ಕಿರುಷಷ್ಠಿ ಬಳಿಕ ಜೀಣೋದ್ಧಾರ ಕಾರ್ಯ ಕೈಗೊಳ್ಳುವ ಕುರಿತು ಸಭೆಯಲ್ಲಿ ನಿರ್ಣಯ
ಮೂಡುಬಿದಿರೆ: ದೀಪಾವಳಿ ಬಳಿಕ ಅಷ್ಟಮಂಗಲವಿಟ್ಟು, ಕಿರುಷಷ್ಠಿ ನಂತರ ಜೀಣೋದ್ಧಾರ ಕಾರ್ಯ ಕೈಗೊಳ್ಳುವ ಕುರಿತು ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಭಕ್ತರ ಸಭೆಯಲ್ಲಿ ನಿರ್ಣಸಲಾಯಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸತೀಶ್ ಬಿ. ಶೆಟ್ಟಿ ದೊಡ್ಡಮನೆ ಅಧ್ಯಕ್ಷತೆಯಲ್ಲಿ ಇಂದು ಭಾನುವಾರ ದೇವಳದಲ್ಲಿ ನಡೆದ ಸಭೆಯಲ್ಲಿ ಜೀರ್ಣೋದ್ಧಾರ, ದೇವಳ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು.
ಸತೀಶ್ ಬಿ. ಶೆಟ್ಟಿ ದೊಡ್ಡಮನೆ ಸಭೆಯಲ್ಲಿ ಮಾತನಾಡಿ, ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶ ಕೇವಲ ಒಬ್ಬ ವ್ಯಕ್ತಿಯಿಂದ ಆಗುವಂತದಲ್ಲ. ಅದಕ್ಕೆ ಊರಿನವರ ಒಗಟ್ಟಿನ ನಿರಂತರ ಸಹಕಾರ, ಪರವೂರಿನವರ ಸಹಕಾರವೂ ಬೇಕಾಗುತ್ತದೆ. ಭಕ್ತರು ಪ್ರತಿಹಂತದಲ್ಲೂ ವ್ಯವಸ್ಥಾಪನ ಸಮಿತಿಯೊಂದಿಗೆ ಕೈಜೋಡಿಸುವಂತೆ ವಿನಂತಿಸಿದರು.
ಕೆಎಂಎಫ್ ನಿರ್ದೇಶಕ ಕೆ.ಪಿ. ಸುಚರಿತ ಶೆಟ್ಟಿ ಮಾತನಾಡಿ, ಮುಂದೆ ಜೀರ್ಣೋದ್ಧಾರ ಸಮಿತಿ ಸಹಿತ ವಿವಿಧ ಸಮಿತಿಗಳನ್ನು ರಚಿಸಲಾಗುವುದು. ಈ ಸಂದರ್ಭದಲ್ಲಿ ಭಕ್ತರ, ಗ್ರಾಮಸ್ಥರ ಸಹಕಾರ ಅಗತ್ಯ. ಯಾವುದೇ ವಿಘ್ನಗಳು ಬಾರದ ರೀತಿಯಲ್ಲಿ ದೇವಳದ ಅಭಿವೃದ್ಧಿಗೆ ಎಲ್ಲರು ಶ್ರಮಿಸಬೇಕು. ನಾನು ಸಾಮಾನ್ಯ ಭಕ್ತನಾಗಿ ದೇವಳದ ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ ಎಂದರು.
ವ್ಯವಸ್ಥಾಪನ ಸಮಿತಿಯ ಸದಸ್ಯ, ವಕೀಲ ಕೆ.ಪಿ ಪ್ರಕಾಶ್ ಎಲ್. ಶೆಟ್ಟಿ ಮುಂಬೈ ಮಾತನಾಡಿ, ದೇವಳ ಅಭಿವೃದ್ಧಿಯಾಗದೆ ಊರಿಗೆ ಕ್ಷೇಮವಿಲ್ಲ. ಕಡಂದಲೆ ಕ್ಷೇತ್ರ ಜೀರ್ಣೋದ್ಧಾರ ಆಗಬೇಕೆನ್ನುವುದು ಇಲ್ಲಿನ ಭಕ್ತರ ಬಹು ವರ್ಷಗಳ ಇಚ್ಛೆ. ಭಕ್ತರ ಸಹಕಾರದಿಂದ ಅಭಿವೃದ್ಧಿ ಕೆಲಸಗಳು ಅದಷ್ಟು ಬೇಗ ಆಗುವಂತಾಗಲಿ ಎಂದರು.
ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸುದರ್ಶನ್ ಶೆಟ್ಟಿ ಕೆ. ಕಡಂದಲೆಗುತ್ತು, ಕೆ.ಸುಬ್ಬಯ್ಯ ಶೆಟ್ಟಿ ಬಂಡಸಾಲೆ, ವಾಸುದೇವ ರಾವ್, ನಯನ ಸತೀಶ್ ಮಾರ್ಲ, ವಿಮಲಾ ಲೀಲಾಧರ್ ಪೂಜಾರಿ, ಕೇಶವ ಬಾರೆಬೆಟ್ಟು, ಕೆ.ಸುಂದರ ಗೌಡ, ದೇವಳದ ಅರ್ಚಕ ಸನತ್ ಭಟ್, ಭಕ್ತರು ಉಪಸ್ಥಿತರಿದ್ದರು. ಸುರೇಂದ್ರ ಭಟ್ ನಿರೂಪಿಸಿದರು.
ವರದಿ: ಜಗದೀಶ ಪೂಜಾರಿ, ಕಡಂದಲೆ

