ಮೂಡುಬಿದಿರೆಯಲ್ಲಿ ನಾದ ಧ್ಯಾನ ಚಕ್ರ , ಸಾವಿರಾರು ಮಂದಿ ಭಾಗಿ..!

0
25

ಮನಸ್ಸು, ದೇಹದ ಪ್ರಸನ್ನತೆಗೆ ಧ್ಯಾನ ಅಗತ್ಯ-ಡಾ.ಎಂ ಮೋಹನ ಆಳ್ವ

ಮೂಡುಬಿದಿರೆ : ಪಿರಮಿಡ್ ಸ್ಪಿರಿಚುವಲ್ ಸೊಸೈಟೀಸ್ ಮೂವ್ಮೆಂಟ್ (ಪಿಎಸ್‌ಎಸ್‌ಎಂ), ಬೆಂಗಳೂರು ಪಿರಮಿಡ್ ವಾಲ್ಡ್ ಫೌಂಡೇಶನ್ ಹಾಗೂ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸಹಯೋಗದಲ್ಲಿ‌ ಭಾನುವಾರ ನಾದ ಧ್ಯಾನ ಚಕ್ರ ಕಾರ್ಯಕ್ರಮವು ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್‌ನ ಕೃಷಿ ಸಿರಿ ಸಭಾಂಗಣದಲ್ಲಿ ನಡೆಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಏಕಾಗ್ರತೆ ಇದ್ದರೆ ಮತ್ತು ಸಂಪೂರ್ಣ ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯವಿದೆ ಎಂದರು. ಮನಸ್ಸು ಮತ್ತು ದೇಹ ಪ್ರಸನ್ನವಾಗಲು ಇಂತಹ ಧ್ಯಾನ ಪ್ರಸ್ತುತ ದಿನಗಳಲ್ಲಿ ಅತ್ಯಂತ ಅಗತ್ಯವಾಗಿದೆ.

ರೋಗ ಬಂದ ಮೇಲೆ ಆಲೋಚಿಸುವುದಕ್ಕಿಂತ, ರೋಗ ಬಾರದಂತೆ ನಿಯಂತ್ರಿಸಲು ಧ್ಯಾನದ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನ ಬಹಳ ಮುಖ್ಯವಾಗಿದ್ದು, ನಾದಧ್ಯಾನದಿಂದ ಅದು ಸಾಧ್ಯವಾಗುತ್ತದೆ. ಆರೋಗ್ಯ ವೃದ್ಧಿ ಹಾಗೂ ಮುಖ ಮತ್ತು ಕಣ್ಣುಗಳಲ್ಲಿ ಪ್ರಸನ್ನತೆ ಮೂಡಲು ಇಂತಹ ಧ್ಯಾನಗಳು ಸಹಕಾರಿಯಾಗಲಿವೆ. ಡಾ. ಅಯ್ಯಪ್ಪ ಪಿಂಡಿ ನೇತೃತ್ವದಲ್ಲಿ ಸಮಾನಮನಸ್ಕರು ಈ ಕಾರ್ಯಕ್ರಮಕ್ಕೆ ಆಗಮಿಸಿರುವುದರಿಂದ ಈ ಆವರಣದಲ್ಲಿ ಹೊಸ ಶಕ್ತಿ ತುಂಬಿದೆ ಎಂದು ಅಭಿಪ್ರಾಯಪಟ್ಟರು.

ಅಂತರಾಷ್ಟ್ರೀಯ ಧ್ಯಾನ ತರಬೇತುದಾರ ಡಾ. ಅಯ್ಯಪ್ಪ ಪಿಂಡಿ ಧ್ಯಾನದ ಮಹತ್ವ, ಮಾನಸಿಕ ನೆಮ್ಮದಿ ಮತ್ತು ಜೀವನ ಶೈಲಿಯ ಮೇಲಿನ ಪರಿಣಾಮಗಳ ಕುರಿತು ಮಾತನಾಡಿದರು. ಕಳೆದು 25 ವರ್ಷಗಳಿಂದ ಧ್ಯಾನದಿಂದ ಮನಶಾಂತಿ ಹಾಗೂ ಹೊಸ ಚೈತನ್ಯ ದೊರೆತಿದೆ ಎಂದು ಅನುಭವ ಹಂಚಿಕೊಂಡರು.

ಭಾರತಿ ಶೆಟ್ಟಿ, ಅನಿತಾ ಪಿಂಡಿ, ಡಾ.ವಿನಾಯಕ ಹೆಗ್ಡೆ, ರೇಖಾ ರವಿರಾಜ್ ಶೆಣೈ, ರೂಪಾ ಶಶಿಕಾಂತ್ ನಾಯಕ್, ಸಂಸ್ಥೆಯ ಕಾರ್ಯಕರ್ತರು ಮತ್ತು ಧ್ಯಾನ ಆಸಕ್ತರು ಉಪಸ್ಥಿತರಿದ್ದರು. ಮಮತಾ ಡಿ.ಜಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೆ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಆಗಮಿಸಿ ಧ್ಯಾನ ಹಾಗೂ ಆಧ್ಯಾತ್ಮಿಕ ಚಟುವಟಿಕೆಯಲ್ಲಿ ಭಾಗವಹಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ನಾದ ಧ್ಯಾನ, ಆನಾಪಾನಸತಿ ಧ್ಯಾನ, ಆಧ್ಯಾತ್ಮಿಕ ಉಪನ್ಯಾಸಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here