ಕೆನರಾ ಹೈ ಸ್ಕೂಲ್ ಡೊಂಗರಕೇರಿ: ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

0
30

ಶೈಕ್ಷಣಿಕ ಚಿಂತಕ ಸಿ.ಎ. ಕಾರ್ಕಳ ಕಮಲಾಕ್ಷ ಕಾಮತ್ ಅವರಿಂದ ಪ್ರೇರಣಾದಾಯಕ ಉಪನ್ಯಾಸ

ಮಂಗಳೂರು: ಕೆನರಾ ಹೈ ಸ್ಕೂಲ್ ಮೈನ್, ಡೊಂಗರಕೇರಿ, ಮಂಗಳೂರಿನಲ್ಲಿ ಇಂದು ಹತ್ತನೇ ತರಗತಿಯ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಿ.ಎ. ಕಾರ್ಕಳ ಕಮಲಾಕ್ಷ ಕಾಮತ್ ಭಾಗವಹಿಸಿ “ವಿದ್ಯಾರ್ಥಿಗಳು ಭಯ ಮುಕ್ತ ವಾತಾವರಣದಲ್ಲಿ ಬೆಳೆಯಬೇಕು. ಯಾವುದೇ ಸಾಧನೆಗೆ ಹಿಂಜರಿಯಬಾರದು. ಶಿಕ್ಷಕರು ಹಾಗೂ ಹಿರಿಯರ ಬಗ್ಗೆಯೂ ಗೌರವದ ಮನೋಭಾವವನ್ನು ಬೆಳೆಸಬೇಕು. ಶಿಕ್ಷಣದಲ್ಲಿ ಉತ್ಕೃಷ್ಟತೆ, ಕಲಿಕೆಯ ಆಸಕ್ತಿ, ಶಿಸ್ತುಬದ್ಧ ಜೀವನಶೈಲಿ, ಸಂಪತ್ತಿನ ಸಕಾರಾತ್ಮಕ ನಿರ್ವಹಣೆ, ಉತ್ತಮ ವ್ಯಕ್ತಿತ್ವ ಮತ್ತು ನೈತಿಕ ಮೌಲ್ಯಗಳು ಯಶಸ್ಸಿಗೆ ಮುನ್ನಡೆಸುವ ಪ್ರಮುಖ ಅಂಶಗಳಾಗಿವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಮತ್ತು ಸನ್ಮಾನಪತ್ರಗಳನ್ನು ನೀಡಿ ಗೌರವಿಸಲಾಯಿತು.ಹಾಗೂ ಮುಖ್ಯ ಅತಿಥಿಯವರನ್ನು ಶಾಲು, ಫಲ ಪುಷ್ಪ ಸ್ಮರಣಿಕೆಯನ್ನು ಕೊಟ್ಟು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸರ್ವಾಂಗೀಣ ಯಶಸ್ಸಿಗೆ ಶಾಲೆಯ ಶಿಕ್ಷಕ-ವರ್ಗ ಹಾಗೂ ಪೋಷಕರ ಸಹಕಾರ ಮಹತ್ವಪೂರ್ಣವಾಗಿತ್ತು. ವಿದ್ಯಾರ್ಥಿಗಳ ಸಾಧನೆಗೆ ಆಧಾರವಾಗಿರುವ ಶಿಕ್ಷಕರ ತಪಸ್ಸು ಮತ್ತು ಪೋಷಕರ ಪ್ರೋತ್ಸಾಹ ಶ್ಲಾಘನೀಯವಾಗಿತ್ತು ಎಂಬ ಒಗ್ಗೂಡಿದ ಅಭಿಪ್ರಾಯವು ಕಾರ್ಯಕ್ರಮದಲ್ಲಿ ಪ್ರತಿಧ್ವನಿಸಿತು.
ಕಾರ್ಯಕ್ರಮದಲ್ಲಿ ಕೆನರಾ ಹೈ ಸ್ಕೂಲ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಡಿ. ವಾಸುದೇವ ಕಾಮತ್, ಉಪಾಧ್ಯಕ್ಷರಾದ ಶ್ರೀ ಕೆ. ಸುರೇಶ್ ಕಾಮತ್, ಶಾಲಾ ಸಂಚಾಲಕಿ ಶ್ರೀಮತಿ ಅಶ್ವಿನಿ ಕಾಮತ್, ಕೆನರಾ ವಿಕಾಸ ಸಂಸ್ಥೆಯ ಸಂಯೋಜಕರಾದ ಶ್ರೀ ಬಸ್ತಿ ಪುರುಷೋತ್ತಮ ಶೆಣೈ, ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅರುಣ ಕುಮಾರಿ, ಶಿಕ್ಷಕ-ಶಿಕ್ಷಕೇತರ ವೃಂದ, ಹಾಗೂ ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ಶಿಕ್ಷಕಿ ಪುಷ್ಪಲತಾ ಅವರು ಮಾಡಿದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅರುಣ ಕುಮಾರಿ ಅವರು ಹೃತ್ಪೂರ್ವಕ ಸ್ವಾಗತ ನೀಡಿದರು. ಶ್ರೀಮತಿ ಅನಿತಾ ಉಷಾ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here