ಹೆಬ್ರಿ : ಮಿಥಿಲಾ ನಗರದ ಅಮೃತ ಭಾರತಿ ವಿದ್ಯಾ ಕೇಂದ್ರದಲ್ಲಿ ‘ಪದವಿ ಪ್ರದಾನ ಕಾರ್ಯಕ್ರಮ’ವು ಅನ್ನಪೂರ್ಣ ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಅತಿಥಿ ಗಣ್ಯರನ್ನು ಘೋಷ ವಾದ್ಯಗಳ ಮೂಲಕ ಅನ್ನಪೂರ್ಣ ಸಭಾಂಗಣಕ್ಕೆ ಸ್ವಾಗತಿಸಲಾಯಿತು. ವೇದಿಕೆಯಲ್ಲಿ ಅಮೃತ ಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷರಾದ ಎಚ್ ಗುರುದಾಸ್ ಶೆಣೈಯವರು ಚುನಾಯಿತ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಪ್ರಮಾಣ ವಚನ ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಪಿಎಸ್ ಮುನಿಯಾಲ್ನ ಸಹ ಶಿಕ್ಷಕರಾದ ಪ್ರಕಾಶ್ ಪೂಜಾರಿ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, “ಶಾಲಾ ಮಟ್ಟದಲ್ಲಿ ಕಲಿತ ಜವಾಬ್ದಾರಿಯ ಪಾಠ ಭವಿಷ್ಯದಲ್ಲಿ ಸಮಾಜದ ಅಭಿವೃದ್ಧಿಗೆ ಪೂರಕವಾಗಿರಲಿದೆ. ನಾಯಕತ್ವದ ಜೊತೆಗೆ ಮಾನವೀಯತೆ ಅಗತ್ಯ” ಎಂದರು.
ವಿದ್ಯಾರ್ಥಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರಿಗೆ ಕೂಡ ‘ಸೋಲನ್ನು ಕೊನೆಯೆಂದೂ ಸ್ವೀಕರಿಸಬೇಡಿ’ ಎಂದು ಹುರಿದುಂಬಿಸಿದರು.
ವೇದಿಕೆಯಲ್ಲಿ ಅಮೃತ ಭಾರತಿ ವಿದ್ಯಾ ಕೇಂದ್ರದ ಪ್ರಾಂಶುಪಾಲರಾದ ಅರುಣ್ ಎಚ್ ವೈ , ಆಡಳಿತಾಧಿಕಾರಿ ವಿಜಯ್ ಕುಮಾರ್ ಶೆಟ್ಟಿ, ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಶಕುಂತಲಾ, ಸಮನ್ವಯ ಅಧಿಕಾರಿಗಳಾದ ರಕ್ಷಿತ್, ಪ್ರೀತಿ ಶೆಟ್ಟಿ, ಸುಗೀತಾ, ಗುಣವತಿ ಉಪಸ್ಥಿತರಿದ್ದರು.
ಶಿಕ್ಷಕಿ ಸೌಮ್ಯ ಉಪಾಧ್ಯಾಯ ಮತ್ತು ವಿದ್ಯಾರ್ಥಿನಿ ಪ್ರಿಯಾ ಶೆಟ್ಟಿ ನಿರೂಪಿಸಿದರು. ಶಿಕ್ಷಕಿ ಪ್ರತಿಭಾ ಅವರು ಅತಿಥಿಗಳನ್ನು ಪರಿಚಯಿಸಿದರು. ಕುಮಾರಿ ಸಂಸ್ಕೃತಿ ಜೆ ನಾಯಕ್ ಸ್ವಾಗತಿಸಿದರು. ನಿಶ್ಚಿತ್ ಕೆ.ವಿ. ವಂದಿಸಿದರು.

