾವಿದರು ಮತ್ತು ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸಹಾಯ ಮಾಡುವ ಇಂತಹ ಇನ್ನೊಂದು ಸಂಸ್ಥೆ ಇರಲಿಕ್ಕಿಲ್ಲ. ನನ್ನ ಅಣ್ಣನ ಹೆಣ್ಣುಮಕ್ಕಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿ ಒಳ್ಳೆಯ ಉದ್ಯೋಗ ಪಡೆದು ಈ ರೀತಿಯಾಗಿ ಸಮಾಜಪರ ಕಾರ್ಯ ಮಾಡುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದರು.ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಯಕ್ಷಗಾನ ಕಲಾರಂಗದ ಪ್ರತಿಯೊಂದು ಕಾರ್ಯಕ್ರಮವು ಅನನ್ಯವಾಗಿರುತ್ತದೆ. ಸದಾ ಕ್ರಿಯಾಶೀಲವಾಗಿರುವ ಈ ಸಂಸ್ಥೆಯ ಕೆಲಸವೇ ಸಮಾಜಕ್ಕೊಂದು ದೊಡ್ಡ ಸಂದೇಶ ಎಂದು ಹೇಳಿದರು. ಡಾ. ಗೀತಾ ಸಾಮಕ್ ನಮ್ಮ ತಂದೆಯವರೇ ನಮಗೆ ಸ್ಫೂರ್ತಿ. ದೃಷ್ಟಿ ತೊಂದರೆ ನಡುವೆಯೂ ಅವರು ಮಾಡುತ್ತಿದ್ದ ಕೃಷಿ ಕಾರ್ಯ ಸಮಾಜಪರ ಕಾಳಜಿಯನ್ನು ನೋಡಿದರೆ ಆಶ್ಚರ್ಯವೆನಿಸುತ್ತದೆ. ಕೃಷಿಯಲ್ಲಿ ಆ ಕಾಲಕ್ಕೆ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮಾದರಿ ಕೃಷಿಕರಾಗಿದ್ದರು. ಕಷ್ಟದಲ್ಲಿರುವವರಿಗೆ ಸದಾ ಸಹಾಯ ಮಾಡುತ್ತಿದ್ದರು.ಹತ್ತಕ್ಕೂ ಮಿಕ್ಕಿ ಮನೆಗಳನ್ನು ನಿರ್ಮಿಸಿ ಕೊಟ್ಟು ಬಡವರಿಗೆ ಆಸರೆಯಾಗಿದ್ದರು. ನಾವು ಐವರು ಹೆಣ್ಣುಮಕ್ಕಳು ಶಿಕ್ಷಣ ಪಡೆದು ಉದ್ಯೋಗಸ್ತರಾಗುವಲ್ಲಿ ಅಮ್ಮನ ಕಾಳಜಿಯು ಅಷ್ಟೇ ಮುಖ್ಯವಾಗಿತ್ತು. ಇಂದು ಅಮ್ಮನ ಕೈಯಿಂದಲೇ ಈ ಮನೆಯನ್ನು ಉದ್ಘಾಟಿಸುವ ಅವಕಾಶ ಪುತ್ರಿಯರಾದ ನಮಗೆ ಧನ್ಯತೆ ತಂದಿದೆ ಎಂದರು. ಹೊಳ್ಳರ ಕುಟುಂಬಕ್ಕೆ ಕಲಾರಂಗದ ಕೆಲಸವನ್ನು ಪರಿಚಯಿಸಿದ ಪಿ. ವಾಸುದೇವ ಕಾರಂತರು ಹಂಚಿನ ಮನೆ ಕುಟುಂಬವೇ ಸಮಾಜಕ್ಕೆ ಆದರ್ಶ. ನಮ್ಮ ಬಂಧುಗಳಾದ ಈ ಹೆಣ್ಣುಮಕ್ಕಳ ಸಾಧನೆ ನಮಗೆಲ್ಲಾ ಅಭಿಮಾನದ ಸಂಗತಿಯಾಗಿದೆ ಎಂದರು. ಉಷಾ ಎನ್. ಹೆಬ್ಬಾರ್, ಡಾ. ಗಣೇಶ್ ಮಧ್ಯಸ್ಥ, ಕಿಶೋರ್ ಶೆಟ್ಟಿ ವೇದಿಕೆಯಲ್ಲಿದ್ದರು. ಸಂಧ್ಯಾ ಶರ್ಮಾ, ರೇಖಾ ಮಕ್ಕಿತ್ತಾಯ, ಡಾ.ತಾರಾ ಕಾರಂತ್, ಡಾ. ಎಸ್.ಜಿ.ಸಾಮಕ್, ನಾಗರಾಜ ಹೆಬ್ಬಾರ್, ಅರವಿಂದ ಶರ್ಮಾ, ಡಾ.ಕೃಷ್ಣಮೂರ್ತಿ ಮಕ್ಕಿತ್ತಾಯ, ಡಾ. ಕೃಷ್ಣ ಕಿರಣ್ ಕಾರಂತ್, ಯಶೋದಾ ಹೊಳ್ಳ ಹಾಗೂ ಸರಸ್ವತಿ ಹೊಳ್ಳರ ಮೊಮ್ಮಕ್ಕಳು ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ಯು.ಎಸ್.ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯಾಯ, ಜಯರಾಮ ಪಡಿಯಾರ್, ರಾಮಚಂದ್ರ ಅಡಿಗ, ನಾಗರಾಜ ಹೆಗಡೆ ಭಾಗವಹಿಸಿದ್ದರು. ಬಿದ್ಕಲ್ ಕಟ್ಟೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕರುಣಾಕರ ಶೆಟ್ಟಿ, ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರ ಹೆಗ್ಡೆ, ನಿವೃತ್ತ ಮುಖ್ಯಶಿಕ್ಷಕ ಜಗದೀಶ ಉಡುಪ,ಫಲಾನುಭವಿ ವಿದ್ಯಾರ್ಥಿಗಳ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here