ವರದಿ : ಮಂದಾರ ರಾಜೇಶ್ ಭಟ್
ಪುತ್ತೂರು : ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಸಂಭ್ರಮಕ್ಕೆ ಈ ಬಾರಿಯೂ ಕಲಾ ಮೆರುಗು ಸಿಗಲಿದೆ. ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ದೇವಸ್ಥಾನದ ಸಾಂಸ್ಕೃತಿಕ ವೇದಿಕೆಯಲ್ಲಿ ತನ್ನ ವಿಶಿಷ್ಟ ಛಾಪು ಮೂಡಿಸುತ್ತಾ ಬಂದಿರುವ ‘ವಾಯ್ಸ್ ಆಫ್ ಆರಾಧನಾ’ ತಂಡವು ಈ ವರ್ಷವೂ ಅದ್ದೂರಿ “ಸಾಂ ಸ್ಕೃತಿಕ ವೈಭವ” ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದೆ.
ಸ್ಥಳೀಯ ಪ್ರತಿಭೆಗಳ ಅನಾವರಣ
ಕೇವಲ ಮನೋರಂಜನೆಗೆ ಸೀಮಿತವಾಗದೆ, ಗ್ರಾಮೀಣ ಭಾಗದ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವುದು ‘ವಾಯ್ಸ್ ಆಫ್ ಆರಾಧನಾ’ ತಂಡದ ಮುಖ್ಯ ಉದ್ದೇಶ. ಇಲ್ಲಿ ವೇದಿಕೆ ಏರಿದ ಎಷ್ಟೋ ಪ್ರತಿಭೆಗಳು ಇಂದು ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಮಿಂಚುತ್ತಿರುವುದು ತಂಡದ ಸಾಧನೆಗೆ ಸಾಕ್ಷಿಯಾಗಿದೆ.
ಈ ಬಾರಿಯ ಕಾರ್ಯಕ್ರಮದಲ್ಲೂ ಶ್ರೇಯಾ ಸುಳ್ಯ, ರಿಶಾನಿ ಉಪ್ಪಿನಂಗಡಿ ಸೇರಿದಂತೆ ಹತ್ತಕ್ಕೂ ಹೆಚ್ಚು ಉದಯೋನ್ಮುಖ ಕಲಾವಿದರು ತಮ್ಮ ಕಲಾ ಪ್ರದರ್ಶನ ನೀಡಲಿದ್ದಾರೆ.
ಕಾರ್ಯಕ್ರಮದ ವಿವರ
ದಿನಾಂಕ 15-04-2026ರಂದು ಸಂಜೆ 6:30ರಿಂದ ದೇವಸ್ಥಾನದ ಪ್ರಾಂಗಣದಲ್ಲಿ ಗಾಯನ ಮತ್ತು ನೃತ್ಯ ವೈವಿಧ್ಯಗಳು ಅನಾವರಣಗೊಳ್ಳಲಿವೆ. ಶಾಸ್ತ್ರೀಯ ನೃತ್ಯದಿಂದ ಹಿಡಿದು ಜಾನಪದ ಸೊಗಡಿನವರೆಗಿನ ವಿವಿಧ ಕಲಾ ಪ್ರಕಾರಗಳು ಭಕ್ತಾದಿಗಳ ಕಣ್ಮನ ಸೆಳೆಯಲಿವೆ.
“ಕಲೆ ಎನ್ನುವುದು ಸಂಸ್ಕೃತಿಯ ಪ್ರತಿಬಿಂಬ. ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಾಗ ಮಾತ್ರ ನಮ್ಮ ಮಣ್ಣಿನ ಕಲೆ ಮತ್ತು ಸಂಸ್ಕಾರ ಮುಂದಿನ ಪೀಳಿಗೆಗೆ ಸಶಕ್ತವಾಗಿ ಹಸ್ತಾಂತರವಾಗಲು ಸಾಧ್ಯ. ನಮ್ಮೂರಿನ ಪ್ರತಿಭೆಗಳನ್ನು ಬೆಳೆಸೋಣ, ಸಾಂಸ್ಕೃತಿಕ ಪರಂಪರೆಯನ್ನು ಉಳಿಸೋಣ.”

