ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್,; ರೈಟ್ ಟ್ಯಾಕ್ಸ್ ಮೇಟ್ ಇಂಡಿಯಾ (ಪ್ರೈ) ಲಿಮಿಟೆಡ್ ವತಿಯಿಂದವಿದ್ಯಾರ್ಥಿವೇತನ ವಿತರಣೆ

0
4

ಕಾರ್ಕಳ : ರೈಟ್ ಟ್ಯಾಕ್ಸ್ ಮೇಟ್ ಇಂಡಿಯಾ ( ಪ್ರೈ) ಲಿಮಿಟೆಡ್ ಇದರ ಪ್ರಾಯೋಜಕತ್ವದಲ್ಲಿ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್, ಮೂಲಕ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ಸರಕಾರಿ ಪದವಿ ಪೂರ್ವ ಕಾಲೇಜು, ಕಾರ್ಕಳ ಇಲ್ಲಿ ನಡೆಯಿತು. ದ್ವಿತೀಯ ಪಿಯುಸಿ ವಿಭಾಗದ 12 ಹಾಗೂ ಎಸ್ ಎಸ್ ಎಲ್ ಸಿ ಯ 12 ವಿದ್ಯಾರ್ಥಿಗಳಿಗೆ ಅನುಕ್ರಮವಾಗಿ ತಲಾ ರೂ.10,000/- ಹಾಗೂ 5,000 ದಂತೆ ವಿದ್ಯಾರ್ಥಿ ವೇತನವನ್ನು ನೀಡಿ ಪುರಸ್ಕರಿಸಲಾಯಿತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ದೇವಿ ಪ್ರಸಾದ್ ಶೆಟ್ಟಿ ಅವರು ಆರ್ಥಿಕ ಸಮಸ್ಯೆಯಿಂದ ಯಾವುದೇ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಬಾರದು. ಶಿಕ್ಷಣಕ್ಕೆ ಸಹಾಯ ಮಾಡುವ ದಾನಿಗಳು ಸಾಕಷ್ಟು ಇದ್ದಾರೆ. ಅದನ್ನು ಬಳಸಿಕೊಂಡು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಿ ಎಂದರು. ಸರಕಾರಿ ಶಾಲೆಗಳಲ್ಲಿ ಉತ್ತಮ ಅರ್ಹತೆ ಇರುವ ಶಿಕ್ಷಕರಿದ್ದು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ರೈಟ್ ಟ್ಯಾಕ್ಸ್ ಮೇಟ್ ಇಂಡಿಯಾ ಪ್ರೈ ಲಿಮಿಟೆಡ್ ಇದರ ಪಾಲುದಾರರೂ, ವಿದ್ಯಾರ್ಥಿ ವೇತನದ ಸಂಪೂರ್ಣ ಮೊತ್ತ ರೂ.1 ಲಕ್ಷ 80 ಸಾವಿರ ನೀಡಿದ ಸಿ.ಎ. ಹರೀಶ್ ಕಾರ್ಕಳ ತನ್ನ ವಿದ್ಯಾರ್ಥಿ ಜೀವನದ ಅನುಭವಗಳನ್ನು ಮೆಲುಕು ಹಾಕುತ್ತಾ ವಿದ್ಯಾರ್ಥಿಗಳ ಪರಿಶ್ರಮ ಸತತ ಪ್ರಯತ್ನ ಹಾಗೂ ಶಿಕ್ಷಕರ ಪ್ರೇರಣೆಯಿದ್ದರೆ ಶಿಕ್ಷಣದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲೆ ಅನ್ನಪೂರ್ಣ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೌಢ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಗೌರವಾಧ್ಯಕ್ಷ ವಿಜಯ ಶೆಟ್ಟಿ,, ಕಾಲೇಜು ಅಭಿವೃದ್ಧಿ ಸಮಿತಿಯ ಕೋಶಾಧಿಕಾರಿ ನಿತ್ಯಾನಂದ ಪೈ,,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆರ್ಮುಂಡೆ ಇಲ್ಲಿನ ಶಿಕ್ಷಕ ಸಂತೋಷ್ ಶೆಟ್ಟಿ,,ಹಾಗೂ ಕುಕ್ಕುಂದೂರು ಗ್ರಾಮ ಪಂಚಾಯತ್ ನಿಕಟ ಪೂರ್ವ ಸದಸ್ಯ ಯೋಗೀಶ್ ಸಾಲ್ಯಾನ್ , ಕಾಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಂ ಸಿ ಯ ಮಾಜಿ ಅಧ್ಯಕ್ಷ ವೈಕುಂಠ ಶೆಣೈ ಹಾಗೂ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಾಲೇಜಿನ ವಿದ್ಯಾರ್ಥಿನಿ ಸಂಜನಾ ಪಿ ಪ್ರಾರ್ಥಿಸಿದರು. ವಸಂತ್ ಎಂ. ನಿರೂಪಿಸಿ ಸ್ವಾಗತಿಸಿದರು. ಉಪನ್ಯಾಸಕ ಸದಾನಂದ ವಂದಿಸಿದರು.

LEAVE A REPLY

Please enter your comment!
Please enter your name here