ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಮುನ್ನ ಗ್ರಾಮಸಭೆ ನಡೆಸಿ : ಮಲೆಕುಡಿಯ ಸಂಘ ಆಗ್ರಹ

0
16

ಉಡುಪಿ: ಕಸ್ತೂರಿ ರಂಗನ್​ ವರದಿ ಅನುಷ್ಠ್ಠಾನದಿಂದ ಕಾಡಂಚಿನ ಮಲೆಕುಡಿಯ, ಇತರ ಬುಡಕಟ್ಟು ಸಮುದಾಯಗಳ ಸಾವಿರಾರು ಜನರ ಜೀವನಕ್ಕೆ ತೀವ್ರ ಸಮಸ್ಯೆಯಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸಭೆಗಳನ್ನು ನಡೆಸಿ, ಅಭಿಪ್ರಾಯ ಸಂಗ್ರಹಿಸಿ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರ ತೀರ್ಮಾನಕೈಗೊಳ್ಳಬೇಕು ಎಂದು ರಾಜ್ಯ ಮಲೆಕುಡಿಯ ಸಂಘ ಅಧ್ಯಕ್ಷ ಶ್ರೀಧರ ಗೌಡ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಯಥಾ ಸ್ಥಿತಿ ಯೋಜನೆ ಜಾರಿಯಿಂದ ಹಲವು ವರ್ಷಗಳಿಂದ ಈ ಭಾಗದಲ್ಲಿ ಜೀವನ ಕಟ್ಟಿಕೊಂಡು ಬಂದಿರುವ ಕೃಷಿಕರು, ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರ ಬದುಕು ಅತಂತ್ರವಾಗಲಿದೆ. ವಿಶೇಷವಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾವನ ವ್ಯಾಪ್ತಿಯಲ್ಲಿರುವ ಮಲೆಕುಡಿಯವರು ಹಾಗೂ ಇತರ ಅರಣ್ಯ ಬುಡಕಟ್ಟುಗಳ ಜನಜೀವನಕ್ಕೆ ಸಮಸ್ಯೆಯಾಗಲಿದೆ. ಜೊತೆಗೆ 2006ರ ಅರಣ್ಯ ಹಕ್ಕು ಕಾಯ್ದೆಗೆ ವರದಿಯಿಂದ ಧಕ್ಕೆಯಾಗಲಿದೆ. ಹೀಗಾಗಿ ಭೌತಿಕ ಸಮೀೆಕ್ಷೆ ಕೈಗೊಳ್ಳಬೇಕು. ಏಕಪಯ ನಿರ್ಧಾರ ಕೈಗೊಳ್ಳಬಾರದು ಎಂದು ಆಗ್ರಹಿಸಿದರು.

ರಾಜ್ಯದ ಮುಖ್ಯಮಂತ್ರಿಗಳು ಕೂಡಲೇ ಈ ವಿಷಯದಲ್ಲಿ ಸಭೆ ಕರೆದು ಸಾಧಕ- ಬಾಧಕಗಳ ವಿಸತ ಚರ್ಚೆ ನಡೆಸಿ, ವಿರೋಧದ ರ್ನಿಣಯವನ್ನು ಕೇಂದ್ರಕ್ಕೆ ಕಳುಹಿಸಬೇಕು. ಜನಜೀವನ ಪ್ರದೇಶದಿಂದ ಯೋಜನೆಯನ್ನು ದೂರವಿಟ್ಟು ಕಾಡು ಪ್ರದೇಶಗಳಿಗಷ್ಟೇ ಸೀಮಿತಗೊಳಿಸಬೇಕು ಎಂದರು.

2014ರಲ್ಲಿ ಕೇಂದ್ರ ಸರ್ಕಾರ ಮೊದಲು ಕರಡು ಅಧಿಸೂಚನೆ ಪ್ರಕಟಿಸಿದಾಗ ಈ ವ್ಯಾಪ್ತಿಯ ಜನರಿಂದ ತೀವ್ರ ವಿರೋಧ ವ್ಯಕ್ತವಾದಾಗ ಎಲ್ಲಾ ಜನಾಗ್ರಹ ಸಭೆಗಳಲ್ಲಿ ಈ ವರದಿ ತಿರಸ್ಕರಿಸುವಂತೆ ಒಕ್ಕೊರಳಿನ ಅಭಿಪ್ರಾಯ ಮಂಡನೆಯಾಗಿತ್ತು. 2015 ಹಾಗೂ 2017ರಂದು ಕೇಂದ್ರ ಸರ್ಕಾರ ಪುನ@ ಕರಡು ಅಧಿಸೂಚನೆ ಪ್ರಕಟಿಸಿದಾಗಲೂ ಜನರ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವರದಿಯನ್ನು ತಿರಸ್ಕರಿಸಿತ್ತು. ಜನವಿರೋಧಿ ಯೋಜನೆಗಳನ್ನು ಹೇರಿಕೆ ಮಾಡಿದಲ್ಲಿ ಮತ್ತೆ ನಕ್ಸಲ್​ ಚಳುವಳಿ ಪ್ರಾರಂಭವಾಗುವ ಭಯ ಜನರಲ್ಲಿ ಆವರಿಸಿದೆ ಎಂದರು. ಉಡುಪಿ ಜಿಲ್ಲಾಧ್ಯಕ್ಷ ಗಂಗಾಧರ ಗೌಡ, ರಾಜ್ಯ ಉಪಾಧ್ಯಕ್ಷೆ ವಸಂತಿ ನೆಲ್ಲಿಕಾರು, ದ.ಕ. ಜಿಲ್ಲಾಧ್ಯಕ್ಷ ಹರೀಶ್​, ಅಶೋಕ್​ ಕೆರ್ವಾಶೆ ಉಪಸ್ಥಿತರಿದ್ದರು.