ಕಾರ್ಕಳ : ಸ್ವಾಸ್ಥ್ಯಸಮಾಜವಿದ್ದಲ್ಲಿ ಎಲ್ಲವೂ ಸಾಧ್ಯ ಆದರೆ, ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆಯಿಂದಾಗಿ ಸಾವನ್ನಪ್ಪುತ್ತಿರುವವರಲ್ಲಿ ಯುವಕರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿ. ಆದ್ದರಿಂದ ದೈನಂದಿನ ಕಾರ್ಯಚಟುವಟಿಕೆಯ ಜೊತೆಗೆ ಆರೋಗ್ಯ ತಪಾಸಣೆ ಅವಶ್ಯವಾಗಿ ಮಾಡಿಸಿಕೊಳ್ಳಬೇಕು ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು. ಕಾರ್ಕಳದ ಶುಭ ಸಮಾರಂಭಗಳಲ್ಲಿ ಜಯಕರ ಸುವರ್ಣ ಅವರ ಪಾತ್ರ ಮಹತ್ವದ್ದಾಗಿತ್ತು. ಇಂದು ಅವರ ಸ್ವರಣಾರ್ಥವಾಗಿ ಎಸ್ಕೆಪಿಎ ಉಚಿತವಾಗಿ ಆರೋಗ್ಯ ತಪಾಸಣೆ ಕಾರ್ಯಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದರು.
ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಕಾರ್ಕಳ ವಲಯದ ವತಿಯಿಂದ ಕೆಎಂಸಿ ಮಣಿಪಾಲ ಆಸ್ಪತ್ರೆಯ ಸಹಯೋಗದಲ್ಲಿ ದಿ. ಜಯಕರ ಸುವರ್ಣ (ಆಶಾ ಸ್ಟುಡಿಯೋ ಬಜಗೋಳಿ) ಸ್ಮರಣಾರ್ಥ ಮಾ. 22ರಂದು ಬಜಗೋಳಿ ಸಭಾಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ವಚ್ಛ ಬ್ರಿಗೇಡ್ ಬಜಗೋಳಿ ತಂಡ ಹಾಗೂ ದಿ. ಜಯಕರ ಸುವರ್ಣ ಅವರ ಧರ್ಮಪತ್ನಿ ಶಾಂತಾ ಜಯಕರ್ ಸುವರ್ಣ ಅವರನ್ನು ಅಭಿನಂದಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಎಸ್ಕೆಪಿಎ ಕಾರ್ಕಳ ವಲಯ ಅಧ್ಯಕ್ಷ ಪ್ರಮೋದ್ಚಂದ್ರ ಪೈ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬಜಗೋಳಿ ಆರೋಗ್ಯ ಕ್ಲಿನಿಕ್ನ ಡಾ. ಎ.ಕೆ. ವೆಂಕಟಗಿರಿ ರಾವ್, ಅಶ್ವಿನಿ ಕ್ಲಿನಿಕ್ನ ಡಾ. ರಾಮದಾಸ್ ಹೆಗ್ಡೆ, ಮುಡ್ರಾಲು ಆಶಾನಿಕೇತನದ ಶಾಂತಾ ಜಯಕರ್ ಸುವರ್ಣ, ಬಜಗೋಳಿ ಶ್ರೀ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಕೆ. ದೇವಿದಾಸ್ ಪ್ರಭು, ನಲ್ಲೂರು ಮೈತ್ರಿ ಯವ ವೇದಿಕೆ ಅಧ್ಯಕ್ಷ ಜಯರಾಮ್ ಶೆಟ್ಟಿ, ಬಜಗೋಳಿ ಅಬ್ಬೆಂಜಾಲು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಂದೀಪ್ ಶೆಟ್ಟಿ, ಕೆರ್ವಾಶೆ ಯುವಜನ ವೇದಿಕೆ ಅಧ್ಯಕ್ಷ ಜೀವನ್ ಕುಮಾರ್, ಮಾಳ ಗೆಳೆಯರ ಬಳಗದ ಅಧ್ಯಕ್ಷ ನಂದು ಗೋಪನ್ ಕೆ. ಆರ್., ಎಸ್ಕೆಪಿಎ ಉಡುಪಿ-ದ.ಕ. ಜಿಲ್ಲಾ ಉಪಾಧ್ಯಕ್ಷ ದತ್ತಾತ್ರೇಯ, ನಿಕಟಪೂರ್ವ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ಕಾರ್ಕಳ ವಲಯ ಗೌರವಾಧ್ಯಕ್ಷ ಸುಶೀಲ್ ಕುಮಾರ್ ಟಿ.ವಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಸಾದ್ ಐಸಿರ ಕಾರ್ಯಕ್ರಮ ನಿರೂಪಿಸಿ, ಶೇಖರ್ ಕುಕ್ಕುಜೆ ವಂದಿಸಿದರು.

