ಮುಲ್ಕಿ: ತಾಲೂಕು ಕೇಂದ್ರವಾಗಿರುವ ಮುಲ್ಕಿಯ ಸಮುದಾಯ ಅರೋಗ್ಯ ಕೇಂದ್ರವನ್ನು ಶೀಘ್ರ ತಾಲೂಕು ಅಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಮೂಲ್ಕಿ ನಗರ ಪಂಚಾಯಿತಿ ನಿರ್ಣಯ ಕೈಗೊಂಡು ಸರಕಾರಕ್ಕೆ ಮನವಿ ಸಲ್ಲಿಸಿದೆ.
ನಪಂ ಅಧ್ಯಕ್ಷ ಸತೀಶ್ ಅಂಚನ್ ಅಧ್ಯಕ್ಷತೆಯಲ್ಲಿ ಗುರುವಾರ ಸಮುದಾಯ ಭವನದಲ್ಲಿ ನಡೆದ ನಗರ ಪಂಚಾಯಿತಿ ಮಾಸಿಕ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಂಡು ಸರಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು.
ನಗರ ಪಂಚಾಯತ್ ವ್ಯಾಪ್ತಿಯ ಕೊಳಚಿಕಂಬಳ ನಾರಾಯಣಗುರು ಪಾರ್ಕ್, ನಪಂ ಕಛೇರಿ ಹಿಂಭಾಗದ ಪಾರ್ಕ್ ಮತ್ತು ಗಾಂಧಿ ಮೈದಾನದಲ್ಲಿ ರಾತ್ರಿ ವೇಳೆ ಮದ್ಯ ಮತ್ತು ಗಾಂಜಾ ವ್ಯಸನಿಗಳ ಹಾವಳಿ ಕಂಡುಬಂದಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಅಧ್ಯಕ್ಷ ಸತೀಶ್ ಅಂಚನ್ ಮತ್ತು ಮುಖ್ಯಾಧಿಕಾರಿ ಮಧುಕರ್ ಕೆ. ಪೋಲಿಸ್ ಇಲಾಖೆಯಲ್ಲಿ ಮನವಿ ಮಾಡಿದರು.
ಈ ಬಗ್ಗೆ ಸಭೆಯಲ್ಲಿ ಉಪಸ್ಥಿತರಿದ್ದ ಎಎಸ್ಐ ಹರಿಶೇಖರ್ ಪ್ರತಿಕ್ರಿಯಿಸಿ, ಸಮಸ್ಯೆಯ ಬಗ್ಗೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.
ನಗರ ಪಂಚಾಯತ್ ವ್ಯಾಪ್ತಿಯ ವಿಜಯ ಸನ್ನಿಧಿ ಸಂಕೀರ್ಣ ಮತ್ತು ಕೊಕ್ಕರಕಲ್ ಬಳಿ ಸರ್ವಿಸ್ ರಸ್ತೆ ಚರಂಡಿಗಳಲ್ಲಿ ತ್ಯಾಜ್ಯ ನೀರು ಹರಿಯುತ್ತಿದ್ದು, ದುರ್ವಾಸನೆಯಿಂದ ನಡೆದಾಡಲೂ ಕಷ್ಟ. ಸೂಕ್ತ ಕ್ರಮಕ್ಕಾಗಿ ಸದಸ್ಯರಾದ ಯೋಗೀಶ್ ಕೋಟ್ಯಾನ್ ಮತ್ತು ಬಾಲಚಂದ್ರ ಕಾಮತ್ ಆಗ್ರಹಿಸಿದರು.
ಸಾರ್ವಜನಿಕ ಗ್ರಂಥಾಲಯಕ್ಕೆ ಸರಕಾರಿ ಜಾಗ ಮೀಸಲಿಟ್ಟಿದ್ದರೂ, ಅನುದಾನದ ಕೊರತೆಯಿಂದ ಕಟ್ಟಡ ನಿರ್ಮಾಣ ಅಸಾಧ್ಯವಾಗಿದೆ. ಖಾಲಿ ಸರಕಾರಿ ಕಟ್ಟಡವಿದ್ದಲ್ಲಿ ಗ್ರಂಥಾಲಯಕ್ಕೆ ಮತ್ತು ಮುಲ್ಕಿ ತಾಲೂಕು ಪತ್ರಕರ್ತರ ಸಂಘಕ್ಕೆ ನೀಡುವಂತೆ ಅಧ್ಯಕ್ಷ ಸತೀಶ್ ಅಂಚನ್ ಉಪತಹಶಿಲ್ದಾರ್ ದಿಲೀಪ್ ರೋಡ್ಕರ್ ಬಳಿ ಮನವಿ ಮಾಡಿದರು.
