ಬೀದಿ ನಾಯಿಗಳಿಗಾಗಿ ಆಶ್ರಯ ತಾಣ ಶೀಘ್ರ ಪ್ರಾರಂಭ

0
79

ಉಡುಪಿ: ಜಿಲ್ಲೆಯಲ್ಲಿ ಬೀದಿ ನಾಯಿಗಳ ಸಂಖ್ಯೆ 18,500 ರಷ್ಟು ಇದ್ದು, ಈಗಾಗಲೇ ನಾಯಿಗಳ ಆಶ್ರಯ ತಾಣಕ್ಕಾಗಿ ಉಡುಪಿ ನಗರ ಭಾಗದಲ್ಲಿ ಒಂದು ಎಕರೆ ಜಾಗ ಗುರುತಿಸಲಾಗಿದ್ದು, ಇಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಶೀಘ್ರದಲ್ಲೇ ಸುಸಜ್ಜಿತ ಆಶ್ರಯ ತಾಣ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು.

ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಮುಂದಿನ ಮೂರು ದಿನಗಳಲ್ಲಿ ತಾಲೂಕು ಮತ್ತು ನಗರ ಪ್ರದೇಶಕ್ಕೆ ಒಂದರAತೆ ಆಶ್ರಯ ತಾಣ ನಿರ್ಮಿಸಲು ಬೇಕಾದ ಜಾಗ ಗುರುತಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಬೀದಿನಾಯಿಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸುವಂತೆ ಸೂಚಿಸಿದರು.

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ, ರೇಬಿಸ್ ಲಸಿಕೆ ನೀಡುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಶಸ್ತç ಚಿಕಿತ್ಸೆಯ ನಂತರ ನಾಯಿಗಳನ್ನು ಅದೇ ಸ್ಥಳಕ್ಕೆ ವಾಪಾಸು ಬಿಡಬೇಕು. ರೇಬೀಸ್ ಕಾಯಿಲೆ, ಸಂಶಯಾಸ್ಪದ ರೋಗ ಪೀಡಿತ ಆಕ್ರಮಣಕಾರಿ ನಡತೆ ಇರುವ ನಾಯಿಗಳನ್ನು ಆಶ್ರಯ ತಾಣಗಳಿಗೆ ಬಿಡಬೇಕು. ಸಹಾಯವಾಣಿ ಸ್ಥಾಪನೆ ಹಾಗೂ ಪ್ರದರ್ಶನವನ್ನು ಮಾಡಬೇಕು. ಆಶ್ರಯ ತಾಣಗಳಲ್ಲಿ ಸ್ವಚ್ಚತೆ, ಆಹಾರ, ನೀರು, ನೆರಳು,ಪಶು ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಬೇಕು ಎಂದ ಅವರು, ಪ್ರಾಣಿಗಳ ಹಾಗೂ ನಾಗರಿಕರ ಸುರಕ್ಷತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಈಗಾಗಲೇ ಉಡುಪಿ ನಗರಸಭಾ ವ್ಯಾಪ್ತಿಯ 10 ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಜಾಗಗಳನ್ನು ಗುರುತಿಸಲಾಗಿದೆ. ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಸಹ ಆದಷ್ಟು ಶೀಘ್ರವಾಗಿ ಜಾಗ ಗುರುತಿಸುವ ಕೆಲಸವಾಗಬೇಕು ಎಂದ ಅವರು, ಎಲ್ಲರಿಗೂ ಗುರುತಿನ ಚೀಟಿ ನೀಡಿ ನಿಗದಿಪಡಿಸಿದ ಜಾಗದಲ್ಲೆ ಆಹಾರ ನೀಡುವಂತೆ ಕ್ರಮ ವಹಿಸಬೇಕು. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.
ಬೀಡಾಡಿ ಪ್ರಾಣಿಗಳನ್ನು ಆಶ್ರಯ ತಾಣಗಳಿಗೆ ಅಥವಾ ಗೋಶಾಲೆಗಳಿಗೆ ಸ್ಥಳಾಂತರಿಸಬೇಕು. ಹೆದ್ದಾರಿಗಳಲ್ಲಿ ಸ್ಪಷ್ಟವಾಗಿ ಸಹಾಯವಾಣಿ ಸಂಖ್ಯೆಗಳನ್ನು ಪ್ರದರ್ಶಿಸಬೇಕು. ಸದರಿ ಸಂಖ್ಯೆಗಳನ್ನು ಎನ್.ಹೆಚ್.ಎ.ಐ ಕಂಟ್ರೋಲ್ ರೂಂ ಮತ್ತು ಸ್ಥಳೀಯ ಪೊಲೀಸ್ ಇಲಾಖೆಯ ಕಂಟ್ರೋಲ್ ರೂಂ ಗೆ ಲಿಂಕ್ ಮಾಡಬೇಕು ಎಂದರು.

ನಾಯಿ ಕಡಿತದಿಂದ ಉಂಟಾಗಬಹುದಾದ ರೇಬೀಸ್ ರೋಗದ ಅಪಾಯಗಳು ಮತ್ತು ಲಸಿಕೆಯ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರೊಂದಿಗೆ ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ರೇಬೀಸ್ ನಿರೋಧಕ ಲಸಿಕೆಯ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ಸಿ ರೆಡ್ಡಪ್ಪ, ಪೌರಾಯುಕ್ತ ಮಹಾಂತೇಶ ಹಂಗರಗಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here