ಧರ್ಮಾಚರಣೆಯ ಮೂಲಕ ಆಧ್ಯಾತ್ಮಿಕ ಬಲ ಹೆಚ್ಚಿಸಿ ಹಿಂದೂ ರಾಷ್ಟ್ರ ಸ್ಥಾಪನೆಗೆ ಕಟಿಬದ್ಧರಾಗಿ: ಪೂಜ್ಯ ರಮಾನಂದ ಗೌಡ ಕರೆ
ಮಂಗಳೂರು : “ಧರ್ಮವೇ ರಾಷ್ಟ್ರದ ಅಧಿಷ್ಠಾನವಾಗಿದೆ. ಪ್ರಸ್ತುತ ಕಲಿಯುಗದಲ್ಲಿ ಮನುಷ್ಯನು ಲೌಕಿಕ ಸುಖವನ್ನೇ ಸತ್ಯವೆಂದು ನಂಬಿ ‘ನಾನು ಮತ್ತು ನನ್ನದು’ ಎಂಬ ಭ್ರಮೆಯಲ್ಲಿದ್ದಾನೆ. ಈ ಭ್ರಮೆಯಿಂದ ಹೊರಬಂದು ಧರ್ಮದ ಜ್ಞಾನವನ್ನು ಪಡೆದು, ಸಾಧನೆಯ ಮೂಲಕ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಿಕೊಂಡರೆ ಮಾತ್ರ ಹಿಂದೂ ರಾಷ್ಟ್ರದ ಸ್ಥಾಪನೆ ಸಾಧ್ಯ” ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂಜ್ಯ ರಮಾನಂದ ಗೌಡ ಅವರು ಮಾರ್ಗದರ್ಶನ ಮಾಡಿದರು.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನ ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಅವರು ಅಧ್ಯಾತ್ಮ ಮತ್ತು ರಾಷ್ಟ್ರರಕ್ಷಣೆಯ ಕುರಿತು ಚೈತನ್ಯದಾಯಕವಾಗಿ ಮಾತನಾಡಿದರು.

ಪೂಜ್ಯ ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡುತ್ತಾ, “ನಮ್ಮ ಇತಿಹಾಸದಲ್ಲಿ ಗುರು-ಶಿಷ್ಯ ಪರಂಪರೆಯು ಧರ್ಮದ ಉತ್ಥಾನಕ್ಕೆ ಭದ್ರ ಬುನಾದಿ ಹಾಕಿದೆ. ಛತ್ರಪತಿ ಶಿವಾಜಿ ಮಹಾರಾಜರು, ಹಕ್ಕ-ಬುಕ್ಕರು ಗುರುಗಳ ಮಾರ್ಗದರ್ಶನದಲ್ಲೇ ಹಿಂದವೀ ಸ್ವರಾಜ್ಯ ಮತ್ತು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿ ಆದರ್ಶ ರಾಜ್ಯಾಡಳಿತ ನೀಡಿದರು. ಅಂದು ರಾಜಪ್ರಭುತ್ವದ ಮೇಲೆ ಧರ್ಮದ ಅಧಿಷ್ಠಾನವಿದ್ದ ಕಾರಣ ಸಮಾಜ ಆದರ್ಶವಾಗಿತ್ತು. ಇಂದು ಕೂಡ ಧರ್ಮಸಂಸ್ಥಾಪನೆಯ ಈ ಮಹತ್ಕಾರ್ಯದಲ್ಲಿ ಯಶಸ್ವಿಯಾಗಲು ಗುರುಗಳ ಮಾರ್ಗದರ್ಶನ ಮತ್ತು ಆಶೀರ್ವಾದ ಪಡೆಯುವುದು ಅನಿವಾರ್ಯವಾಗಿದೆ” ಎಂದು ಗುರುವಿನ ಮಹತ್ವವನ್ನು ತಿಳಿಸಿದರು.
ಇದೇ ವೇಳೆ ರಾಷ್ಟ್ರದ ಇಂದಿನ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, “ಪ್ರಸ್ತುತ ಭ್ರಷ್ಟ ಮತ್ತು ಅನೀತಿವಂತ ರಾಜಕಾರಣಿಗಳಿಂದ ರಾಷ್ಟ್ರದ ಅವನತಿಯಾಗುತ್ತಿದೆ. ಕೇವಲ ಹಿಂದೂ ದೇವಸ್ಥಾನಗಳ ಮೇಲೆ ಸರ್ಕಾರಿ ಹಸ್ತಕ್ಷೇಪವಾಗುತ್ತಿರುವುದು ಧರ್ಮದ ಮೇಲಿನ ಆಘಾತವಾಗಿದೆ. ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಉಕ್ತಿಯಂತೆ ಯಾರು ಧರ್ಮಕ್ಕಾಗಿ ಸಮರ್ಪಿಸಿಕೊಳ್ಳುತ್ತಾರೋ, ಅವರನ್ನು ಭಗವಂತನೇ ರಕ್ಷಿಸುತ್ತಾನೆ. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ಹಾಗೂ ಅನೇಕ ಸಂತರು ಮುಂದೆ ಕಾಲಮಹಿಮೆಯಂತೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ ಈ ದೈವೀಕಾರ್ಯದಲ್ಲಿ ನಾವೆಲ್ಲರೂ ಧರ್ಮದ ಆಚರಣೆಯೊಂದಿಗೆ ರಾಷ್ಟ್ರ ನಿರ್ಮಾಣದ ಕಾರ್ಯ ಮಾಡಬೇಕಿದೆ ಎಂದು ಹೇಳಿದ್ದರು ಎಂದು ತಿಳಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ಡಾ. ಪ್ರಣವ್ ಮಲ್ಯ ಅವರು, ಮತಾಂತರ ಮತ್ತು ಲವ್ ಜಿಹಾದ್ನಂತಹ ಆಪತ್ತುಗಳನ್ನು ಎದುರಿಸಲು ಪ್ರತಿಯೊಬ್ಬ ಹಿಂದೂವಿಗೂ ಧರ್ಮಶಿಕ್ಷಣದ ಅವಶ್ಯಕತೆಯಿದೆ ಎಂದರು. ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಉಚಿತವಾಗಿ ನೀಡುತ್ತಿರುವ ಧರ್ಮಶಿಕ್ಷಣದ ಲಾಭವನ್ನು ಪಡೆಯಲು ಆಸಕ್ತರು 7204082652 ಸಂಖ್ಯೆಯನ್ನು ಸಂಪರ್ಕಿಸಬೇಕೆಂದು ಅವರು ವಿನಂತಿಸಿದರು. ಕಾರ್ಯಕ್ರಮವು ಧರ್ಮಪ್ರೇಮಿಗಳಲ್ಲಿ ಧರ್ಮನಿಷ್ಠೆ ಮತ್ತು ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವಲ್ಲಿ ಯಶಸ್ವಿಯಾಯಿತು.

