ಜನರ ತೆರಿಗೆ ಹಣದಲ್ಲಿ ಕಟ್ಟಿದ ಶೌಚಾಲಯ ತಕ್ಷಣ ಓಪನ್ ಮಾಡಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಪುರಸಭೆ ಅಧಿಕಾರಿಗಳಿಗೆ ಕರವೇ ಸ್ವಾಭಿಮಾನಿ ಬಣ ಖಡಕ್ ವಾರ್ನಿಂಗ್

0
5

ಕೊಡಗು : ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿ ಕುಶಾಲನಗರದ ಪುರಸಭೆ ಕಚೇರಿಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಸಾರ್ವಜನಿಕ ವಿರೋಧಿ ಧೋರಣೆ ಪರಾಕಾಷ್ಠೆ ತಲುಪಿದೆ. ಪ್ರತಿದಿನ ಕಂದಾಯ ಪಾವತಿ, ಖಾತೆ ಬದಲಾವಣೆ ಸೇರಿದಂತೆ ನೂರಾರು ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಬರುವ ಜನಸಾಮಾನ್ಯರಿಗೆ ಕನಿಷ್ಠ ಶೌಚಾಲಯದ ವ್ಯವಸ್ಥೆಯೂ ಇಲ್ಲದೆ ನರಕಯಾತನೆ ಅನುಭವಿಸುವಂತಾಗಿದೆ.

ಈ ಕಣ್ಣೀರಿನ ಸಮಸ್ಯೆಯನ್ನು ಖಂಡಿಸಿ ಹಾಗೂ ಸಾರ್ವಜನಿಕರ ಪರವಾಗಿ ಧ್ವನಿ ಎತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಇಂದು ಪುರಸಭೆ ಆವರಣಕ್ಕೆ ಆಕಸ್ಮಿಕ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸುವ ಮೂಲಕ ಅಧಿಕಾರಿಗಳ ಕಡಕ್ ವಾರ್ನಿಂಗ್

ಪುರಸಭೆಯ ಕೆಳಭಾಗದ ಪಾರ್ಕಿಂಗ್ ಕಟ್ಟಡದ ಒಳಗೆ ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ಬಳಸಿ ಈಗಾಗಲೇ ಸುಸಜ್ಜಿತ ಶೌಚಾಲಯ ಕಟ್ಟಡವನ್ನು ನಿರ್ಮಿಸಲಾಗಿದೆ. ಕಾಮಗಾರಿ ಸಂಪೂರ್ಣ ಮುಗಿದು ಬಳಕೆಗೆ ಸಿದ್ಧವಾಗಿದ್ದರೂ, ಅಧಿಕಾರಿಗಳು ಅದನ್ನು ಉದ್ಘಾಟಿಸದೆ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿಲ್ಲ. ಸಿದ್ಧವಾಗಿರುವ ಶೌಚಾಲಯಕ್ಕೆ ಬೀಗ ಜಡಿದು ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಸ್ತುತ ಮಳೆಗಾಲದ ಅಬ್ಬರ ಜೋರಾಗಿದ್ದು, ಸುರಿಯುವ ಮಳೆಯಲ್ಲೇ ಕಚೇರಿ ಕೆಲಸಗಳಿಗಾಗಿ ಗಂಟೆಗಟ್ಟಲೆ ಕಾಯುವ ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರು ಶೌಚಾಲಯ ಇಲ್ಲದೆ ತೀವ್ರ ಮುಜುಗರ ಹಾಗೂ ಪರದಾಟ ಎದುರಿಸುತ್ತಿದ್ದಾರೆ. ಕಚೇರಿಗೆ ಬರುವ ಮಹಿಳೆಯರ ಕಷ್ಟಕ್ಕೆ ಸ್ಪಂದಿಸದ ಪುರಸಭೆ ಆಡಳಿತಕ್ಕೆ ಮಾನವೀಯತೆ ಇಲ್ಲವೇ? ಎಂದು ಕರವೇ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಪ್ರಶ್ನಿಸಿದ್ದಾರೆ.

ಜನರ ತೆರಿಗೆ ಹಣದಲ್ಲಿ ಎಸಿ ರೂಮಿನಲ್ಲಿ ಕೂರುವ ಅಧಿಕಾರಿಗಳಿಗೆ ಜನಸಾಮಾನ್ಯರ ಕಷ್ಟ ಕಾಣಿಸುತ್ತಿಲ್ಲವೇ? ಕಾಗದದ ಮೇಲೆ ಕೆಲಸ ಮುಗಿಸಿ ಶೌಚಾಲಯಕ್ಕೆ ಬೀಗ ಹಾಕಿ ಧೂಳು ಹಿಡಿಯಲು ಬಿಟ್ಟಿರುವುದು ಅಕ್ಷಮ್ಯ ಅಪರಾಧ. ಕೂಡಲೇ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ತಕ್ಷಣವೇ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು,” ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ಉಪಾಧ್ಯಕ್ಷರಾದ ರಾಜಶೇಖರ್ ಗೌಡ ಮತ್ತು ಕರವೇ ಸ್ವಾಭಿಮಾನಿ ಬಣದ ಗೌರವಾಧ್ಯಕ್ಷರಾದ ಚಂದ್ರು ಹಾಗೂ ಕರವೇ ಸ್ವಾಭಿಮಾನಿ ಬಣದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಜಯಶ್ರೀ ಮುರುಗೇಶ್ ಮತ್ತು ಜಿಲ್ಲಾ ಸಂಚಲಕರಾದ ಸತೀಶ್ ಮತ್ತು ಕುಶಾಲನಗರ ಕರವೇ ಸ್ವಾಭಿಮಾನಿ ಬಣದ ತಾಲ್ಲೂಕು ಸಂಚಾಲಕರಾದ ವಿಪಿ ಚಂದ್ರಣ್ಣ ಮತ್ತು ನಂಜಪ್ಪ ಮತ್ತು ರಮೇಶ್ ಮತ್ತು ವಿಲ್ಸನ್ ಉಪಸ್ಥಿತರಿದ್ದರು.