ಮಂಗಳೂರಿನಿಂದ ಬಪ್ಪನಾಡುವರೆಗೆ ವಾರದೊಳಗೆ ಸರಕಾರಿ ಶಟಲ್ ಬಸ್ಸು ಸೇವೆ ಆರಂಭಗೊಳ್ಳಲಿದೆ ಎಂದು ಸದಸ್ಯೆ ವಿಮಲಾ ಪೂಜಾರಿ ಮಾಹಿತಿ ನೀಡಿದರು. ಮೂಲ್ಕಿಯಿಂದ ಮೂಡುಬಿದಿರೆ ಮತ್ತು ಕಟೀಲು, ಬಜಪೆಗೂ ಬಸ್ಸು ಸೇವೆ ಆರಂಭಿಸುವಂತೆ ಮನವಿ ಮಾಡಲಾಯಿತು. ಸ್ಥಳೀಯಾಡಳಿತದ ಪರವಾನಗಿ ಇಲ್ಲದೆ ಮುಲ್ಕಿ ರೈಲ್ವು ನಿಲ್ದಾಣದಿಂದ ಕಾರ್ನಾಡ್ ಗಾಂಧಿ ಮೈದಾನ ಬಳಿಯ ಬಿಎಸ್ಎನ್ಎಲ್ ಭೂಗತ ಕೇಬಲ್ ಅಳವಡಿಕೆ ಕಾಮಗಾರಿಗೆ ತಡೆ ನೀಡಲಾಗಿದೆ. ಈ ಬಗ್ಗೆ ಸೂಕ್ತ ಅನುಮತಿ ಪಡೆದು ಕಾಮಗಾರಿ ಮುಂದುವರಿಸುವಂತೆ ನಿರ್ದೇಶಿಸಲಾಯಿತು.
ನಗರ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಬಾರಿ ವಿದ್ಯುತ್ ಕಡಿತ ಮತ್ತು ಮೆಸ್ಕಾಂ ಕಛೇರಿ ದೂರವಾಣಿ ಕೆಟ್ಟು ಹೋಗಿರುವ ಬಗ್ಗೆ ಸದಸ್ಯ ಪುತ್ತುಬಾವ ಆಕ್ಷೇಪ ವ್ಯಕ್ತಪಡಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.
ಮೆಸ್ಕಾಂ ಎಸ್ಒ ಕೃಷ್ಣಪ್ಪ ಮಳೆಗಾಲದ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಮೂಲ್ಕಿ ಸಬ್ರಿಜಿಸ್ಟ್ರಾರ್ ಕಛೇರಿಯಿಂದ ಮೂಲ್ಕಿ ನಪಂಗೆ ಬಾಕಿ ಇರುವ ಶೇ.3 ಸೆಸ್ ಬಗ್ಗೆ ಮಾಹಿತಿ ಕೇಳಲಾಯಿತು. ಕಳೆದ 4 ವರ್ಷಗಳಿಂದ ರೂ. 22ಲಕ್ಷ ಬಾಕಿ ಇದೆ ಎಂದು ತಿಳಿಸಲಾಯಿತು.
ಮುಲ್ಕಿ ನಗರಕ್ಕೆಮಂಜೂರಾದ ಅಗ್ನಿಶಾಮಕ ದಳವು ಉಳ್ಳಾಲಕ್ಕೆ ಮಂಜೂರಾದ ಬಗ್ಗೆ ಸದಸ್ಯರಾದ ಪುತ್ತುಬಾವ, ಯೋಗೀಶ್ ಕೋಟ್ಯಾನ್, ಬಾಲಚಂದ್ರ ಕಾಮತ್, ವಿಮಲಾ ಪೂಜಾರಿ ಮಾತನಾಡಿ ಸೂಕ್ತ ಉತ್ತರ ನೀಡುವಂತೆ ಆಗ್ರಹಿಸಿದರು.
