ಸನಾತನ ಧರ್ಮದವರಾದ ನಾವು ನಿತ್ಯ ಈಶ್ವರನ ಆರಾಧನೆ ಮಾಡಬೇಕು : ತಟ್ಟುವಟ್ಟು ವಾಸುದೇವ ಜೋಯಿಸ್

ಕುಂದಾಪುರ: ಅಮಾಸೆಬೈಲು ಸಮೀಪದ ಕಡವಾಸೆಯಲ್ಲಿ ನೂತನ ಶಿಲಾಮಯ ಗರ್ಭಗುಡಿ, ತೀರ್ಥ ಮಂಟಪ, ತೀರ್ಥ ಬಾವಿ ಹಾಗೂ ಇನ್ನಿತರ ಕಾರ್ಯಗಳೊಂದಿಗೆ ಜೀರ್ಣೋದ್ದಾರಗೊಂಡ ಶ್ರೀ ಖರೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕುಂಭಾಭಿಷೇಕವು ದಿನಾಂಕ 16.03.2026 ರ ಸೋಮವಾರದಂದು ವಿಜೃಂಭಣೆಯಿಂದ ಜರುಗಿತು.
ಶೃಂಗೇರಿ ಆಸ್ಥಾನದ ವಿದ್ವಾನ್ ತಟ್ಟುವಟ್ಟು ವಾಸುದೇವ ಜೋಯಿಸ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.
ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿದ ಶೃಂಗೇರಿ ಆಸ್ಥಾನದ ವಿದ್ವಾನ್ ತಟ್ಟುವಟ್ಟು ವಾಸುದೇವ ಜೋಯಿಸ್ ಮಾತನಾಡಿ ಖರೇಶ್ವರನ ಅಸ್ಮಿತೆ ಪುನಃ ಜಾಗೃತವಾಗಿದೆ, ನಮ್ಮ ಸನಾತನ ಧರ್ಮದಲ್ಲಿ ಅತ್ಯಂತ ಪ್ರಾಚೀನ ದೇವತೆ ಅಂದರೆ ಈಶ್ವರ ಹಾಗಾಗಿ ಸನಾತನ ಧರ್ಮದವರಾದ ನಾವು ನಿತ್ಯ ಈಶ್ವರನ ಆರಾಧನೆ ಮಾಡಬೇಕು. ಒಬ್ಬ ನಿಜವಾದ ಶಿವಭಕ್ತ ಖರೇಶ್ವರನ ಈ ಸನ್ನಿಧಿಗೆ ಬಂದಾಗ ಕೈಲಾಸಕ್ಕೆ ಹೋದ ಅನುಭವವಾಗುತ್ತದೆ ಅಂತಹ ಒಂದು ಅದ್ಬುತವಾದ ವಾತಾವರಣ ಇಲ್ಲಿ ಸೃಷ್ಟಿಯಾಗಿದೆ. ಬ್ರಹ್ಮಕಲಶ ಎನ್ನುವುದು ಅಂತ್ಯವಲ್ಲ ಆರಂಭ ಇನ್ನು ಮುಂದೆ ಗ್ರಾಮಸ್ಥರ ಜವಾಬ್ಧಾರಿ ಹೆಚ್ಚಾಗಿದೆ ಗ್ರಾಮದ ಪ್ರತಿಯೊಬ್ಬರೂ ಪ್ರತಿ ದಿನ ಅಥಾವ ವಾರಕ್ಕೆ ಒಮ್ಮೆಯಾದರು ದೇವಸ್ಥಾನಕ್ಕೆ ಬರುವಂತಾಗಬೇಕು ಎಂದು ಹೇಳಿದರು.

ದೇವಸ್ಥಾನದ ಶಿಲ್ಪಿ ಸುಧೀರ್ ಆಚಾರ್ಯ ಪೆರ್ಡೂರು ಅವರನ್ನು ಸನ್ಮಾನಿಸಲಾಯಿತು ಹಾಗೂ ವಿವಿಧ ದಾನಿಗಳು ಹಾಗೂ ಸೇವಾಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು
ವೇದಿಕೆಯಲ್ಲಿ ಅಮಾಸೆಬೈಲು ಶ್ರೀ ಕುಮಾರ ಸುಬ್ರಮಣ್ಯ ಪ್ರತಿಷ್ಠಾನ ಅಧ್ಯಕ್ಷ ನಟರಾಜ ಭಾಗವತ, ಸೂರ್ಯ ನಾರಾಯಣ ಐತಾಳ್ ಅಮಾಸೆಬೈಲು, ಕಡವಾಸೆ ಶ್ರೀ ಖರೇಶ್ವರ ದೇಗುಲದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ರಾಜೀವ ಶೆಟ್ಟಿ ಕಾನ್ ಬೈಲ್ ಉಪಸ್ಥಿತರಿದ್ದರು.
ಗಣೇಶ್ ಅರಸಮ್ಮಕಾನು, ಮುಖ್ಯ ಶಿಕ್ಷಕ ಶಶಿಧರ ಶೆಟ್ಟಿ ಶಾಂದ್ರಬೆಟ್ಟು ಕಾರ್ಯಕ್ರಮ ನಿರೂಪಿಸಿದರು.
ಸಾವಿರಾರು ಜನ ಊರ ಪರವೂರ ಭಕ್ತರು ದೇವರ ದರ್ಶನ ಪಡೆದು ಅನ್ನ ಪ್ರಸಾದ ಸ್ವೀಕರಿಸಿದರು.
ಸಂಜೆ ದೇವಸ್ಥಾನದಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

