ಸುಳ್ಯ : ಗ್ರಾಮೀಣ ಭಾರತದ ಸಂಪರ್ಕ ಕ್ರಾಂತಿಯ ಹರಿಕಾರ, ‘ತೂಗು ಸೇತುವೆ ಸರದಾರ’ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅಲ್ಪ ದಿನಗಳ ಅಸೌಖ್ಯದಿಂದ ಇಂದು (ಜುಲೈ 7, 2026) ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಇತ್ತೀಚೆಗಷ್ಟೇ ಉತ್ತರ ಭಾರತದ ಪವಿತ್ರ ಚತುರ್ಧಾಮ ಯಾತ್ರೆಯನ್ನು ಮುಗಿಸಿ ಊರಿಗೆ ಮರಳಿದ್ದ ಅವರು, ದುರದೃಷ್ಟವಶಾತ್ ಇಂದು ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ, ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
150ಕ್ಕೂ ಹೆಚ್ಚು ತೂಗು ಸೇತುವೆಗಳ ನಿರ್ಮಾತೃ
ದುರ್ಗಮ ಗ್ರಾಮೀಣ ಭಾಗಗಳಲ್ಲಿ ನದಿ, ಹಳ್ಳಗಳನ್ನು ದಾಟಲು ಪರದಾಡುತ್ತಿದ್ದ ಹಳ್ಳಿಗರ ಬದುಕಿಗೆ ಗಿರೀಶ್ ಭಾರದ್ವಾಜ್ ಅವರು ಸಂಜೀವಿನಿಯಾಗಿದ್ದರು.
ಕರ್ನಾಟಕ, ಕೇರಳ, ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯಗಳ ಮೂಲೆ ಮೂಲೆಗಳಲ್ಲಿ ಯಾವುದೇ ಅತ್ಯಾಧುನಿಕ ಯಂತ್ರೋಪಕರಣಗಳಿಲ್ಲದೆ, ಸ್ಥಳೀಯ ಸಂಪನ್ಮೂಲ ಮತ್ತು ಜನಶಕ್ತಿಯನ್ನು ಬಳಸಿಕೊಂಡು ಸುಮಾರು 150ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿದ್ದರು.
ಹಳ್ಳಿಗಳ ಸಂಪರ್ಕದ ಕೊಂಡಿಯಾಗಿದ್ದ ಇವರನ್ನು ಜನರು ಪ್ರೀತಿಯಿಂದ ‘ಬ್ರಿಡ್ಜ್ ಮ್ಯಾನ್ ಆಫ್ ಇಂಡಿಯಾ’ ಮತ್ತು ‘ಸುಳ್ಯದ ವಿಶ್ವೇಶ್ವರಯ್ಯ’ ಎಂದು ಕರೆಯುತ್ತಿದ್ದರು.
ರಾಷ್ಟ್ರಪತಿಗಳಿಂದ ಒಲಿದಿದ್ದ ‘ಪದ್ಮಶ್ರೀ’ ಗೌರವ
ಗ್ರಾಮೀಣ ಭಾಗದ ಇವರ ನಿಸ್ವಾರ್ಥ ತಾಂತ್ರಿಕ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು 2017 ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಶ್ರೀ’ ನೀಡಿ ಗೌರವಿಸಿತ್ತು.
ಅಂದಿನ ಗೌರವಾನ್ವಿತ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಗಿರೀಶ್ ಭಾರದ್ವಾಜ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದರು.
ಇದರೊಂದಿಗೆ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಸೇರಿದಂತೆ ನೂರಾರು ಪ್ರಶಸ್ತಿಗಳು ಇವರಿಗೆ ಒಲಿದಿದ್ದವು.
ಪತ್ರಕರ್ತ ಮಂದಾರ ರಾಜೇಶ್ ಭಟ್ ಅವರ ಸೌಹಾರ್ದ ಭೇಟಿ ಸ್ಮರಣೆ

Box
ಇವರ ಅಗಲಿಕೆಯ ಕೆಲವೇ ದಿನಗಳ ಮುನ್ನ, ಅಂದರೆ ಕಳೆದ ಜೂನ್ 16, 2026 ರಂದು ‘ತುಳುನಾಡು ವಾರ್ತೆ’ ಪ್ರತಿನಿಧಿ, ಪತ್ರಕರ್ತ ಮಂದಾರ ರಾಜೇಶ್ ಭಟ್ ಅವರು ಭಾರದ್ವಾಜ್ ಅವರ ನಿವಾಸಕ್ಕೆ ಸೌಹಾರ್ದ ಭೇಟಿ ನೀಡಿ, ಕುಶಲೋಪರಿ ವಿಚಾರಿಸಿದ್ದರು. ಈ ಸೌಹಾರ್ದ ಭೇಟಿಯ ಸಂದರ್ಭದಲ್ಲಿ ಭಾರದ್ವಾಜ್ ಅವರು ತಮ್ಮ ಜೀವನದ ಪಯಣ ಹಾಗೂ ಯಾತ್ರೆಯ ಅನುಭವಗಳನ್ನು ಹಂಚಿಕೊಂಡಿದ್ದರು. ಅವರ ನಿಧನದ ಬೆನ್ನಲ್ಲೇ ಈ ಭೇಟಿಯ ನೆನಪುಗಳು ಈಗ ಅತ್ಯಂತ ಭಾವುಕ ಕ್ಷಣಗಳಾಗಿ ಉಳಿದುಕೊಂಡಿವೆ.
ಡಾ. ಗಿರೀಶ್ ಭಾರದ್ವಾಜ್ ಅವರ ನಿಧನಕ್ಕೆ ನಾಡಿನ ಗಣ್ಯರು, ಜನಪ್ರತಿನಿಧಿಗಳು ಹಾಗೂ ಗ್ರಾಮೀಣ ಜನತೆ ತೀವ್ರ ಕಂಬನಿ ಮಿಡಿದಿದ್ದಾರೆ. ಅವರು ನಿರ್ಮಿಸಿದ ಸೇತುವೆಗಳು ಮತ್ತು ಕೋಟ್ಯಂತರ ಜನರ ಮನಸ್ಸಿನಲ್ಲಿ ಅವರು ಮೂಡಿಸಿದ ಸಮಾಜಸೇವೆಯ ನೆನಪುಗಳು ಎಂದಿಗೂ ಶಾಶ್ವತವಾಗಿರಲಿವೆ.

