ಶಿವಮೊಗ್ಗ ಜಿಲ್ಲೆ ಸಾಗರ ಎಸ್.ಎನ್. ನಗರದಲ್ಲಿ ಮನೆ ಮುಂದೆ ಆಟವಾಡುವಾಗ ಹಾವು ಕಡಿದು ಎರಡು ವರ್ಷದ ಮಗು ಸಾವನಪ್ಪಿದೆ. ಅಕ್ಷತಾ ಮತ್ತು ಗಣೇಶ್ ದಂಪತಿಯ ಪುತ್ರ ಭವಿನ್(2) ಮೃತಪಟ್ಟ ಪಾಪು. ಸಾಗರದಲ್ಲಿರುವ ತವರು ಮನೆಗೆ ಮಗುವಿನ ಜತೆಗೆ ಅಕ್ಷತಾ ಬಂದಿದ್ದರು. ಅಜ್ಜಿ ಮನೆ ಮುಂದೆ ಅಂಗಳದಲ್ಲಿ ಮಗು ಆಟವಾಡುತ್ತಿದ್ದ ವೇಳೆ ಹಾವು ಕಚ್ಚಿದೆ.
ಮಗು ಅಳುವುದನ್ನು ನೋಡಿದ ಕುಟುಂಬದವರು ಬಂದು ನೋಡಿದಾಗ ಹಾವು ಕಚ್ಚಿರುವುದು ಗೊತ್ತಾಗಿದೆ. ಕೂಡಲೇ ಪೋಷಕರು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಸಾಗರ ಟೌನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

