ಬಂಟ್ವಾಳ : ವ್ಯಸನಗಳು ವ್ಯಕ್ತಿಯ ಆರೋಗ್ಯ ಕುಟುಂಬ ಮತ್ತು ಸಮಾಜದ ಮೇಲೆ ಪ್ರಭಾವವನ್ನು ಬೀರುತ್ತವೆ, ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡಿ ಆರ್ಥಿಕ ನಷ್ಟವನ್ನು ಉಂಟು ಮಾಡುವುದಲ್ಲದೆ ಕುಟುಂಬದಲ್ಲಿ ಕಲಹ ಮಾನಸಿಕ ಒತ್ತಡ ಮತ್ತು ಸಮಾಜದಲ್ಲಿ ಕೆಟ್ಟ ನಡವಳಿಕೆ ಉಂಟುಮಾಡುತ್ತದೆ, ಇದರಿಂದ ಮುಕ್ತರಾಗಲು ನಮ್ಮಲ್ಲಿ ಆತ್ಮವಿಶ್ವಾಸವನ್ನು ಬೆಳೆಸಬೇಕು ಸಕಾರಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಮಿತ್ರರ ಸಹಾಯ ತಜ್ಞರ ಸಹಾಯವನ್ನು ಪಡೆದು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಾಗ ನಮ್ಮಲ್ಲಿರುವ ವ್ಯಸನಗಳು ದೂರವಾಗಿ ನಾವು ಒಬ್ಬ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ, ಇಂದಿನ ಮಕ್ಕಳಲ್ಲಿ ಅತಿಯಾಗಿ ಕಂಡು ಬರುವ ಇಂಟರ್ನೆಟ್ ಬಳಕೆ ಈ ವ್ಯಸನವು ದೂರ ಮಾಡುವಲ್ಲಿ ಮಕ್ಕಳಿಗೆ ನಾವು ಸಮಯವನ್ನು ಮೀಸಲಿಟ್ಟು ಅವರ ವಿಶೇಷ ಕಾಳಜಿಯನ್ನು ಹೊಂದಿದಾಗ ಇದರಿಂದ ಮುಕ್ತರಾಗಲು ಸಾಧ್ಯ ವೆಂದು. ರಾಜ್ಯಮಟ್ಟದ “ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತ ಮಜಿ ವೀರಕಂಭ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಹೇಳಿದರು.
ಅವರು ರವಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ, ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಹಾಗೂ ಪ್ರಗತಿ ಬಂದು ಸ್ವ-ಸಹಾಯ ಸಂಘದ ಒಕ್ಕೂಟ ತುಂಬೆ ವಲಯದ ನರಿಕೊಂಬು ಬಿ ಒಕ್ಕೂಟದ ವತಿಯಿಂದ ನರಿಕೊಂಬು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಒಕ್ಕೂಟದ ತ್ರೈ ಮಾಸಿಕ ಸಭೆಯಲ್ಲಿ ಮಾದಕವಸ್ತು ವಿರೋಧಿ ದಿನಾಚರಣೆ ಪ್ರಯುಕ್ತ ನಡೆದ ಮಾಹಿತಿ ಕಾರ್ಯಕ್ರಮ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಿಕೊಂಬು ಬಿ ಒಕ್ಕೂಟದ ಅಧ್ಯಕ್ಷರಾದ ಜಯಂತ ಸಪಲ್ಯ ವಹಿಸಿದ್ದರು.
ಯೋಜನೆಯ ತುಂಬೆ ವಲಯ ಮೇಲ್ವಿಚಾರಕಿ ಮಮತ ಸಂತೋಷ್ ಪ್ರಗತಿ ಬಂದು ಸ್ವಸಹಾಯ ಸಂಘದ ಸದಸ್ಯರಿಗೆ ಯೋಜನೆಯ ಸಾಲ ಸೌಲಭ್ಯಗಳು, ಮರುಪಾವತಿ ವಿಧಾನ, ಸುರಕ್ಷಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಜವಾಬ್ದಾರಿಯನ್ನು ಅಂಜಲಿ ಸಂಘದ ಸದಸ್ಯರು ವಹಿಸಿದ್ದರು.
ಒಕ್ಕೂಟ ಸೇವಾ ಪ್ರತಿನಿಧಿ ಪ್ರತಿಭಾ, ಸ್ವಾಗತಿಸಿ. ದಿವಾಕರ ಮಿತ್ತಿಲ ಕೋಡಿ ವಂದಿಸಿದರು.