ಮಡಿಕೇರಿ : ತಾಲ್ಲೂಕಿನ ತಡಿಯಂಡಮೋಳ್ ಬೆಟ್ಟದಲ್ಲಿ ಗುರುವಾರ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳದ ಶರಣ್ಯ (35) ಭಾನುವಾರ ಪತ್ತೆಯಾಗಿದ್ದಾರೆ. ಸ್ಥಳೀಯ ಕುಡಿಯ ಜನಾಂಗದವರು ಹುಡುಕಾಟ ನಡೆಸುವಾಗ ಕಾಡಿನೊಳಗೆ ಮಹಿಳೆ ಪತ್ತೆಯಾಗಿದ್ದು, ಅವರನ್ನು ಕಾಡಿನಿಂದ ಕರೆದುಕೊಂಡು ಬರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇವರ ಪತ್ತೆಗಾಗಿ ಅರಣ್ಯ, ಪೊಲೀಸ್, ನಕ್ಸಲ್ ನಿಗ್ರಹ ದಳ ಹಾಗೂ ಸ್ಥಳೀಯರು ಸೇರಿದಂತೆ ಒಟ್ಟು 9 ತಂಡಗಳನ್ನು ನಿಯೋಜಿಸಲಾಗಿತ್ತು. ಥರ್ಮಲ್ ಡ್ರೋನ್ ಕ್ಯಾಮೆರಾ, ಶ್ವಾನದಳವನ್ನೂ ಬಳಸಲಾಗಿತ್ತು.
ಕೇರಳದಿಂದ ಒಬ್ಬರೇ ಬಂದಿದ್ದ ಅವರು ಆನ್ಲೈನ್ನಲ್ಲಿ ನೋಂದಾಯಿಸಿ ಚಾರಣಕ್ಕಾಗಿ ಹೊರಟಿದ್ದರು. ತಾವು ತಂಗಿದ್ದ ಹೋಂಸ್ಟೇಯವರನ್ನು ಗುರುವಾರ ಮಧ್ಯಾಹ್ನ ಸಂಪರ್ಕಿಸಿದ್ದ ಮಹಿಳೆ, ದಾರಿ ತಪ್ಪಿರುವುದಾಗಿ ಹೇಳಿದ್ದರು. ಬಳಿಕ ಅವರ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿತ್ತು.

