ಬಜಪೆ:ಗ್ರಾಮೀಣ ಭಾಗದ ಸರಕಾರಿ ಪ್ರೌಢಶಾಲೆ ಶೈಕ್ಷಣಿಕ ಹಾಗೂ ಕ್ರೀಡಾಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿರುದು ಸಂತಸದ ವಿಚಾರ. ಅಲ್ಲದೆ ಖೋಖೋ ಪಂದ್ಯಾಟದಲ್ಲಿ ರಾಜ್ಯಮಟ್ಟ ರಾಷ್ಟ್ರಮಟ್ಟದವರೆಗೂ ಪ್ರಸ್ತುತ ವರ್ಷ ನಿರಂತರ ಸಾಧನೆ ಮಾಡಿರುವುದು ನಮ್ಮೂರಿಗೆ ಹೆಮ್ಮೆ ತಂದಿದೆ ಎಂದು ಮಾಜಿ ತಾಲೂಕು ಪಂಚಾಯತ್ ಸದಸ್ಯ ಸುರೇಶ್ ಶೆಟ್ಟಿ ಹೇಳಿದರು.ಅವರು ಬುಧವಾರದಂದು ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನಲ್ಲಿ ನಡೆದ ಶಾಲಾ ಶೈಕ್ಷಣಿಕ ವರ್ಷದ ಎರಡನೇ ಸಮುದಾಯ ದತ್ತ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಶಾಲೆಯು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಹಲವು ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿ ಪ್ರೇರೇಪಿಸಿ ಮುನ್ನಡೆಸುತ್ತಿರುವ ಶಾಲಾ ಶಿಕ್ಷಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಕೆನರಾ ಸಂಸ್ಥೆಗಳ ಖಜಾಂಜಿ ಹಾಗೂ ಕಾಮತ್ ಅಂಡ್ ಕಾಮತ್ ಎಸೋಸಿಯೇಟ್ಸ್ ನ ಪಾಲುದಾರ ವಾಮನ ಕಾಮತ್ ಅವರು ವೃತ್ತಿ ಮಾರ್ಗದರ್ಶನದ ಬಗ್ಗೆ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು.ಎಸ್ ಎಸ್ ಎಲ್ ಸಿ ನಂತರದ ಶಿಕ್ಷಣ, ಆಸಕ್ತಿಯ ಪರಿಣಿತರಾಗುವ ಕ್ಷೇತ್ರ ಅವಕಾಶಗಳನ್ನು ಬಳಸಿ ಉಪಯೋಗಿಸಿಕೊಳ್ಳುವ ವಿವಿಧ ರೀತಿಗಳನ್ನು ತಿಳಿಸಿದರು .ಆಧುನಿಕ ಶಿಕ್ಷಣ , ವೃತ್ತಿಪರ ಕೋರ್ಸ್ ಗಳು ಸರ್ಟಿಫಿಕೇಟ್ ಕೋರ್ಸ್ ಗಳು ಕಂಪ್ಲೀಶನ್ ಕೋರ್ಸ್ ಗಳು, ವೃತ್ತಿ ಸಂಬಂಧಿತ ಕೋರ್ಸುಗಳು, ರಾಜ್ಯ ಸರಕಾರ, ಭಾರತ ಸರಕಾರದ ಹಲವು ಪರೀಕ್ಷೆಗಳು, ಉನ್ನತ ಹುದ್ದೆಗಳನ್ನು ಆರಿಸಿಕೊಳ್ಳುವಾಗ ನಾವು ಆರಿಸುವ ಕೋರ್ಸ್ ಮತ್ತು ಪೂರ್ವ ತಯಾರಿ ಪಡೆಯುವ ಅಂಕ ಮತ್ತು ಅದಕ್ಕೆ ನಡೆಸುವ ಪರೀಕ್ಷಾ ತಯಾರಿಗಳ ಸಿದ್ಧತೆಗಳ ಬಗ್ಗೆ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಸಮುದಾಯದತ್ತ ಶಾಲಾ ಕಾರ್ಯಕ್ರಮದ ರೂಪುರೇಷೆ, ಮಹತ್ವ, ಸಮುದಾಯದ ಸಹಭಾಗಿತ್ವ , ಶಾಲೆಯ ಸಾಧನೆ ಇತ್ಯಾದಿ ಅಂಶಗಳ ಬಗ್ಗೆ ಶಾಲಾ ಶಿಕ್ಷಕಿ ಚಿತ್ರಾಶ್ರೀ ಪೋಷಕರಿಗೆ ತಿಳಿಸಿದರು.
ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮಂಗಳೂರು ಉತ್ತರ ವಲಯದಲ್ಲಿ ಸರಕಾರಿ ಪ್ರೌಢಶಾಲೆ ಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಶಾಲೆಯ ವಿದ್ಯಾರ್ಥಿ ಯಶಸ್ .ಹೆಚ್ ಗೆ ಸರಕಾರದಿಂದ ಕೊಡ ಮಾಡಿದ ಲ್ಯಾಪ್ ಟಾಪನ್ನು ವಿತರಿಸಲಾಯಿತು.ಹಾಗೂ ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಗಳನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಇಂದಿರಾ ಎನ್ ರಾವ್ ,ಎಸ್ ಡಿ ಎಂ ಸಿ ಸದಸ್ಯರಾದ ಮೆಲ್ವಿನ್, ಹೇಮಚಂದ್ರ ,ಶ್ರೀಮತಿ ಬಬಿತಾ, ಶ್ರೀಮತಿ ವಿನೋದ, ಎಂಸಿಎಫ್ ಸಂಸ್ಥೆಯ ನಿವೃತ್ತ ಅಧಿಕಾರಿ ನಾಗೇಂದ್ರ ರಾವ್ , ಶಾಲಾ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿನ್ನಿ ನಿರ್ಮಲ ಡಿಸೋಜ ಸ್ವಾಗತಿಸಿ, ರಾಜಶ್ರೀ ಧನ್ಯವಾದ ಸಮರ್ಪಿಸಿ, ವಿದ್ಯಾಗೌರಿ ಕಾರ್ಯಕ್ರಮ ನಿರೂಪಿಸಿದರು.