ಸೋಮವಾರಪೇಟೆ ಸಂತೆಮಳದಲ್ಲಿ ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತ, ಅಲ್ಲೇ ಮಲಗಿಕೊಂಡಿದ್ದ ಸೋನು ಎಂಬ ಅನಾಥನನ್ನು ಟೌನ್ ಪಂಚಾಯಿತಿ ಸಹಕಾರದೊಂದಿಗೆ ಬೆಂಗಳೂರು ಆಟೋ ರಾಜ ಸಂಸ್ಥೆಯ ಅನಾಥಾಶ್ರಮಕ್ಕೆ ಸೇರಿಸುವ ಕಾರ್ಯವನ್ನು ಕರವೇ ಅಧ್ಯಕ್ಷ ಶಿವರಾಮಗೌಡ ಅವರು ನೆರವೇರಿಸಿದ್ದಾರೆ.

ಸಂತೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಈ ವ್ಯಕ್ತಿಯನ್ನು ಮೊದಲಿಗೆ ವರ್ತಕರಾದ ಸಂತೋಷ ಅವರು ಗಮನಿಸಿ, ಕರವೇಗೆ ಫೋನ್ ಮಾಡಿ ಮಾಹಿತಿ ನೀಡಿದರು. ನಂತರ ಅವರ ಮನವಿಯ ಮೇರೆಗೆ ಟೌನ್ ಪಂಚಾಯಿತಿಗೆ ದೂರು ಸಲ್ಲಿಸಲಾಯಿತು. ಮನವಿಯ ಆಧಾರದ ಮೇಲೆ ಕರವೇ ಅಧ್ಯಕ್ಷರು ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದರು.
ಪೊಲೀಸ್ ಅನುಮತಿ ಪಡೆದು, ಟೌನ್ ಪಂಚಾಯಿತಿ ಸಿಬ್ಬಂದಿಯ ಸಹಕಾರದಿಂದ ಅನಾರೋಗ್ಯದ ವ್ಯಕ್ತಿಗೆ ಸ್ನಾನ ಮಾಡಿಸಿ, ಅಗತ್ಯ ಚಿಕಿತ್ಸೆ ನೀಡಿ, ಸುರಕ್ಷಿತವಾಗಿ ಅನಾಥಾಶ್ರಮಕ್ಕೆ ಕಳಿಸಲಾಗಿದೆ.
“ಮಾನವೀಯ ದೃಷ್ಟಿಯಿಂದ ಯಾರೂ ರಸ್ತೆಬದಿಯಲ್ಲಿ ಅನಾಥರಂತೆ ಮಲಗಬಾರದು. ಕರವೇ ಸದಾ ಸಮಾಜಸೇವೆಗೆ ಸಿದ್ಧ,” ಎಂದು ಕರವೇ ಅಧ್ಯಕ್ಷ ಶಿವರಾಮಗೌಡ ತಿಳಿಸಿದ್ದಾರೆ. ಈ ಕಾರ್ಯದಲ್ಲಿ ಸಹಕರಿಸಿದ ಟೌನ್ ಪಂಚಾಯಿತಿ ಸಿಬ್ಬಂದಿ, ವಾಹನ ಸೌಲಭ್ಯ ಒದಗಿಸಿದ ಅಧಿಕಾರಿಗಳು ಹಾಗೂ ಸಹಕರಿಸಿದ ಎಲ್ಲರಿಗೂ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

