ಮೂಡುಬಿದಿರೆ: ಶ್ರೀ ಮೂಕಾಂಬಿಕಾ ಕುಣಿತ ಭಜನಾ ಮಂಡಳಿ ಕರಿಯಣ್ಣನಂಗಡಿ ಬೆಳುವಾಯಿ ತಂಡದ ಗುರುಗಳಾದ ವಿಜಯ್ ನೀರ್ಕೆರೆ ಅವರಿಗೆ ಗುರುವಂದನೆ ಕಾರ್ಯಕ್ರಮವು ಬುಧವಾರ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ತಂಡದ ನೂತನ ಮಹಿಳಾ ಮಂಡಳಿ ಹಾಗೂ ಪುರುಷ ಮಂಡಳಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭವೂ ನೆರವೇರಿತು.
ಮಹಿಳಾ ಮಂಡಳಿಯ ಗೌರವಾಧ್ಯಕ್ಷೆಯಾಗಿ ಸುಖಲತಾ, ಅಧ್ಯಕ್ಷೆಯಾಗಿ ದೀಪ್ತಿ ಪ್ರದೀಪ್, ಉಪಾಧ್ಯಕ್ಷೆಯಾಗಿ ಮಲ್ಲಿಕಾ ಭಂಡಾರಿ, ಕಾರ್ಯದರ್ಶಿಯಾಗಿ ದಿವ್ಯಶ್ರೀ, ಕೋಶಾಧಿಕಾರಿಯಾಗಿ ಪುಷ್ಪ ಹಾಗೂ ಮುಖ್ಯ ಸಲಹೆಗಾರರಾಗಿ ಸವಿಲತಾ ಮತ್ತು ವಾರಿಜ ಆಯ್ಕೆಯಾದರು.

ಪುರುಷ ಮಂಡಳಿಯ ಅಧ್ಯಕ್ಷರಾಗಿ ರೋಶನ್, ಉಪಾಧ್ಯಕ್ಷರಾಗಿ ಸೂರಜ್ ಆಳ್ವ, ಪ್ರಧಾನ ಕಾರ್ಯದರ್ಶಿಯಾಗಿ ಶಿವಾನಂದ ನಾಯ್ಕ್, ಕಾರ್ಯದರ್ಶಿಯಾಗಿ ಮಂಜುನಾಥ್ ಸುವರ್ಣ, ಪ್ರಧಾನ ಕೋಶಾಧಿಕಾರಿಯಾಗಿ ಲಕ್ಷ್ಮಣ್ ನಾಯ್ಕ್, ಕೋಶಾಧಿಕಾರಿಯಾಗಿ ಸಂಜೀವ, ಖಜಾಂಜಿಯಾಗಿ ವಿಶ್ವನಾಥ್ ಕುಲಾಲ್ ಹಾಗೂ ಮುಖ್ಯ ಸಲಹೆಗಾರರಾಗಿ ರಂಜಿತ್ ನಾಯಕ್ ಪದಗ್ರಹಣ ಮಾಡಿದರು.
10ನೇ ತರಗತಿಯಲ್ಲಿ ಶೇ.88.48 ಅಥವಾ 553 ಅಂಕ ಗಳಿಸಿದ ಕುಮಾರಿ ಸಿಂಚನ ಕರಿಯನಂಗಡಿ ಬೆಳುವಾಯಿ ಅವರಿಗೆ ಸನ್ಮಾನ ಮಾಡಲಾಯಿತು. ಇವರು ಶ್ರೀ ಮೂಕಾಂಬಿಕಾ ಕುಣಿತ ಭಜನಾ ಮಂಡಳಿ ಕರಿಯಣ್ಣನಂಗಡಿ ತಂಡದ ಸಕ್ರಿಯ ಸದಸ್ಯೆಯಾಗಿದ್ದು , ಭಜನಾ ತಂಡಕ್ಕೆ ಹಾಗೂ ತಮ್ಮ ಊರಿಗೆ ಕೀರ್ತಿ ತಂದಿರುತ್ತಾರೆ.

ನೂತನ ಪದಾಧಿಕಾರಿಗಳಿಗೆ ತಂಡದ ಸದಸ್ಯರು ಹಾಗೂ ಭಕ್ತರು ಅಭಿನಂದನೆ ಸಲ್ಲಿಸಿ, ಅವರ ಅಧಿಕಾರಾವಧಿಯಲ್ಲಿ ತಂಡವು ಇನ್ನಷ್ಟು ಅಭಿವೃದ್ಧಿ ಹೊಂದಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುನ್ನಡೆಯಲಿ ಎಂದು ಶ್ರೀ ಮೂಕಾಂಬಿಕೆ ಮಹಾದೇವಿಯಲ್ಲಿ ಪ್ರಾರ್ಥಿಸಿದರು.
ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಉಚಿತ ಕೊಡೆಗಳನ್ನು ವಿತರಿಸಲಾಯಿತು. ತಂಡದ ಸದಸ್ಯರು, ಭಕ್ತರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

