ನವದೆಹಲಿ: ದೆಹಲಿಯ ಮಾಳವೀಯ ನಗರದ ‘ಫ್ಲರಿಶ್ ಸ್ಟೇ’ ಬೆಡ್ ಆ್ಯಂಡ್ ಬ್ರೇಕ್ಫಾಸ್ಟ್ (BnB) ಹೋಟೆಲ್ನಲ್ಲಿ ಬುಧವಾರ ನಡೆದ ಭೀಕರ ಅಗ್ನಿ ದುರಂತದಲ್ಲಿ 21 ಜನರು ಸಜೀವ ದಹನವಾಗಿದ್ದರು. ಈ ಹೋಟೆಲ್ನ ಮಾಲೀಕ 60 ವರ್ಷದ ಲವ್ಕೇಶ್ ಬಜಾಜ್ ಈ ಹಿಂದೆಯೂ ಅನೇಕ ಅಪರಾಧಗಳನ್ನು ಎಸಗಿದ್ದ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಬಾಂಗ್ಲಾದೇಶದ ಪ್ರಜೆಗಳಿಗೆ ಪಾಸ್ಪೋರ್ಟ್ ಹಾಗೂ ಆಧಾರ್ ಕಾರ್ಡ್ ಸೇರಿದಂತೆ ನಕಲಿ ಭಾರತೀಯ ದಾಖಲೆಗಳನ್ನು ಒದಗಿಸಿ, ಅವರು ದೆಹಲಿಯಲ್ಲಿ ಕಾನೂನುಬಾಹಿರವಾಗಿ ನೆಲೆಸಲು ಸಹಾಯ ಮಾಡಿದ ಆರೋಪದ ಮೇಲೆ ಈತನನ್ನು 2025ರಲ್ಲೇ ದೆಹಲಿ ಪೊಲೀಸರು ಬಂಧಿಸಿದ್ದರು.
2025ರ ಜನವರಿಯಲ್ಲಿ ಬಾಂಗ್ಲಾದೇಶದ ಕುಟುಂಬವೊಂದು ನಕಲಿ ದಾಖಲೆಗಳನ್ನು ಬಳಸಿಕೊಂಡು ಸೆಂಟ್ರಲ್ ದೆಹಲಿಯ ಪಹಡ್ಗಂಜ್ ಪ್ರದೇಶದಲ್ಲಿ ವಾಸಿಸುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ತಕ್ಷಣ ದಾಳಿ ನಡೆಸಿದ ಪೊಲೀಸರು ಸ್ವೀಟಿ ಸರ್ಕಾರ್ ಮತ್ತು ಆಕೆಯ ಮಗಳು ಪುಷ್ಪೋ ಸರ್ಕಾರ್ ಎಂಬ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದಿದ್ದರು. ಅವರ ಬಳಿ ಯಾವುದೇ ಭಾರತೀಯ ಗುರುತಿನ ಚೀಟಿಗಳು ಇರಲಿಲ್ಲ.
ಆದರೆ, ಅವರ ಮನೆಯನ್ನು ಶೋಧಿಸಿದಾಗ 2 ಬಾಂಗ್ಲಾದೇಶಿ ಪಾಸ್ಪೋರ್ಟ್ಗಳು, 1 ನಕಲಿ ಭಾರತೀಯ ಪಾಸ್ಪೋರ್ಟ್, ಹಲವು ಆಧಾರ್ ಕಾರ್ಡ್ಗಳು ಮತ್ತು ಬ್ಯಾಂಕ್ ದಾಖಲೆಗಳು ಪತ್ತೆಯಾಗಿದ್ದವು. ಆಶ್ಚರ್ಯದ ಸಂಗತಿಯೆಂದರೆ, ಎಲ್ಲಾ ದಾಖಲೆಗಳಲ್ಲಿದ್ದ ಹೆಸರು ಮತ್ತು ವಿಳಾಸಗಳು ಬೇರೆಯಾಗಿದ್ದರೂ, ಫೋಟೋ ಮಾತ್ರ ಇವರಿಬ್ಬರದೇ ಆಗಿತ್ತು.
