ಬೀರಿ, ಮಂಗಳೂರು: ರಹ್ಮಾನಿಯಾ ವೆಲ್ಫೇರ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ.), ಬೀರಿ, ಮಂಗಳೂರು ವತಿಯಿಂದ ಕನಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ನಾಟೆಕಲ್, ಮಂಗಳೂರು ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಭಾನುವಾರ (ಆ.23) ಕೊಟ್ಟೆಕಾರು ಸಹಕಾರ ಬ್ಯಾಂಕ್, ಬೀರಿ ಶಾಖೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ಯುವಜನರು ಉತ್ಸಾಹದಿಂದ ಪಾಲ್ಗೊಂಡು ರಕ್ತದಾನ ಮಾಡಿದರು. ಇದೇ ಸಂದರ್ಭದಲ್ಲಿ ಕನಚೂರು ಆಸ್ಪತ್ರೆಯ ತಜ್ಞ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಜನರಲ್ ಮೆಡಿಸಿನ್, ನೇತ್ರ, ಮಕ್ಕಳ, ಮೂಳೆ ಹಾಗೂ ಶಸ್ತ್ರಚಿಕಿತ್ಸಾ ವಿಭಾಗಗಳ ತಜ್ಞರು ಸಾರ್ವಜನಿಕರನ್ನು ತಪಾಸಣೆ ಮಾಡಿ ಅಗತ್ಯ ವೈದ್ಯಕೀಯ ಸಲಹೆ ನೀಡಿದರು. ಅರ್ಹ ಫಲಾನುಭವಿಗಳಿಗೆ ಉಚಿತ ಔಷಧಿ ವಿತರಿಸುವ ವ್ಯವಸ್ಥೆಯೂ ಮಾಡಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಹ್ಮಾನಿಯಾ ವೆಲ್ಫೇರ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಕೆ. ಶೇಖ್ ಅಬ್ದುಲ್ ಕರೀಂ ವಹಿಸಿದ್ದರು. ಗೌರವಾಧ್ಯಕ್ಷ ಎ. ಎಚ್. ಮಹ್ಮೂದ್ ಹಾಜಿ, ಮುಖ್ಯ ಅತಿಥಿ ಕೊಟ್ಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಗಣ್ಯ ಅತಿಥಿಗಳ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಕರ್ಮೆಲ್ ಹೈಯರ್ ಪ್ರೈಮರಿ ಶಾಲೆ, ಕೊಟ್ಟೆಕಾರು ಇದರ ಪ್ರಾಂಶುಪಾಲೆ ಸಿಸ್ಟರ್ ಪ್ರಮೀಲಾ ಡಿ’ಸೋಜಾ, ಬದ್ರಿಯಾ ಜುಮ್ಮಾ ಮಸೀದಿ, ಅಜಿನಡ್ಕದ ಉಪಾಧ್ಯಕ್ಷ ಮೊಹಮ್ಮದ್ ಬಶೀರ್, ಕೊಟ್ಟೆಕಾರು ಉದ್ಯಮಿ ಹಾಗೂ ಗಣ್ಯ ಅತಿಥಿ ಅಬ್ದುಲ್ಲಾ ಹಾಜಿ ಕೆ.ಎಂ., ಕನಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ವ್ಯವಸ್ಥಾಪಕ ಅಬ್ದುಲ್ಲಾ ಖಾನ್, ಸೋಮೇಶ್ವರ ಟೌನ್ ಮುನ್ಸಿಪಲ್ ಕೌನ್ಸಿಲ್ನ ನಾಮನಿರ್ದೇಶಿತ ಸದಸ್ಯ ದಿಲೀಪ್ ರೆಗೋ ಹಾಗೂ ಕೊಟ್ಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ನಿರ್ದೇಶಕ ರಾಘವ್ ಆರ್. ಉಚ್ಚಿಲ್ ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
ರಕ್ತದಾನವು ಅಮೂಲ್ಯ ಜೀವಗಳನ್ನು ಉಳಿಸುವ ಮಹತ್ವದ ಸಾಮಾಜಿಕ ಸೇವೆಯಾಗಿದ್ದು, ಸಾರ್ವಜನಿಕರಲ್ಲಿ ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿತ್ತು. ಆರೋಗ್ಯ ತಪಾಸಣಾ ಶಿಬಿರದ ಮೂಲಕ ಸಾರ್ವಜನಿಕರಿಗೆ ತಜ್ಞ ವೈದ್ಯರಿಂದ ಉಚಿತ ಸಲಹೆ ಹಾಗೂ ಆರೋಗ್ಯ ಸೇವೆ ದೊರೆಯಿತು.
ಕಾರ್ಯಕ್ರಮದ ಯಶಸ್ಸಿಗೆ ಟ್ರಸ್ಟ್ನ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರಮಿಸಿದರು. ಪ್ರಧಾನ ಕಾರ್ಯದರ್ಶಿ ಅಯೂಬ್ ಗಾಲಿಬ್ ಖಾನ್, ಖಜಾಂಚಿ ಶೇಖ್ ಅರ್ಷದ್ ಅಮೀನ್, ಜಂಟಿ ಕಾರ್ಯದರ್ಶಿ ಶೇಖ್ ಮೊಹಮ್ಮದ್ ಅರ್ಫಾನ್, ಉಪ ಖಜಾಂಚಿ ಶೇಖ್ ಮನ್ಸೂರ್ ಅಹ್ಮದ್ ಹಾಗೂ ಯುವ ಘಟಕದ ಉಪಾಧ್ಯಕ್ಷ ಶೇಖ್ ಮೊಹಮ್ಮದ್ ಮೊಹ್ಸಿನ್ ಸೇರಿದಂತೆ ಟ್ರಸ್ಟ್ನ ಸದಸ್ಯರು ಕಾರ್ಯಕ್ರಮದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