ಶಾಂಭವಿ ಹೊಳೆಗೆ ಕೋಳಿ ಅಂಗಡಿಗಳ ತ್ಯಾಜ್ಯ, ಕಸ ಸಂಗ್ರಹಣೆಯಲ್ಲಿ ವಿಳಂಬ, ಎ ಖಾತಾ ಗೊಂದಲ, ಹೆದ್ದಾರಿ ಇಲಾಖೆ ಸಹಿತ ಅಧಿಕಾರಿಗಳ ಗೈರು, ಅರಣ್ಯ ಇಲಾಖೆಯ ಸಮಸ್ಯೆ, ಇತ್ಯಾದಿಗಳ ಬಗ್ಗೆ ಸದಸ್ಯರಾದ ಸುಭಾಷ್ ಶೆಟ್ಟಿ, ಮಂಜುನಾಥ ಕಂಬಾರ, ತಿಲಕ್, ಶೈಲೇಶ್ ಕುಮಾರ್, ದಯಾವತಿ ಅಂಚನ್, ರಾಧಿಕ ಕೋಟ್ಯಾನ್ ಮಾತನಾಡಿದರು.
ಉಪಾಧ್ಯಕ್ಷೆ ಲಕ್ಷ್ಮೀ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಮಧುಕರ್ ಕೆ ಸ್ವಾಗತಿಸಿದರು.
ಘನ ತ್ಯಾಜ್ಯ ನಿರ್ವಹಣೆಗಾಗಿ ವಾಣಿಜ್ಯ ಮಳಿಗೆಗಳಿಗೆ ಕಳೆದ ಸಭೆಯಲ್ಲಿ ಮಾಸಿಕ ದರ ನಿಗದಿಪಡಿಸಿ ನಿರ್ಣಯ ಕೈಗೊಂಡು ರೂ. 36 ಲಕ್ಷ ಗುರಿ ಹೊಂದಲಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಮತ್ತು ನಪಂ ಸದಸ್ಯರಿಂದ ತೀವ್ರ ವಿರೋಧ ಬಂದ ಬಳಿಕ ಮಾಸಿಕ ದರ ಮರುನಿಗದಿಪಡಿಸಲಾಗಿದ್ದು, ರೂ. 12 ಲಕ್ಷ ಸಂಗ್ರಹದ ಗುರಿ ಹೊಂದಲಾಗಿದೆ.
ಹೋಟೆಲ್ಗೆ ರೂ.300 (ಮಾಸಿಕ), ಕ್ಯಾಂಟೀನ್, ಬೇಕರಿ, ಫಾಸ್ಟ್ಫುಡ್, ಆಸ್ಪತ್ರೆ, ಮೆಡಿಕಲ್, ಹಾರ್ಡ್ವೇರ್ ಶಾಪ್, ಸರ್ವಿಸ್ ಸ್ಟೇಶನ್, ಗ್ಯಾರೇಜ್, ಅಟೋಮೊಬೈಲ್ ಅಂಗಡಿ, ಹೂವಿನ ಅಂಗಡಿ, ಮರದ ಮಿಲ್, ಗೋದಾಮು, ಗುಡಿ ಕೈಗಾರಿಕೆಗಳಿಗೆ ಮಾಸಿಕ ರೂ.150, ವಸತಿ ಗೃಹ, ವೈನ್ ಶಾಪ್, ರೆಸ್ಟೋರೆಂಟ್, ಬಟ್ಟೆ ಶೋರೂಮ್, ಸೂಪರ್ ಮಾರ್ಕೆಟ್ಗಳಿಗೆ ಮಾಸಿಕ ರೂ.600, ತರಕಾರಿ ಅಂಗಡಿ, ಹಣ್ಣಿನ ಅಂಗಡಿಗಳಿಗೆ ಮಾಸಿಕ ರೂ.300, ಮಾಂಸದ ಅಂಗಡಿ, ಬಟ್ಟೆ ಮಾರಾಟ, ಚಪ್ಪಲಿ ಅಂಗಡಿ, ಟೀ ಸ್ಟಾಲ್, ಕ್ಲಿನಿಕ್, ಐಸ್ಕ್ರೀಮ್-ಜ್ಯೂಸ್ ಅಂಗಡಿ, ಇತರ ಉದ್ದಿಮೆಗಳಿಗೆ ಮಾಸಿಕ ರೂ. 100ನಿಗದಿಪಡಿಸಿ ಸರ್ವನುಮತದಿಂದ ಅಂಗೀಕರಿಸಲಾಯಿತು.

