ಉಡುಪಿ: ಯಾವುದೇ ವಿಚಾರವನ್ನು ಕೇವಲ ಶಬ್ದ ಅಥವಾ ವಾಕ್ಯದ ದೃಷ್ಟಿಯಿಂದ ಮಾತ್ರ ವಿಶ್ಲೇಷಿಸಿದರೆ ನಮಗೆ ಶ್ರೇಷ್ಠವಾದ ಆದರ್ಶಗಳು ಸಿಗುವುದಿಲ್ಲ. ಯಾವುದೇ ತತ್ವದ ಸದ್ಬಳಕೆಯಾಗಬೇಕಾದರೆ ಅದಕ್ಕೆ ವಿವೇಕದ ಸ್ಪರ್ಶ ಅಗತ್ಯ. ವಿವೇಕವಿಲ್ಲದ ದಯೆ ಆಪತ್ತು. ಧರ್ಮವಿಲ್ಲದ ದಯೆ ಅನರ್ಥಕ್ಕೆ ದಾರಿ ಎಂದು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ವೀರೇಶಾನಂದ ಸರಸ್ವತಿ ಹೇಳಿದರು.
ಕುಂಜಿಬೆಟ್ಟುವಿನಲ್ಲಿರುವ ಎಂಜಿಎಂ ಕಾಲೇಜು ಆವರಣದ ನೂತನ ರವೀಂದ್ರ ಮಂಟಪದಲ್ಲಿ ಗುರುವಾರ ಗುರು ಎಂದರೆ ಲಘು ಅಲ್ಲ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಬಸವಣ್ಣನವರ ದಯೆಯೇ ಧರ್ಮದ ಮೂಲವಯ್ಯ ಎಂಬ ಪ್ರಸಿದ್ಧ ವಚನದ ಸಾಲಿನ ಬಗ್ಗೆ ಡಿ.ವಿ.ಗುಂಡಪ್ಪ (ಡಿವಿಜಿ) ‘ಜೀವನ ಧರ್ಮಯೋಗ’ ಗ್ರಂಥದಲ್ಲಿ ವಿಶ್ಲೇಷಿಸಿದ್ದಾರೆ. ಆದ್ದರಿಂದ ದಯೆಗೆ ಅರ್ಹರಾದವರು ಯಾರು ಮತ್ತು ಶಿಕ್ಷೆಗೆ ಗುರಿಯಾಗಬೇಕಾದವರು ಯಾರು ಎಂಬ ಸ್ಪಷ್ಟ ವಿವೇಚನಾ ಶಕ್ತಿ ಸಮಾಜದಲ್ಲಿ ಇರಬೇಕು.
ಯಾವುದೇ ಹಳೆಯ ವಿಚಾರಗಳನ್ನು ಕೇವಲ ತಿರಸ್ಕರಿಸುವುದು ವೈಚಾರಿಕತೆಯಲ್ಲ. ಪ್ರತಿ ವಿಚಾರವನ್ನು ಶ್ರದ್ಧೆ ಹಾಗೂ ಆಂತರಿಕ ವಿಶ್ಲೇಷಣೆಗೆ ಒಳಪಡಿಸಿದಾಗ ಮಾತ್ರ ಅದರ ವಿವಿಧ ಆಯಾಮಗಳು ಅನಾವರಣಗೊಳ್ಳುತ್ತವೆ. ವಿಪರೀತ ಲೌಕಿಕ ಅಭಿಲಾಷೆ ಮತ್ತು ಜಾತ್ಯತಿತತೆಯಿಂದ ಮನುಷ್ಯನಲ್ಲಿ ಆಧ್ಯಾತ್ಮಿಕ ಭಾವನೆಗಳು ನಶಿಸಿ, ಯಾಂತ್ರಿಕ ಸಮಾಜ ನಿರ್ಮಾಣವಾಗುತ್ತದೆ ಎಂದು
ಆಧ್ಯಾತ್ಮವನ್ನು ಯಾವ ವಿಜ್ಞಾನಿಯೂ ಪೂರ್ಣವಾಗಿ ತಿರಸ್ಕರಿಸಿಲ್ಲ. ಆಲ್ಬರ್ಟ್ ಐನ್ಸ್ಟ್ರಿನ್ ವಿಜ್ಞಾನದಿಂದ ಬಾಂಬ್ ಸ್ಫೋಟಿಸಬಹುದು ಅಥವಾ ಅಣುಶಕ್ತಿಯನ್ನು ಉತ್ಪಾದಿಸಬಹುದು, ಆದರೆ ಮಾನವನ ಅಂತರಂಗದ ದುರ್ಗುಣಗಳನ್ನು ಹೋಗಲಾಡಿಸಲು ವಿಜ್ಞಾನಕ್ಕೆ ಸಾಧ್ಯವಿಲ್ಲ. ವ್ಯಕ್ತಿತ್ವ ನಿಮಾರ್ಣದಲ್ಲಿ ವಿಜ್ಞಾನಕ್ಕೆ ತನ್ನದೇ ಆದ ಇತಿಮಿತಿಗಳಿವೆ ಎಂಬ ಮಾತನ್ನು ಹೇಳಿದ್ದರು. ಭಾವಪ್ರಪಂಚದಲ್ಲಿ ವಿಹರಿಸುವ ಸಂಸ್ಕೃತಿ ವಾರಿಸುದಾರರು ಭಾರತೀಯರು ಎಂದು ತಿಳಿಸಿದರು.
ಎಂಜಿಎಂ ಕಾಲೇಜು ಟ್ರಸ್ಟ್ನ ಅಧ್ಯಕ್ಷ ಡಾ. ಟಿ. ಸತೀಶ್ ಯು. ಪೈ ಸ್ವಾಮಿ ವೀರೇಶಾನಂದರ ಗುರು ಎಂದರೆ ಲಘು ಅಲ್ಲ ಕೃತಿ ಬಿಡುಗಡೆ ಮಾಡಿದರು. ಆಡಳಿತಾಧಿಕಾರಿ ಡಾ. ಕೆ. ಶ್ರೀಧರ್ ಆರ್. ಪೈ, ಕಾಲೇಜಿನ ಉಪಪ್ರಾಂಶುಪಾಲ ಡಾ. ವಿಶ್ವನಾಥ್ ಪೈ ಎಂ, ಟಿ. ಮೋಹನದಾಸ್ ಪೈ ಕೌಶಲ್ಯಾಭಿವೃದ್ಧಿ ಕೇಂದ್ರದ ನಿರ್ದೇಶಕ ರಂಗ ಪೈ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಡಾ. ಗಾಯತ್ರಿ ಜಿ. ಪೈ, ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ನಾಯಕ್ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಮಾಲತಿ ದೇವಿ ಉಪಸ್ಥಿತರಿದ್ದರು.

