ಬದುಕೇ ವ್ಯವಹಾರವಾಗಬಾರದು : ರಘು ಇಡ್ಕಿದು
ಮುಡಿಪು: ಪ್ರಕೃತಿಯಿಂದಲೇ ರೂಪುಗೊಂಡ ನಮ್ಮ ದೇಹ- ಭಾವಗಳನ್ನು ಬಳಸಿಕೊಂಡು ಬದುಕುವಾಗ ಪ್ರಕೃತಿಯನ್ನೇ ಮರೆತರೆ ಹೇಗೆ? ಬದುಕಿಗಾಗಿ ವ್ಯವಹಾರ ಬೇಕು. ಬದುಕೇ ವ್ಯವಹಾರವಾಗಬಾರದು. ಪ್ರಕೃತಿಯೊಂದಿಗಿನ ಸಹಜೀವನದಲ್ಲಿ ನಿಜವಾದ ಸೃಜನಶೀಲತೆ ರೂಪುತಳೆಯುತ್ತದೆ ಎಂದು ಕೆನರಾ ಪಿ.ಯು ಕಾಲೇಜಿನ ಉಪನ್ಯಾಸಕ, ಲೇಖಕ ರಘ ಇಡ್ಕಿದು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ‘ಬಿತ್ತಿ’ಗೋಡೆ ಬರಹ ಪತ್ರಿಕೆ ವತಿಯಿಂದ ಕನ್ನಡ ವಿಭಾಗದ ಸಭಾಂಗಣದಲ್ಲಿ ನಡೆದ ಸೃಜನ- ಚಿಂತನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಬದುಕನ್ನು ಬಿಟ್ಟು ಸಾಹಿತ್ಯವಿಲ್ಲ. ಸಾಹಿತ್ಯದ ಓದು ಬದುಕನ್ನು ಸಂಭ್ರಮಿಸಲು ಕಲಿಸುತ್ತದೆ. ಎಲ್ಲ ಎಲ್ಲೆಗಳನ್ನು ಮೀರಿ ಪ್ರೀತಿಯಿಂದ ಬದುಕೋಣ. ಆಗ ಸಂಶಯ ಅನುಮಾನಗಳಿಗೆ ಎಡೆಯಿಲ್ಲ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ಸೋಮಣ್ಣ ಮಾತನಾಡಿ ಕವಿತೆಯ ಸಾಲುಗಳಲ್ಲಿ ಹೊಸತನ್ನು ಕಾಣಿಸುವ ಕಣ್ಣಿರಬೇಕು.ಅದಕ್ಕೆ ಹೊಸ ಹೊಸ ಇಮೇಜ್ ಗಳನ್ನು ಹುಡುಕಬೇಕು ಎಂದರು.
ವಿಭಾಗದ ಪ್ರಾಧ್ಯಾಪಕರಾದ ಡಾ. ನಾಗಪ್ಪ ಗೌಡ, ಡಾ.ಧನಂಜಯ ಕುಂಬ್ಳೆ, ಡಾ.ಯಶುಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಜಬೀನಾ, ರಾಖೇಶ್, ಸೌಮ್ಯ ಟಿ.ಎಸ್ , ಪ್ರತೀಕ್ಷಾ, ಸಲೀಂ, ಶ್ರೇಯಸ್ ಮೊದಲಾದವರು ಕವನ ವಾಚನ ಮಾಡಿದರು.
ಬಿತ್ತಿ ಸಂಪಾದಕಿ ಸಂಧ್ಯಾ ಎನ್
ಮಣಿನಾಲ್ಕೂರು ಸ್ವಾಗತಿಸಿದರು. ದುಶ್ಯಂತ್ ಪ್ರಥಮ ಎಂ.ಎ ವಂದಿಸಿದರು. ರೇಷ್ಮಾ ಎನ್ ಬಾರಿಗ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಪ್ರಬಂಧ ಹಾಗೂ ಕವನ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.