ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ (ರಿ.), ಕೆಮ್ಮಣ್ಣು–ನಿಟ್ಟೆ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಿಟ್ಟೆ ಕೆಮ್ಮಣ್ಣು ಕಮಲಗುಡ್ಡ ಶೆಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು.
“ಕಳೆದುಹೋದ ದಿನಗಳು ಮತ್ತೆ ಜೀವಂತವಾಗುವ, ಬಾಡಿದ ಸ್ನೇಹ ಮತ್ತೆ ಚಿಗುರುವ ಹಾಗೂ ಹಳೆಯ ದಿನಗಳನ್ನು ನೆನೆದು ಮತ್ತೆ ಕ್ರಿಯಾಶೀಲರಾಗುವ” ಶೀರ್ಷಿಕೆಯೊಂದಿಗೆ ಹೊಸ ಕಾರ್ಯಕಾರಿ ಸಮಿತಿ ರಚನೆಗೊಂಡು ಅಧಿಕಾರ ಹಸ್ತಾಂತರ ನಡೆಯಿತು.
ಕುಮಾರಿ ಸೌಮ್ಯ ಮತ್ತು ನಿಧಿಶ ಪ್ರಾರ್ಥನೆ ನೆರವೇರಿಸಿದರು. ಕಳೆದ ಸಾಲಿನ ಅಧ್ಯಕ್ಷ ಡಾ. ಪ್ರಶಾಂತ್ ಕುಮಾರ್ ಕೆ. ಸ್ವಾಗತಿಸಿ ತಮ್ಮ ಅಧ್ಯಕ್ಷೀಯ ಅವಧಿಯ ಅನುಭವಗಳನ್ನು ಹಂಚಿಕೊಂಡರು. ಪೂರ್ವಾಧ್ಯಕ್ಷ ಡಾ. ರಘುನಂದನ್ ಕೆ.ಆರ್ ಸಂಸ್ಥೆಯ ಹುಟ್ಟು ಮತ್ತು ಬೆಳವಣಿಗೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಶ್ರೀ ಕೃಷ್ಣಾನಂದ ರಾವ್ 2023–25ನೇ ಸಾಲಿನ ವರದಿಯನ್ನು ಮಂಡಿಸಿದರು.
ಪದಪ್ರಧಾನ ಅಧಿಕಾರಿಗಳಾಗಿ ಹೋಟೆಲ್ ರತ್ನಾ ಫಾರೆವರ್ನ ರೊ. ಶ್ರೀ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದು, ಗ್ರಾಮೀಣ ಭಾಗದಲ್ಲಿ ಉತ್ಕೃಷ್ಟ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯನ್ನು ಅಭಿನಂದಿಸಿ, ನೂತನ ಕಾರ್ಯಕಾರಿ ಸಮಿತಿಗೆ ಶುಭಾಶಯಗಳನ್ನು ಕೋರಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸ್ಥಳೀಯ ಪಂಚಾಯತ್ ಪ್ರತಿನಿಧಿ ಶ್ರೀ ಸಂತೋಷ್ ಶೆಟ್ಟಿ (ಪೊರ್ಕಳಗುತ್ತು) ತಮ್ಮ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಎಲ್ಲರ ಸಹಕಾರವನ್ನು ವಿನಂತಿಸಿದರು.
ಈ ಸಂದರ್ಭದಲ್ಲಿ ಸ್ಥಾಪಕಾಧ್ಯಕ್ಷ ಡಾ. ದಿಲೀಪ್ ಕುಮಾರ್, ಪೂರ್ವಾಧ್ಯಕ್ಷರಾದ ಡಾ. ರಘುನಂದನ್ ಕೆ.ಆರ್, ಶ್ರೀ ಸುರೇಶ್ ಆಚಾರ್ಯ, ಡಾ. ಪ್ರಶಾಂತ್ ಕುಮಾರ್ ಹಾಗೂ ಹಿಂದಿನ ಸಾಲಿನ ಕಾರ್ಯದರ್ಶಿಗಳಾದ ಶ್ರೀ ಸುಧಾಕರ್ ಮಡಿವಾಳ ಮತ್ತು ಶ್ರೀ ಕೃಷ್ಣಾನಂದ ರಾವ್ ಅವರನ್ನು ಅಭಿನಂದಿಸಲಾಯಿತು.
ಹಿರಿಯ ಸದಸ್ಯರಾದ ಶ್ರೀ ಸತೀಶ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ಪ್ರಕಾಶ್ ಸಾಲ್ಯಾನ್, ಕ್ರೀಡಾ ಕಾರ್ಯದರ್ಶಿ ಶ್ರೀ ಸಾಹಿಲ್ ಎಸ್. ಪೂಜಾರಿ, ಕೋಶಾಧಿಕಾರಿ ಶ್ರೀ ವಿಠಲ್ ಆಚಾರ್ಯ ಸೇರಿದಂತೆ ಇತರ ಸದಸ್ಯರು ಸಹಕರಿಸಿದರು.

