ಹಾವೇರಿ: ವಯಸ್ಸಾದರೂ ಮದುವೆಗೆ ಕನ್ಯೆ ಸಿಗದ್ದರಿಂದ ಮನನೊಂದು ಯುವಕನೋರ್ವ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ ನಡೆದಿದೆ. ಅವಿನಾಶ ಚಾವಡಿ (29) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಡ್ರೈವರ್ ಕೆಲಸ ಮಾಡಿಕೊಂಡಿದ್ದ ಅವಿನಾಶ ಚಾವಡಿ, ಮದುವೆಗಾಗಿ ಕನ್ಯೆ ಹುಡುಕುತ್ತಿದ್ದರು. ಆದರೆ, ಇದುವರೆಗೆ ಎಲ್ಲಿಯೂ ಕನ್ಯೆ ಸಿಕ್ಕಿರಲಿಲ್ಲ. ಅದು ಬೇರೆ ತನ್ನ ಸ್ನೇಹಿತರಿಗೆಲ್ಲರಿಗೂ ವಿವಾಹವಾಗಿದ್ದು, ತನಗೆ ಹೆಣ್ಣು ಸಿಗುತ್ತಿಲ್ವಲ್ಲ ಎಂದು ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚೆನ್ನಾಗಿ ದುಡಿಯುತ್ತೇನೆ. ನನಗೆ ವಯಸ್ಸಾದರೂ ಮದುವೆಯಾಗಲು ಇದುವರೆಗೂ ಯಾವುದೇ ಹೆಣ್ಣು ಸಿಗುತ್ತಿಲ್ಲ. ನಮ್ಮೂರಿನಲ್ಲಿರುವ ನನ್ನ ವಯಸ್ಸಿನ ಎಲ್ಲರಿಗೂ ಮದುವೆಯಾಗಿದೆ ಎಂದು ಮಗ ಅವಿನಾಶ ನೊಂದುಕೊಂಡಿದ್ದ. ಮಂಗಳವಾರ ಮಧ್ಯಾಹ್ನ ಮನೆಯಲ್ಲೇ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಾಯಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪೊಲೀಸರು ಯುಡಿಆರ್ (ಅಸಹಜ ಸಾವು) ದಾಖಲಿಸಿಕೊಂಡಿದ್ದಾರೆ.