ಬದಿಯಡ್ಕ: ಕಾಸರಗೋಡಿನ ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್, ಸಂದ್ಯಾರಾಣಿ ಟೀಚರ್ ಅವರ ಸ್ಥಾಪಕ ಸಂಚಾಲಕತ್ವದ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ನೂತನವಾದ ‘ಅರಿವು’ ಯೋಜನೆಗೆ 2025 ಮೇ. 10ರಂದು ಅಪರಾಹ್ನ 2 ಗಂಟೆಗೆ ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠ ಶಿಕ್ಷಣ ಸಂಸ್ಥೆಯಲ್ಲಿ ಚಾಲನೆ ನೀಡಲಾಗುವುದು. ಕಾಸರಗೋಡು ಜಿಲ್ಲೆಯ ಕನ್ನಡಿಗ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಸಕಾಲಿಕವಾಗಿ ಅಗತ್ಯ ವಿಚಾರಗಳಲ್ಲಿ ಸೂಕ್ತ ಮಾಹಿತಿ ಹಾಗೂ ಮಾರ್ಗದರ್ಶನ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಂತೆ ಸಂಘಟನೆಯ ಆಶ್ರಯದಲ್ಲಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾರ್ಗದರ್ಶನ, ಉದ್ಯೋಗಾಕಾಂಕ್ಷಿಗಳಿಗೆ ಕೇರಳ ಲೋಕ ಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾದ ಪೂರ್ವಸಿದ್ಧತೆ ಹಾಗೂ ಮಾರ್ಗದರ್ಶನ ನೀಡಲಾಗುವುದು. ಈ ಯೋಜನೆಯನ್ನು ಶಿಕ್ಷಣ ತಜ್ಞ ವಿ. ಬಿ. ಕುಳಮರ್ವ ಉದ್ಘಾಟಿಸುವರು. ನಿವೃತ್ತ ಪ್ರಾಂಶುಪಾಲ ಡಾ. ಬೇ. ಸಿ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು. ಕಾಸರಗೋಡಿನ ವಕೀಲ ಸತ್ಯನಾರಾಯಣ ತಂತ್ರಿ ಅವರು, ‘ಎಸ್. ಎಸ್. ಎಲ್. ಸಿ ನಂತರ ಮುಂದೇನು… ?’ ಎಂಬ ವಿಚಾರದಲ್ಲಿ, ಎಸ್. ಎಸ್. ಎಲ್. ಸಿ ನಂತರ ವಿದ್ಯಾರ್ಥಿಗಳು ಪಡೆಯಬೇಕಾದ ಶಿಕ್ಷಣ ಹಾಗೂ ವಿವಿಧ ಅವಕಾಶಗಳ ಬಗ್ಗೆ ಮಾಹಿತಿ ನೀಡುವರು. ಡಾ. ಕೆ ವಾಮನ್ ರಾವ್ ಬೇಕಲ್ ಪ್ರಾಸ್ತಾವಿಕವಾಗಿ ಮಾತನಾಡುವರು. ಶ್ರೀ ಭಾರತಿ ವಿದ್ಯಾಪೀಠದ ಪಿಟಿಎ ಅಧ್ಯಕ್ಷ ಅನಂತಕೃಷ್ಣ ಚಡಗ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷ ಸಾಹಿತಿ ವಿರಾಜ್ ಅಡೂರು, ಕಾರ್ಯದರ್ಶಿ ದೇವರಾಜ ಆಚಾರ್ಯ ಸೂರಂಬೈಲು, ಸಂಘಟನಾ ಕಾರ್ಯದರ್ಶಿ ಶಾರದಾ ಎಸ್ ಭಟ್ ಕಾಡಮನೆ, ಶಿಕ್ಷಕ ಗಣೇಶ್ ಭಾಗವಹಿಸುವರು. ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಘಟಕದ ಅಧ್ಯಕ್ಷ ವಿರಾಜ್ ಅಡೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಸ್. ಎಸ್. ಎಲ್. ಸಿ ನಂತರ ಮುಂದೇನು….? ಬದಿಯಡ್ಕದಲ್ಲಿ ವಿಶೇಷ ಮಾರ್ಗದರ್ಶನ ಸಭೆ ಮೇ. 10ಕ್ಕೆ
RELATED ARTICLES