ಕಾಸರಗೋಡು : ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಸೂರಂಬೈಲ್ ಸರಕಾರಿ ಪ್ರೌಢಶಾಲೆಯಲ್ಲಿ ಶನಿವಾರ ನಡೆದ ಏಕದಿನ ಕನ್ನಡ ಸಾಹಿತ್ಯ ರಚನಾ ಶಿಬಿರದಲ್ಲಿ ವಿದ್ಯಾರ್ಥಿಗಳು ನಡೆಸಿದ ಸಾಹಿತ್ಯ ಚಟುವಟಿಕೆಗಳ ಹಸ್ತಪ್ರತಿ ಸಂಕಲನಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ‘ವ್ಯಂಗ್ಯಾಂತರಂಗ’, ‘ಚಿತ್ರ ಜಗತ್ತು’ ಮತ್ತು ‘ಲೇಖನ ಮಾಲೆ’ ಹಸ್ತಪ್ರತಿ ಸಂಕಲನವನ್ನು ಶಿಕ್ಷಣ ತಜ್ಞ ವಿ ಬಿ ಕುಳಮರ್ವ, ಸಾಹಿತಿ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಮತ್ತು ಸಾಹಿತಿ ಲಕ್ಷ್ಮಿ ವಿ ಭಟ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪರಿಷತ್ತಿನ ಜಿಲ್ಲಾಧ್ಯಕ್ಷ ವಿರಾಜ್ ಅಡೂರು, ಕಾರ್ಯದರ್ಶಿ ದೇವರಾಜ ಆಚಾರ್ಯ ಸೂರಂಬೈಲು, ಶಾಲಾ ಶಿಕ್ಷಕ ಚಂದ್ರಶೇಖರ ಡಿ, ಕಾಸರಗೋಡಿನ ಕನ್ನಡ ಭವನದ ಕಾರ್ಯದರ್ಶಿ ವಸಂತ ಕೆರೆಮನೆ ಇದ್ದರು. ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳಿಗೆ ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿ, ಪುಸ್ತಕ ಬಹುಮಾನ ವಿತರಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಪ್ರಮಾಣಪತ್ರ ಹಾಗೂ ಪುಸ್ತಕ ಸ್ಮರಣಿಕೆ ವಿತರಿಸಲಾಯಿತು. ಷರಿಷತ್ತಿನ ವತಿಯಿಂದ ಶಿಬಿರ ನಡೆಸಲು ಅವಕಾಶ ನೀಡಿದ ಶಾಲೆಯ ಮುಖ್ಯಸ್ಥರನ್ನು ಅಭಿನಂದಿಸಲಾಯಿತು. ಪ್ರಬಂಧ, ಕವನ ಹಾಗೂ ವ್ಯಂಗ್ಯಚಿತ್ರ ವಿಭಾಗದ ತಲಾ ಇಬ್ಬರಿಗೆ ಪುಸ್ತಕ ಬಹುಮಾನ ವಿತರಿಸಲಾಯಿತು.