ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಹರಡುತ್ತಿರುವ ಎಬೋಲಾ ವೈರಸ್ ಸೋಂಕಿನ ಹಿನ್ನೆಲೆ ಅಂತರರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ (PHEIC) ಘೋಷಿಸಿದೆ.
ಭಾರತ ಸರ್ಕಾರ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ದೇಶಾದ್ಯಂತ ಹೈ ಅಲರ್ಟ್ ಘೋಷಿಸಿದ್ದು, ಪ್ರಮುಖ ವಿಮಾನ ನಿಲ್ದಾಣಗಳು ಹಾಗೂ ಬಂದರುಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಆರಂಭಿಸಲಾಗಿದೆ. ವಿಶೇಷವಾಗಿ ಎಬೋಲಾ ಪೀಡಿತ ದೇಶಗಳಿಂದ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗುತ್ತಿದೆ.
ಸೋಂಕಿನ ಅನುಮಾನ ಕಂಡುಬಂದ ಪ್ರಯಾಣಿಕರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲು ವಿಶೇಷ ಐಸೋಲೇಶನ್ ವಾರ್ಡ್ಗಳನ್ನು ಸಜ್ಜುಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಈ ಬಾರಿ ಹರಡುತ್ತಿರುವ ವೈರಸ್ ಅಪರೂಪದ “ಬುಂಡಿಬುಗ್ಯೊ” ಎಬೋಲಾ ತಳಿಯಾಗಿದ್ದು, ಇದರ ವಿರುದ್ಧ ಇನ್ನೂ ಅಧಿಕೃತ ಲಸಿಕೆ ಅಥವಾ ನಿರ್ದಿಷ್ಟ ಔಷಧಿ ಲಭ್ಯವಿಲ್ಲ ಎಂದು WHO ಎಚ್ಚರಿಸಿದೆ.
ಎಬೋಲಾ ವೈರಸ್ ಪ್ರಮುಖ ಲಕ್ಷಣಗಳು:
- ತೀವ್ರ ಜ್ವರ ಮತ್ತು ತಲೆನೋವು
- ಮೈಕೈ ನೋವು ಹಾಗೂ ತೀವ್ರ ಸುಸ್ತು
- ಗಂಟಲು ನೋವು, ವಾಂತಿ ಮತ್ತು ಭೇದಿ
- ಗಂಭೀರ ಸ್ಥಿತಿಯಲ್ಲಿ ಆಂತರಿಕ ಹಾಗೂ ಬಾಹ್ಯ ರಕ್ತಸ್ರಾವ
ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು, ಸೋಂಕಿತರ ಸಂಪರ್ಕದಿಂದ ದೂರವಿರಬೇಕು ಹಾಗೂ ಯಾವುದೇ ಅನುಮಾನಾಸ್ಪದ ಲಕ್ಷಣಗಳು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
WHO ಮಾಹಿತಿ ಪ್ರಕಾರ, ಕಾಂಗೋ ಹಾಗೂ ಉಗಾಂಡಾದಲ್ಲಿ ಈಗಾಗಲೇ ನೂರಾರು ಶಂಕಿತ ಪ್ರಕರಣಗಳು ಮತ್ತು ಹಲವು ಸಾವುಗಳು ದಾಖಲಾಗಿದ್ದು, ಗಡಿಯಾಚೆ ಹರಡುವ ಅಪಾಯ ಹೆಚ್ಚಾಗಿದೆ.
ಸದ್ಯ ಪರಿಸ್ಥಿತಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಗಾ ವಹಿಸಿಕೊಂಡಿದ್ದು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಅಧಿಕೃತ ಮಾಹಿತಿಯನ್ನೇ ನಂಬುವಂತೆ ಮನವಿ ಮಾಡಲಾಗಿದೆ.

