ಬೆಂಗಳೂರು : ದೇಶದಲ್ಲಿ ತಲೆದೋರಿರುವ ಆಟೋ ಗ್ಯಾಸ್ ಸಮಸ್ಯೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಹೊಣೆಯಾಗಿದ್ದು, ತಮ್ಮದಲ್ಲದ ತಪ್ಪಿಗೆ ಹೈರಾಣಾಗಿರುವ ಆಟೋ ಚಾಲಕರಿಗೆ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ. ಆನಂದ್ ಕುಮಾರ್ ಆಗ್ರಹಿಸಿದ್ದಾರೆ.
ಎಲ್.ಪಿ.ಜಿ ಮತ್ತು ಸಿ.ಎನ್.ಜಿ ಪೂರೈಕೆ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದ್ದು, ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣದಿಂದ ಸಂಕಷ್ಟ ತಲೆದೋರಿದೆ. ಹೋಟೆಲ್ ಗಳು, ಆಥಿತ್ಯ ವಲಯ, ತರಕಾರಿ, ಕುಕ್ಕುಟೋದ್ಯಮ, ಮತ್ಸೋದ್ಯಮ, ಪ್ರವಾಸೋದ್ಯಮ ಹೀಗೆ ಪ್ರತಿಯೊಂದು ವಲಯ ತತ್ತರಿಸುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಬಾಧಿತರಾಗಿರುವವರು ಆಟೋ ಚಾಲಕರು. ಇವರ ನೆರವಿಗೆ ಕೇಂದ್ರ ಸರ್ಕಾರ ಕೂಡಲೇ ಧಾವಿಸಬೇಕು ಎಂದಿದ್ದಾರೆ.
ಅಧಿಕ ಮೌಲ್ಯದ ನೋಟುಗಳ ಅಮಾನ್ಯೀಕರಣದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದರು. ಕೋವಿಡ್ ಸಂದರ್ಭದಲ್ಲಿ ಜನ ಸಾಮಾನ್ಯರು ತೊಂದರೆಗೀಡಾದರು. ಇದೀಗ ಮಧ್ಯಪ್ರಾಚ್ಯ ರಾಷ್ಟ್ರಗಳ ಸಂಘರ್ಷದಿಂದ ಮತ್ತೆ ಅನಾಹುತ ಎದುರಾಗಿದೆ. ಆಟೋ ಚಾಲಕರು ಭಾರೀ ಸಂಕಷ್ಟದಲ್ಲಿದ್ದಾರೆ. ಸಾಲದ ಕಂತು ಪಾವತಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಶಿಕ್ಷಣ ಶುಲ್ಕ ಕಟ್ಟಲು ಆಗುತ್ತಿಲ್ಲ. ದಿನದ ತುತ್ತಿನ ಚೀಲ ತುಂಬಿಸುವುದು ದುಸ್ತರವಾಗಿದೆ. ಹೀಗಾಗಿ ಪ್ರತಿಯೊಂದು ಆಟೋ ಚಾಲಕರ ಕುಟುಂಬಕ್ಕೆ ತಕ್ಷಣಕ್ಕೆ ಹತ್ತು ಸಾವಿರ ರೂ ಹಣವನ್ನು ಪರಿಹಾರದ ರೂಪದಲ್ಲಿ ನೀಡಬೇಕು. ಎಲ್.ಪಿ.ಜಿ ದರ ಹೆಚ್ಚಳವಾಗದಂತೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಬ್ಯಾಂಕ್ ಸಾಲದ ಬಡ್ಡಿ ಮನ್ನಾ ಮಾಡಬೇಕು. ಸಾಲದ ಕಂತುಗಳ ಪಾವತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೂಡಬೇಕು ಎಂದು ಹೇಳಿದ್ದಾರೆ.
ಎಲ್.ಪಿ.ಜಿ, ಪಿ.ಎನ್.ಜಿ ಮತ್ತು ಸಿ.ಎನ್.ಜಿ ಅಗತ್ಯದ 90% ವರೆಗೆ ಪಶ್ಚಿಮ ಏಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಮುಂದಾಲೋಚನೆ, ಮುನ್ನೆಚ್ಚರಿಕೆ ಇಲ್ಲದ ಕಾರಣದಿಂದ ಸಮಸ್ಯೆ ಎದುರಾಗಿದೆ. ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ. ಇಂಧನ ದರಗಳನ್ನು ನಿಯಂತ್ರಿಸಲು ಸ್ಪಷ್ಟ ನೀತಿಯೇ ಇಲ್ಲ. ಆಟೋ ಚಾಲಕರಿಗೆ ದಿನನಿತ್ಯದ ಆದಾಯ ಕುಸಿತವಾಗಿದೆ. ಪ್ರಯಾಣಿಕರ ಮೇಲೆ ಹೆಚ್ಚುವರಿ ಭಾರ ಬೀಳುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ಹೆಚ್ಚಿಸಬೇಕು ಎಂದು ಹೇಳಿದ್ದಾರೆ.
ಆಟೋ ಗ್ಯಾಸ್ ಸಮಸ್ಯೆ ಕೇವಲ ಸ್ಥಳೀಯ ಸಮಸ್ಯೆಯಲ್ಲ, ಇದು ಜಾಗತಿಕ ಇಂಧನ ಸಂಕಷ್ಟ ಮತ್ತು ಕೇಂದ್ರ ಸರ್ಕಾರದ ನೀತಿ ನಿರ್ಧಾರಗಳೊಂದಿಗೆ ನೇರವಾಗಿ ಸಂಬಂಧಿಸಿದ್ದಾಗಿದೆ. ವಿದೇಶಾಂಗ ನೀತಿಯನ್ನು ಸಮರ್ಪಕವಾಗಿ ನಿರ್ವಹಿಸಿದ್ದರೆ ಇಂತಹ ಸಮಸ್ಯೆ ಎದುರಾಗುತ್ತಿರಲಿಲ್ಲ. 11 ವರ್ಷಗಳಿಂದ ಮೋದಿ ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ. ಆಟೋ ಗ್ಯಾಸ್ ಒಂದು ಸ್ಥಳೀಯ ಸಮಸ್ಯೆಯಷ್ಟೇ ಅಲ್ಲ. ಇದು ರಾಷ್ಟ್ರ ಮಟ್ಟದ ಇಂಧನ ನೀತಿ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯೊಂದಿಗೆ ನೇರವಾಗಿ ಸಂಬಂಧಿಸಿದ್ದಾಗಿದೆ. ಕೇಂದ್ರ ಸರ್ಕಾರವು ದೀರ್ಘಕಾಲೀನ ಪರಿಹಾರಗಳನ್ನು ರೂಪಿಸುವುದು ಅಗತ್ಯ ಎಂದು ಡಾ. ಆನಂದ್ ಕುಮಾರ್ ಒತ್ತಾಯಿಸಿದ್ದಾರೆ.

