ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದಿರೆ ಮತ್ತು ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ ಕಡಂದಲೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾಟ ಕಡಂದಲೆ ಸುಬ್ರಮಣ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಆಗಸ್ಟ್ 25 ರಂದು ಉದ್ಘಾಟನೆಗೊಂಡಿತು.
ಕಡಂದಲೆ ಸುಬ್ರಮಣ್ಯ ಸ್ವಾಮಿಯ ಸಂಚಾಲಕರಾದ ಕೆ. ಸುದರ್ಶನ ಶೆಟ್ಟಿ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಶಕ್ತ ಶರೀರಕ್ಕೆ ಕ್ರೀಡೆ ಅತೀ ಅಗತ್ಯ. ಶಿಕ್ಷಣ ಇಲಾಖೆ ಕ್ರೀಡೆ, ಆಟೋಟಗಳಿಗೂ ಮಹತ್ವ ನೀಡುತ್ತಿರುವುದು ಪ್ರಶಂಸನೀಯ ಎಂದರು. ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷ ನ್ಯಾಯವಾದಿ ಕೆ. ರಮಾನಂದ ಪಂಡಿತ್ ಮಾತನಾಡಿ, ಕಬಡ್ಡಿ ಪಂದ್ಯಾಟವು ಶಾರೀರಿಕವಾಗಿ ಶಕ್ತಿಯನ್ನು ನೀಡುವ ಆಟವಾಗಿದ್ದು, ಉತ್ತಮ ದೈಹಿಕ ಬೆಳವಣಿಗೆಯನ್ನು ಕೂಡ ನೀಡುತ್ತದೆ. ತಾಲೂಕು ಮಟ್ಟದ ಪಂದ್ಯಾಟ ನಮ್ಮ ಕಡಂದಲೆಯಲ್ಲಿ ಊರಿನ ಸಂಭ್ರಮದಂತೆ ನಡೆಯುತ್ತಿದೆ. ಊರಿನವರ ಸಂಪೂರ್ಣ ಸಹಕಾರಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಪಾಲಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಮಿತಾ ನಾಯ್ಕ್ ಕ್ರೀಡಾಂಗಣದ ಉದ್ಘಾಟನೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಮಂಗಳೂರು ಕೆಎಂಎಫ್ ನಿರ್ದೇಶಕ ಸುಚರಿತ ಶೆಟ್ಟಿ, ಅಮೆಚೂರು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ವಿವೇಕ್ ಆಳ್ವ, ಪಾಲಡ್ಕ ಗ್ರಾಮ ಪಂಚಾಯತ್ ಸದಸ್ಯ ಜಗದೀಶ್ ಕೋಟ್ಯಾನ್ ತೊಂದಡ್ಪು, ಕಾಂತಿ ಶೆಟ್ಟಿ, ಅಮಿತಾ ನಾಗೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ವಿರುಪಾಕ್ಷಪ್ಪ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಂದ್ರ ಭಟ್, ಹಾಸ್ಟೆಲ್ ಮೇಲ್ವಿಚಾರಕ ಅರುಣ್ ಕುಮಾರ್ ವೇದಿಕೆಯಲ್ಲಿ ಹಾಜರಿದ್ದರು.
ಒಟ್ಟು 40 ತಂಡಗಳು ಭಾಗವಹಿಸಿವೆ. ಮುಖ್ಯ ಶಿಕ್ಷಕ ದಿನಕರ್ ಕುಂಭಾಶಿ ಸ್ವಾಗತಿಸಿದರು. ರೂಪಿತ್ ರೈ ಕಾರ್ಯಕ್ರಮ ನಿರ್ವಹಿಸಿದರು. ಸಂಪತ್ತು ರಾಜ್ ವಂದಿಸಿದರು.
ವರದಿ ರಾಯಿ ರಾಜಕುಮಾರ ಮೂಡುಬಿದಿರೆ