ಸ್ವೀಟಿ ಸರ್ಕಾರ್ ಹೊಂದಿದ್ದ ನಕಲಿ ಭಾರತೀಯ ಪಾಸ್ಪೋರ್ಟ್ನಲ್ಲಿ ದೆಹಲಿಯ ಛತ್ತರ್ಪುರ ಎನ್ಕ್ಲೇವ್ನ ವಿಳಾಸವಿತ್ತು. ಪೊಲೀಸರು ಈ ವಿಳಾಸವನ್ನು ಪರಿಶೀಲಿಸಿದಾಗ, ಅದು ಸದ್ಯ ದೆಹಲಿಯ ಹೋಟೆಲ್ ದುರಂತದ ಆರೋಪಿಯಾಗಿರುವ ಲವ್ಕೇಶ್ ಬಜಾಜ್ಗೆ ಸೇರಿದ್ದು ಎಂದು ತಿಳಿದುಬಂದಿತ್ತು. ವಿಚಾರಣೆ ವೇಳೆ, ಹಣದ ಆಸೆಗಾಗಿ ಬಾಂಗ್ಲಾದೇಶಿ ಕುಟುಂಬಕ್ಕೆ ಭಾರತೀಯ ದಾಖಲೆಗಳನ್ನು ಪಡೆಯಲು ತಮ್ನ ವಸತಿ ವಿಳಾಸವನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದಾಗಿ ಬಜಾಜ್ ಒಪ್ಪಿಕೊಂಡಿದ್ದ. ಆಗ ಪೊಲೀಸರು ಮೂವರನ್ನು ಬಂಧಿಸಿ ತಿಹಾರ್ ಜೈಲಿಗಟ್ಟಿದ್ದರು. ಸುಮಾರು 15 ದಿನಗಳ ನಂತರ ಬಜಾಜ್ ಜಾಮೀನಿನ ಮೇಲೆ ಹೊರಬಂದಿದ್ದ ಮತ್ತು ಈ ಪ್ರಕರಣ ಈಗಲೂ ನ್ಯಾಯಾಲಯದಲ್ಲಿದೆ.
ಮೊನ್ನೆ ನಡೆದ 12 ವಿದೇಶಿಗರು ಸೇರಿದಂತೆ 21 ಜನರನ್ನು ಬಲಿಪಡೆದ ಮಾಳವೀಯ ನಗರದ ಹೋಟೆಲ್ ಅಗ್ನಿ ದುರಂತದ ಬಳಿಕ ಲವ್ಕೇಶ್ ಬಜಾಜ್ ಮತ್ತೆ ಜೈಲು ಪಾಲಾಗಿದ್ದಾನೆ. ಬುಧವಾರ ರಾತ್ರಿ ನಡೆದ ವಿಚಾರಣೆಯಲ್ಲಿ ಈತ, “ಹೋಟೆಲ್ ಉರಿಯುತ್ತಿರುವುದನ್ನು ಮತ್ತು ಜನರು ಸಿಲುಕಿಕೊಂಡಿರುವುದನ್ನು ನೋಡಿದರೂ ನಾನು ಸಹಾಯ ಮಾಡಲು ನಿಲ್ಲದೆ, ಭಯದಿಂದ ಅಲ್ಲಿಂದ ಕಾರು ಚಲಾಯಿಸಿಕೊಂಡು ಓಡಿಹೋದೆ” ಎಂದು ಒಪ್ಪಿಕೊಂಡಿದ್ದಾನೆ. ಆತನ ಮಕ್ಕಳೂ ವಿದೇಶದಲ್ಲಿ ನೆಲೆಸಿರುವುದರಿಂದ ಆತ ದೇಶ ಬಿಟ್ಟು ಓಡಿಹೋಗುವ ಮುನ್ಸೂಚನೆ ಅರಿತ ಪೊಲೀಸರು, ಆತನ ಮತ್ತು ಆತನ ಪತ್ನಿಯ ವಿರುದ್ಧ ಲುಕೌಟ್ ನೋಟಿಸ್ (LOC) ಜಾರಿಗೊಳಿಸಿದ್ದರು.
ತನಿಖೆಯ ಪ್ರಕಾರ, ಶಾರ್ಟ್ ಸರ್ಕ್ಯೂಟ್ನಿಂದಾಗಿ ಈ ಬೆಂಕಿ ಅವಘಡ ಸಂಭವಿಸಿದೆ. ಈ ಹೋಟೆಲ್ಗೆ ಯಾವುದೇ ಅಗ್ನಿಶಾಮಕ ಇಲಾಖೆಯ NOC ಇರಲಿಲ್ಲ. ನಿಯಮಗಳ ಪ್ರಕಾರ ಕೇವಲ 6 ರೂಮ್ಗಳನ್ನು ನಡೆಸಲು ಮಾತ್ರ ಅನುಮತಿ ಇತ್ತು, ಆದರೆ ಬೇಸ್ಮೆಂಟ್ ಸೇರಿದಂತೆ ಒಟ್ಟು 25 ರೂಮ್ಗಳನ್ನು ಅಕ್ರಮವಾಗಿ ನಿರ್ಮಿಸಲಾಗಿತ್ತು. ಇಡೀ 5 ಅಂತಸ್ತಿನ ಕಟ್ಟಡಕ್ಕೆ ಕೇವಲ ಒಂದೇ ಪ್ರವೇಶ ಮತ್ತು ನಿರ್ಗಮನ ದ್ವಾರವಿದ್ದಿದ್ದರಿಂದ ಹಾಗೂ ಕಿಟಕಿಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದ್ದರಿಂದ ಜನರು ಹೊರಬರಲಾಗದೆ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

